theft: ಉಂಡ ಮನೆಗೆ ಕನ್ನ... ಮನೆಯವರಿಗೆ ಮತ್ತು ಪದಾರ್ಥ ನೀಡಿ ಮನೆ ದರೋಡೆ

By Suvarna NewsFirst Published Dec 9, 2021, 4:15 PM IST
Highlights
  • ಮನೆಯವರಿಗೆ  ಆಮಲು ಪದಾರ್ಥ ನೀಡಿ ಮನೆ ದರೋಡೆ
  • ಮಹಾರಾಷ್ಟ್ರದ ಪುಣೆಯಲ್ಲಿ ಭಯಾನಕ ಘಟನೆ
  • ವಿದೇಶದಲ್ಲಿದ್ದ ಮನೆ ಯಜಮಾನ. 
  • ಹೆಂಡತಿ ಮಕ್ಕಳಿಗೆ ಆಮಲು ಪದಾರ್ಥ ನೀಡಿದ ಮನೆ ಕೆಲಸದಾಕೆ

ಪುಣೆ: ಮನೆಯವರಿಗೆ ಆಮಲು ಪದಾರ್ಥ ನೀಡಿ  ಮನೆ ಕೆಲಸದಾಕೆಯೇ ಮನೆ ದರೋಡೆ ಮಾಡಿದಂತಹ ಭಯಾನಕ ಘಟನೆ ಮಹಾರಾಷ್ಟ್ರದ ಪುಣೆ(pune)ಯ ಬವ್ಧಾನ್‌(Bavdhan)ಲ್ಲಿ ನಡೆದಿದೆ. ಮನೆಯ ಯಜಮಾನ ವಿದೇಶದಲ್ಲಿದ್ದು, ಇಲ್ಲಿ ಹೆಂಡತಿ ಹಾಗೂ ಇಬ್ಬರು ಮಕ್ಕಳು ಮಾತ್ರ ಇದ್ದರು. ಮನೆ ಯಜಮಾನನ ಪತ್ನಿ ಹಾಗೂ ಮಕ್ಕಳಿಗೆ ಆಮಲು ಪದಾರ್ಥ ನೀಡಿದ ಮನೆ ಕೆಲಸದಾಕೆ ಮನೆಯಲ್ಲಿದ್ದ  1.5  ಲಕ್ಷ ಮೊತ್ತದ ಹಣವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. 

ಈ ಬಗ್ಗೆ ಪುಣೆಯ ಹಿಂಜೇವಾಡಿ( Hinjewadi) ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆ ಕೆಲಸದಾಕೆ ತನ್ನ ಗಂಡನ ನೆರವಿನಿಂದ ಈ ಕೃತ್ಯವೆಸಗಿದ್ದಾಳೆ. ಮೊದಲು ಮನೆಯವರಿಗೆ ಆಮಲು ಪದಾರ್ಥ ನೀಡಿದ ಆಕೆ ಮನೆಯವರು ಪ್ರಜ್ಞೆ ತಪ್ಪುತ್ತಿದ್ದಂತೆ ತನ್ನ ಗಂಡನನ್ನು ಕರೆಸಿ ಮನೆಯಲ್ಲಿದ್ದ ಸುಮಾರು 1.5 ಲಕ್ಷ ಮೌಲ್ಯದ ಹಣದೊಂದಿಗೆ ಪರಾರಿಯಾಗಿದ್ದಾರೆ. ಇತ್ತ ವಿದೇಶದಲ್ಲಿರುವ ಪತಿ ಪುಣೆಯಲ್ಲಿರುವ ತನ್ನ ಹೆಂಡತಿ ಮಕ್ಕಳಿಗೆ ಹಲವು ಬಾರಿ ದೂರವಾಣಿ ಕರೆ ಮಾಡಿದರು ಯಾರು ಕರೆ ಸ್ವೀಕರಿಸಿಲ್ಲ. 

ವಿಸಿಟಿಂಗ್ ಕಾರ್ಡ್ ಹೊಂದಿದ ಮನೆ ಕೆಲಸದಾಕೆ ಈಗ ಸ್ಟಾರ್!

ಈ ವೇಳೆ ಅಪಾಯವನ್ನು ಅರಿತ ಅವರು ತನ್ನ ಭಾವನಿಗೆ ಅಂದರೆ ಪತ್ನಿಯ ಸಹೋದರನಿಗೆ ಹಾಗೂ ಆ ಕಟ್ಟಡದ ಸೆಕ್ಯೂರಿಟಿ ಗಾರ್ಡ್‌ಗೆ ಕರೆ ಮಾಡಿದ್ದಾರೆ. ನಂತರ ಅವರ ಭಾವ ಹಾಗೂ ಸೆಕ್ಯೂರಿಟಿ ಗಾರ್ಡ್‌ ಮನೆಗೆ ಬಂದು ನೋಡಿದಾಗ ಆತನ ಸಹೋದರಿ ಹಾಗೂ ಸೊಸೆ ಪ್ರಜ್ಞಾಶೂನ್ಯರಾಗಿ ಬಿದ್ದಿರುವುದು ಕಂಡು ಬಂದಿದೆ. ಇದೇ ವೇಳೆ ಅಳಿಯ ಆಗ ತಾನೆ ಎಚ್ಚರವಾಗಿದ್ದ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ನಂತರ ತಾಯಿ ಹಾಗೂ ಮಗಳು ಕೂಡ ಎಚ್ಚರಗೊಂಡಿದ್ದು, ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಒಮ್ಮೆ ಅವರು ಸಂಪೂರ್ಣ ಹುಶಾರಾಗುತ್ತಿದ್ದಂತೆ ಕಳ್ಳತನದ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಪೊಲೀಸರು ಕಾಯುತ್ತಿದ್ದಾರೆ.

ಪೊಲೀಸರ ಪ್ರಕಾರ ಇನ್ನು ಬೆಳೆಬಾಳುವ ಚಿನ್ನಾಭರಣ ಕೂಡ ಮನೆಯಲ್ಲಿದ್ದು, ಅದನ್ನು ಭದ್ರವಾದ ಸ್ಥಳದಲ್ಲಿ ಇಡಲಾಗಿತ್ತು. ಹೀಗಾಗಿ ಮನೆ ಕೆಲಸದಾಕೆ ಕೇವಲ ಹಣ ಮಾತ್ರ ಎಗರಿಸಿ ಪರಾರಿಯಾಗಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಸಹೋದರ ಪ್ರಕರಣ ದಾಖಲಿಸಿದ್ದಾರೆ. ಇನ್ನು ಕೃತ್ಯವೆಸಗಿದವರನ್ನು 46 ವರ್ಷದ ಹಿತೇಶ್‌ ಧಿಂಗ್ರಾ(Hitesh Dhingra) (ಈತ ಮನೆ ಕೆಲಸದಾಕೆಯ ಪತಿ)ಎಂದು ಗುರುತಿಸಲಾಗಿದೆ. ಈ ಕುಟುಂಬವಿದ್ದ ಕಟ್ಟಡದ ಸೆಕ್ಯೂರಿಟಿ ಗಾರ್ಡ್‌ ಪ್ರಕಾರ, ಈ ಮನೆಯಲ್ಲಿದ್ದ ಇಬ್ಬರು ಮನೆ ಕೆಲಸದಾಳುಗಳು ಮೂಲತಃ ನೇಪಾಳ(Nepal)ದವರು.

ಇವರು ಒಂದು ಕೆಂಪು ಬಣ್ಣದ ಬ್ಯಾಗ್‌ ಹಿಡಿದುಕೊಂಡಿದಿದ್ದನ್ನು ಸೆಕ್ಯೂರಿಟಿ ಗಾರ್ಡ್‌ ಗಮನಿಸಿದ್ದಾರೆ. ಅಲ್ಲದೇ ಮಹಿಳೆಯ ಸಹೋದರನೊಂದಿಗೆ ಮನೆಗೆ ಹೋಗಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ಬಂಗ್ಲೆಯ ಮಾಲೀಕನ ಪುತ್ರ ತುಂಬಾ ನಿಶ್ಯಕ್ತ ಸ್ಥಿತಿಯಲ್ಲಿ ಸರಿಯಾಗಿ ನಡೆಯಲು ಆಗದ ಸ್ಥಿತಿಯಲ್ಲಿ ಬಂದು ಬಾಗಿಲು ತೆರೆದಿದ್ದಾರೆ ಎಂದು ಸೆಕ್ಯೂರಿಟಿ ಗಾರ್ಡ್ ಹೇಳಿದ್ದಾರೆ. ಇನ್ನು ಈ  ಇಬ್ಬರು ಮನೆ ಕೆಲಸದವರು ವಾಸವಿದ್ದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಅಷ್ಟರಲ್ಲಾಗಲೇ ಅವರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು: ಬಾಲಿವುಡ್‌ ನಟ ಬೊಮ್ಮನ್‌ ಇರಾನಿ ಸಂಬಂಧಿ ಮನೆಯಲ್ಲಿ ಕಳ್ಳತನ

ಇತ್ತೀಚೆಗೆ ಬೆಂಗಳೂರಿನ ಸಂಚಾರಿ ಪೊಲೀಸ್ ಆಯುಕ್ತ(Traffic Police Commissioner) ರವಿಕಾಂತೇಗೌಡ(Ravikanthe gowda)ರ ಮನೆಯಲ್ಲಿ ಕಳ್ಳತನವಾಗಿತ್ತು. ಬೆಂಗಳೂರಿನ ಸಂಜಯನಗರ(Sanjaya nagar)ದಲ್ಲಿರುವ ಮನೆಯಲ್ಲಿ ಕಳ್ಳತನ ನಡೆದಿದ್ದು, ಈ ಕೃತ್ಯದಲ್ಲೂ ಮನೆ ಕೆಲಸದಾಕೆಯೇ ಕಳ್ಳತನವೆಸಗಿರುವ ಸಾಧ್ಯತೆ ಇದೆ. ಘಟನೆಯ ಬಳಿಕ ಮನೆ ಕೆಲಸದಾಕೆ ನಾಪತ್ತೆಯಾಗಿದ್ದು, ಆಕೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮನೆಯ ಕಾರು ಚಾಲಕ ಜಗದೀಶ್(Jagdish) ನೀಡಿದ ದೂರಿನನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮನೆ ಕೆಲಸದಾಕೆ ಕಾಣೆಯಾಗಿದ್ದಾಗಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಕೃತ್ಯದ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಕೆಲಸದ ನಿಮಿತ್ತ ಸಂಚಾರಿ ಪೊಲೀಸ್ ಆಯುಕ್ತರು ದೆಹಲಿಗೆ ತೆರಳಿದ್ದರು ಎಂದು ತಿಳಿದುಬಂದಿದೆ.

click me!