
ನವದೆಹಲಿ (ಏ.03) ಕೇಂದ್ರ ಚುನಾವಣಾ ಆಯೋಗ ಮತದಾನ ಕುರಿತು ಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದೆ. ಮುಂಬರುವ ವಿಧಾನಸಭೆ ಚುನಾವಣೆ, ಉಪ ಚುನಾವಣೆಯ ಮತದಾನ ದಿನ ಎಲ್ಲಾ ಉದ್ಯೋಗಿಗಳು, ದಿನಕೂಲಿ ನೌಕರರಿಗೆ ವೇತನ ಸಹಿತ ರಜೆ ಘೋಷಣೆ ಮಾಡಿದೆ. ಪೀಪಲ್ ಆ್ಯಕ್ಟ್ 1951 ಅಢಿಯಲ್ಲಿ 135ಬಿ ಪ್ರಕಾರ ಎಲ್ಲಾ ಉದ್ಯೋಗಿಗಳು, ಕೈಗಾರಿಕೆ ವಲಯ, ಸರ್ಕಾರಿ, ಖಾಸಗಿ, ದಿನಕೂಲಿ ನೌಕರರಿಗೆ ವೇತನ ಸಹಿತ ರಜೆ ಘೋಷಿಸಿದೆ.
ಚುನಾವಣಾ ಆಯೋಗ ಈಗಾಗಲೇ ಮತದಾನ ಶೇಕಡಾವಾರು ಹೆಚ್ಚಿಸಲು ಹಲವು ವಿನೂತ ಪ್ರಯೋಗ ಮಾಡಿದೆ. ಈ ಬಾರಿ ಮಹತ್ವದ ನಿರ್ಧಾರದ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಖಾಸಗಿ ಕಂಪನಿಗಳು, ಸರ್ಕಾರಿ ವಲಯದಲ್ಲಿ, ಕೈಗಾರಿಕೆ, ದಿನಗೂಲಿ ನೌಕರರು ಸೇರಿದಂತೆ ಹಲವೆಡೆ ಮತದಾನ ದಿನ ರಜಾ ದಿನವಾಗಿರುವುದಿಲ್ಲ. ಕೆಲ ಕಂಪನಿಗಳು ಸ್ವಯಂ ಪ್ರೇರಿತವಾಗಿ ಮತದಾನಕ್ಕೆ ರಜೆ ನೀಡುತ್ತದೆ. ಇನ್ನು ಮುಂದೆ ಕಡ್ಡಾಯವಾಗಿ ರಜೆ ಘೋಷಿಸಲು ಚುನಾಣಾ ಆಯೋಗ ಸೂಚಿಸಿದೆ.
ಪಂಚ ರಾಜ್ಯಗಳ ಚುನಾವಣೆ ಜೊತೆಗೆ ಕರ್ನಾಟಕದಲ್ಲಿ ಎರಡು ಕ್ಷೇತ್ರಗಳ ಉಪ ಚುನಾವಣೆ ನಡೆಯಲಿದೆ. ದಾವಣೆಗೆರೆ ದಕ್ಷಿಣಕ್ಷೇತ್ರ, ಹಾಗೂ ಬಾಗಲಕೋಟೆ ಕ್ಷೇತ್ರದಲ್ಲಿ ಎಪ್ರಿಲ್ 9ಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಎರಡು ಕ್ಷೇತ್ರದ ಜನರಿಗೆ ಎಪ್ರಿಲ್ 9 ರಂದು ಮತದಾನಕ್ಕೆ ರಜೆ ಸಿಗಲಿದೆ. ಉಪ ಚುನಾವಣೆಯ ಮತದಾನ ದಿನವೂ ರಜೆ ಘೋಷಿಸಲು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಈ ನಿರ್ಧಾರ ಮೂಲಕ ಮತದಾನದಿಂದ ಯಾರೂ ವಂಚಿತರಾಗದಂತೆ ತಡೆಯಲು ಚುನಾವಣಾ ಆಯೋಗ ಮುಂದಾಗಿದೆ. ಪಂಚ ರಾಜ್ಯಗಳ ಚುನಾವಣೆ ಹತ್ತಿರಬರುತ್ತಿದ್ದಂತೆ ಈ ಘೋಷಣೆ ಮಾಡಲಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಚುನಾವಣೆ ಸಮೀಪಿಸುತ್ತಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗ ಈ ಘೋಷಣೆ ಮಾಡಿದೆ.
ಯಾವುದೇ ಕಂಪನಿ ಉದ್ಯೋಗಿಗಳಿಗೆ, ನೌಕರರಿಗೆ, ಕೂಲಿ ಕೆಲಸಗಾರರಿಗೆ ವೇತನ ಸಹಿತ ರಜೆ ನೀಡದೇ ಇದ್ದರೆ ದುಬಾರಿ ದಂಡದ ಶಿಕ್ಷೆ ವಿಧಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಎಚ್ಚರಿಸಿದೆ. ಮತದಾನ ಮಾಡಲು ಉದ್ಯೋಗಿಗೆ ವೇತನ ಸಹಿತ ರಜೆ ನೀಡುವುದು ಕಡ್ಡಾಯವಾಗಿದೆ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ