
ನವದೆಹಲಿ (ಏ.30): ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಹಾಗೂ ಭಾರತೀಯ ನೌಕಾಪಡೆಯು ಬುಧವಾರ ಬಂಗಾಳಕೊಲ್ಲಿಯಲ್ಲಿ ಶಾರ್ಟ್ ರೇಂಜ್ ನೌಕಾ ವಿರೋಧಿ ಕ್ಷಿಪಣಿಯ (Naval Anti-Ship Missile) ಯಶಸ್ವಿ ಪರೀಕ್ಷೆ ನಡೆಸಿವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ನಿಂದ ಕೆಲವೇ ಸೆಕೆಂಡುಗಳ ಅಂತರದಲ್ಲಿ ಎರಡು ಕ್ಷಿಪಣಿಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಒಡಿಶಾದ ಚಂಡೀಪುರ ಪರೀಕ್ಷಾ ಕೇಂದ್ರದ ರೇಡಾರ್ ಮತ್ತು ಎಲೆಕ್ಟ್ರೋ-ಆಪ್ಟಿಕಲ್ ಸಿಸ್ಟಮ್ಗಳ ಮೂಲಕ ಕ್ಷಿಪಣಿಗಳ ಪಥವನ್ನು ಪತ್ತೆಹಚ್ಚಲಾಗಿದ್ದು, ಎರಡೂ ಕ್ಷಿಪಣಿಗಳು ಸಮುದ್ರದಲ್ಲಿದ್ದ ಹಡಗಿನ ಹಲ್ (Hull) ಭಾಗಕ್ಕೆ ಅತ್ಯಂತ ನಿಖರವಾಗಿ ಅಪ್ಪಳಿಸಿವೆ. ಈ ಕುರಿತು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಈ ಕ್ಷಿಪಣಿಯ ಅಭಿವೃದ್ಧಿಯು ಮಿಲಿಟರಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ," ಎಂದಿದ್ದಾರೆ.
ಈ ಕ್ಷಿಪಣಿಯ ವಿಶೇಷತೆ ಎಂದರೆ ಇದು ಹಾರಾಟದ ಸಮಯದಲ್ಲಿಯೂ ಹೊಸ ಮಾಹಿತಿಯನ್ನು ಸ್ವೀಕರಿಸಬಲ್ಲದು. ಒಂದು ವೇಳೆ ಅವಶ್ಯಕತೆ ಬಿದ್ದಲ್ಲಿ, ಕ್ಷಿಪಣಿಯು ಹಾರಾಟದ ಮಧ್ಯದಲ್ಲೇ ತನ್ನ ದಿಕ್ಕನ್ನು ಅಥವಾ ಗುರಿಯನ್ನು ಬದಲಿಸಬಲ್ಲ ಸಾಮರ್ಥ್ಯ ಹೊಂದಿದೆ. ಇದು ಹಡಗಿನ ಅತ್ಯಂತ ದುರ್ಬಲ ಭಾಗವನ್ನೇ ಗುರುತಿಸಿ ದಾಳಿ ಮಾಡುವುದರಿಂದ ಶತ್ರು ಹಡಗಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತದೆ.
ಒಂದೇ ಲಾಂಚರ್ನಿಂದ ಅಲ್ಪ ಅವಧಿಯಲ್ಲಿ ಏಕಕಾಲಕ್ಕೆ ಹಲವಾರು ಕ್ಷಿಪಣಿಗಳನ್ನು ಉಡಾವಣೆ ಮಾಡುವುದನ್ನು 'ಸಾಲ್ವೋ ಲಾಂಚ್' (Salvo Launch) ಎನ್ನಲಾಗುತ್ತದೆ. ಈ ತಂತ್ರಜ್ಞಾನವು ಶತ್ರುಗಳ ರೇಡಾರ್ ವ್ಯವಸ್ಥೆಯನ್ನು ದಿಕ್ಕುತಪ್ಪಿಸಿ ಸುಲಭವಾಗಿ ದಾಳಿ ನಡೆಸಲು ನೆರವಾಗುತ್ತದೆ. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ ತಯಾರಿಸಲಾಗಿದೆ.
ಕಳೆದ ಶನಿವಾರವಷ್ಟೇ ಡಿಆರ್ಡಿಒ ಮತ್ತು ನೌಕಾಪಡೆಯು ಹೊಸ ಯುದ್ಧನೌಕೆ ಯೋಜನೆಯ 'ಹೈಡ್ರೋಡೈನಾಮಿಕ್ ಪರ್ಫಾರ್ಮೆನ್ಸ್' ಮತ್ತು ಮಾಡೆಲ್ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ. ಈ ಪರೀಕ್ಷೆಯಲ್ಲಿ ನೌಕೆಯ ವೇಗ, ನೀರಿನಲ್ಲಿನ ಚಲನವಲನ, ಇಂಜಿನ್ ಶಕ್ತಿ ಮತ್ತು ಮೂಲೆಗಳಲ್ಲಿ ತಿರುಗುವ ಸಾಮರ್ಥ್ಯಗಳನ್ನು ಅಳೆಯಲಾಗಿದೆ. ಈ ಫಲಿತಾಂಶಗಳು ಅಂತರಾಷ್ಟ್ರೀಯ ಗುಣಮಟ್ಟಕ್ಕೆ ಸಮಾನವಾಗಿವೆ ಎಂದು ಡಿಆರ್ಡಿಒ ಅಧ್ಯಕ್ಷ ಸಮೀರ್ ವಿ. ಕಾಮತ್ ಅವರು ನೌಕಾಪಡೆಯ ಅಧಿಕಾರಿ ಸಂಜಯ್ ಸಾಧು ಅವರಿಗೆ ವರದಿ ಹಸ್ತಾಂತರಿಸಿದ್ದಾರೆ.
ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಡಿಆರ್ಡಿಒ ಹೊಸ ಮಾದರಿಯ ಶಸ್ತ್ರಸಜ್ಜಿತ ವಾಹನಗಳನ್ನು (Armored Platforms) ಪ್ರದರ್ಶಿಸಿದೆ. ಸೇನೆಯ ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ಟ್ರ್ಯಾಕ್ಡ್ (ಚಕ್ರಗಳ ಬದಲು ಪಟ್ಟಿ ಇರುವ) ಮತ್ತು ಚಕ್ರಗಳಿರುವ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಇದು ಮಾನವ ರಹಿತ ಫಿರಂಗಿ ಗೋಪುರವನ್ನು ಹೊಂದಿದೆ. ಶಕ್ತಿಶಾಲಿ ಇಂಜಿನ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ವೇಗ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಈ ವಾಹನಗಳು ನೆಲದ ಮೇಲೆ ಮಾತ್ರವಲ್ಲದೆ ನೀರಿನಲ್ಲಿಯೂ ಚಲಿಸಬಲ್ಲವು. ಹೈಡ್ರೋ ಜೆಟ್ ತಂತ್ರಜ್ಞಾನದ ಮೂಲಕ ನೀರಿನಲ್ಲಿ ಸುಲಭವಾಗಿ ಚಲಿಸಲು ಮತ್ತು ತಿರುಗಲು ಇವುಗಳಿಗೆ ಸಾಧ್ಯವಾಗುತ್ತದೆ. ಪ್ರಸ್ತುತ ಇವುಗಳಲ್ಲಿ ಶೇ. 65 ರಷ್ಟು ಸ್ವದೇಶಿ ವಸ್ತುಗಳನ್ನು ಬಳಸಲಾಗಿದ್ದು, ಭವಿಷ್ಯದಲ್ಲಿ ಇದನ್ನು ಶೇ. 90 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇವುಗಳು ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವನ್ನೂ ಹೊಂದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ