ಪ್ರತಿಭಟಿಸುತ್ತಿದ್ದ ರೈತರ ಮೇಲೆ ಸಚಿವರ ಬೆಂಗಾವಲು ಕಾರು: ಯುಪಿ ಹಿಂಸಾಚಾರಕ್ಕೆ 8 ಬಲಿ!

By Suvarna NewsFirst Published Oct 4, 2021, 7:50 AM IST
Highlights

* ಯುಪಿ ರೈತ ಹಿಂಸಾಚಾರಕ್ಕೆ 8 ಬಲಿ

* ಯುಪಿ ಡಿಸಿಎಂ ಭೇಟಿ ವಿರೋಧಿಸಿ ರೈತರ ಪ್ರತಿಭಟನೆ

* ಪ್ರತಿಭಟನಾಕಾರರ ಮೇಲೆ ಹರಿದ ಸಚಿವರ ಬೆಂಗಾವಲು ಕಾರು

* ಕಾರಿಗೆ ಸಿಲುಕಿ 4 ಸಾವು, ರೊಚ್ಚಿಗೆದ್ದ ರೈತರಿಗೆ ಹಿಂಸಾಚಾರ, 4 ಬಲಿ

* ಇಂದು ದೇಶವ್ಯಾಪಿ ಡಿಸಿ ಕಚೇರಿಗಳ ಮುಂದೆ ಕಿಸಾನ್‌ ಮೋಚ್ರಾ ಪ್ರತಿಭಟನೆ

ಲಖೀಂಪುರ ಖೇರಿ(ಅ.04): ಉತ್ತರಪ್ರದೇಶದ(Uttar Pradesh) ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ(Keshav Prasad Maurya) ಅವರ ಭೇಟಿ ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪ(Violence) ಪಡೆದು 8 ಜನರು ಸಾವಿಗೆ ಕಾರಣವಾದ ಘಟನೆ ಭಾನುವಾರ ಇಲ್ಲಿ ನಡೆದಿದೆ. ಸಾವನ್ನಪ್ಪಿದವರಲ್ಲಿ ರೈತರು, ಬಿಜೆಪಿ ಕಾರ್ಯಕರ್ತರು ಮತ್ತು ವಾಹನ ಚಾಲಕರೊಬ್ಬರು ಸೇರಿದ್ದಾರೆ. ಈ ನಡುವೆ ಘಟನೆ ಕುರಿತು ರೈತರು ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ ಕುಮಾರ ಮಿಶ್ರಾ(nion MoS Ajay Misra) ಭಿನ್ನ ಹೇಳಿಕೆ ನೀಡಿದ್ದಾರೆ.

ಈ ಮಧ್ಯೆ ಭಾನುವಾರದ ಹಿಂಸಾಚಾರ ಖಂಡಿಸಿ ಸಂಯುಕ್ತ ಕಿಸಾನ್‌ ಮೋರ್ಚಾ(Kisan Morcha), ಸೋಮವಾರ ದೇಶವ್ಯಾಪಿ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಗೆ ಕರೆ ಕೊಟ್ಟಿದೆ. ಮತ್ತೊಂದೆಡೆ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ರೈತರ ಮೇಲೆ ವಾಹನ ಹರಿಸಿದ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಕಾಂಗ್ರೆಸ್‌(Congress) ಮತ್ತು ಸಮಾಜವಾದಿ ಪಕ್ಷಗಳು(Samajwadi Party) ಒತ್ತಾಯಿಸಿವೆ. ಅಲ್ಲದೆ ಘಟನಾ ಸ್ಥಳಕ್ಕೆ ಸೋಮವಾರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ(Priyanka Vadra), ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ಸಿಂಗ್‌ ಯಾದವ್‌(Akhilesh Singh yadav) ಭೇಟಿ ನೀಡಲು ನಿರ್ಧರಿಸಿದ್ದಾರೆ.

ಏನಾಯ್ತು?:

ಡಿಸಿಎಂ ಕೇಶವ್‌ ಪ್ರಸಾದ್‌ ಮೌರ್ಯ ಭಾನುವಾರ ಲಖೀಂಪುರ ಖೇರಿ(Lakhimpur Kheri) ಜಿಲ್ಲೆಯ ಬನ್‌ಬೀರ್‌ಪುರ ಗ್ರಾಮಕ್ಕೆ ಭೇಟಿ ನೀಡಲು ಉದ್ದೇಶಿಸಿದ್ದರು. ಈ ಗ್ರಾಮವು, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‌ಕುಮಾರ ಮಿಶ್ರಾ ಅವರ ಸ್ವಗ್ರಾಮ ಕೂಡಾ ಹೌದು. ಆದರೆ ಕೃಷಿ ಕಾಯ್ದೆ ವಿರೋಧಿಸುತ್ತಿರುವ ರೈತರ ಗುಂಪೊಂದು ಮೌರ್ಯ ಅವರ ಭೇಟಿ ವಿರೋಧಿ ಪ್ರತಿಭಟನೆ ನಡೆಸುತ್ತಿತ್ತು. ಈ ಪ್ರತಿಭಟನೆ ವೇಳೆಯೇ ಬಿಜೆಪಿ ನಾಯಕರಿಗೆ ಸೇರಿದ್ದು ಎನ್ನಲಾದ ಎರಡು ವಾಹನಗಳು ರೈತರ ಮೇಲೆ ಹಾದು ಹೋಗಿದ್ದು, ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ರೈತರು ಆರೋಪಿಸಿದ್ದಾರೆ. ಜೊತೆಗೆ ಈ ಪೈಕಿ ಒಂದು ವಾಹನದಲ್ಲಿ ಕೇಂದ್ರ ಸಚಿವ ಮಿಶ್ರಾ ಅವರ ಪುತ್ರ ಕೂಡಾ ಇದ್ದರು ಎಂದು ದೂರಿವೆ.

ಆದರೆ ರೈತರ ಆರೋಪವನ್ನು ಕೇಂದ್ರ ಸಚಿವ ಮಿಶ್ರಾ ತಳ್ಳಿಹಾಕಿದ್ದಾರೆ. ಘಟನೆ ನಡೆದಾಗ ನನ್ನ ಪುತ್ರ ವಾಹನದಲ್ಲಿ ಇರಲಿಲ್ಲ. ಎರಡು ವಾಹನಗಳು ಗ್ರಾಮಕ್ಕೆ ತೆರಳುವ ವೇಳೆ ಗುಂಪೊಂದು ಕಾರಿನ ಮೇಲೆ ಕಲ್ಲಿನಿಂದ ದಾಳಿ ನಡೆಸಿದೆ. ಈ ವೇಳೆ ಚಾಲಕನ ಆಯ ತಪ್ಪಿ ಕಾರು ಪಲ್ಟಿಹೊಡೆದು, ಅದರಡಿ ಸಿಕ್ಕಿ ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಬಳಿಕ ರೈತರ ಗುಂಪಿನಲ್ಲಿದ್ದ ದುಷ್ರ್ಕರ್ಮಿಗಳು ಕಾರಿಗೆ ಬೆಂಕಿ ಅದರಲ್ಲಿದ್ದ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

click me!