ವಿಮಾನ ಹಾರಿದ್ದಕ್ಕಿಂತ ರದ್ದಾಗಿದ್ದೇ ಹೆಚ್ಚು: 1050ರ ಪೈಕಿ 630 ಸಂಚಾರ ರದ್ದು!

By Kannadaprabha NewsFirst Published May 26, 2020, 8:27 AM IST
Highlights

ವಿಮಾನ ಹಾರಿದ್ದಕ್ಕಿಂತ ರದ್ದಾಗಿದ್ದೇ ಹೆಚ್ಚು| 2 ತಿಂಗಳ ನಂತರ ದೇಶದಲ್ಲಿ ವಿಮಾನ ಪುನಾರಂಭ| ಮೊದಲ ದಿನ 1050ರ ಪೈಕಿ 630 ಸಂಚಾರ ರದ್ದು| 532 ವಿಮಾನಗಳಲ್ಲಿ 39231 ಜನರ ಸಂಚಾರ

ನವದೆಹಲಿ(ಮೇ.26): ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದದ ದೇಸೀ ವಿಮಾನಯಾನ ಎರಡು ತಿಂಗಳ ನಂತರ ದೇಶದಲ್ಲಿ ಸೋಮವಾರ ಪುನಾರಂಭಗೊಂಡಿದೆ. ಆದರೆ, ಕೆಲ ರಾಜ್ಯಗಳು ಇತರ ರಾಜ್ಯಗಳಿಂದ ವಿಮಾನಗಳನ್ನು ಸ್ವೀಕರಿಸಲು ನಿರಾಕರಿಸಿದ್ದರಿಂದ ಮೊದಲ ದಿನ ಯೋಜಿತವಾಗಿದ್ದ 1050 ಸಂಚಾರದ ಪೈಕಿ ಕೇವಲ 630 ವಿಮಾನಗಳ ಸಂಚಾರ ರದ್ದಾಯಿತು. ಭಾರೀ ಪ್ರಮಾಣದಲ್ಲಿ ವಿಮಾನಗಳ ಸಂಚಾರ ರದ್ದಾದ ಕಾರಣ ಪ್ರಯಾಣಿಕರು ಭಾರೀ ತೊಂದರೆ ಅನುಭವಿಸುವಂತಾಯಿತು. ಅಲ್ಲದೆ ಹಲವೆಡೆ ಪ್ರಯಾಣಿಕರು ಈ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿದರು.

ದೇಶದಲ್ಲೇ ಮೊದಲ ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 4.45ಕ್ಕೆ ಪುಣೆಗೆ ತೆರಳಿತು. ಮುಂಬೈ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಪಾಟ್ನಾಕ್ಕೆ ಬೆಳಿಗ್ಗೆ 6.45ಕ್ಕೆ ಟೇಕಾಫ್‌ ಆಯಿತು. ಇಂಡಿಗೋ ಏರ್‌ಲೈನ್ಸ್‌ ಒಂದೇ ಸೋಮವಾರ ತನ್ನ ವಿಮಾನಗಳಲ್ಲಿ 20,000 ಜನ ಪ್ರಯಾಣಿಸಿದ್ದಾರೆ ಎಂದು ಹೇಳಿಕೊಂಡಿದೆ. ಬೇರೆ ಬೇರೆ ರಾಜ್ಯಗಳು ವಿಮಾನದಲ್ಲಿ ಬಂದಿಳಿಯುವವರಿಗೆ ವಿಭಿನ್ನ ಕ್ವಾರಂಟೈನ್‌ ನಿಯಮಗಳನ್ನು ಜಾರಿಗೊಳಿಸಿರುವುದರಿಂದ ವಿಮಾನಯಾನ ಸಿಬ್ಬಂದಿ ಹಾಗೂ ಪ್ರಯಾಣಿಕರು ಗೊಂದಲಕ್ಕೊಳಗಾಗಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆಯೂ ಮೊದಲದಿನ 532 ವಿಮಾನಗಳಲ್ಲಿ 39231 ಪ್ರಯಾಣಿಕರು ಸಂಚಾರ ಕೈಗೊಂಡರು.

ಕೇಂದ್ರ ಸರ್ಕಾರದ ಮನವಿಯ ಹೊರತಾಗಿಯೂ ಪಶ್ಚಿಮ ಬಂಗಾಳ ಮೇ 28ರವರೆಗೆ ವಿಮಾನಯಾನಕ್ಕೆ ಅವಕಾಶ ನೀಡುವುದಿಲ್ಲವೆಂದು ಹೇಳಿದೆ. ಆಂಧ್ರಪ್ರದೇಶ ಕೂಡ ಮೊದಲ ದಿನ ಯಾವುದೇ ವಿಮಾನ ಬಂದಿಳಿಯಲು ಅವಕಾಶ ನೀಡಿಲ್ಲ. ಅಲ್ಲಿ ಮಂಗಳವಾರ ಸಂಚಾರ ಆರಂಭವಾಗಲಿದೆ. ಚೆನ್ನೈ ಹಾಗೂ ಮುಂಬೈ ವಿಮಾನ ನಿಲ್ದಾಣಗಳಿಂದ ಅತ್ಯಂತ ಕಡಿಮೆ ವಿಮಾನಗಳು ಹಾರಾಡಿವೆ. ಕೊರೋನಾ ಸೋಂಕು ದಿನೇದಿನೇ ಹೆಚ್ಚುತ್ತಿರುವುದರಿಂದ ಮಹಾರಾಷ್ಟ್ರ, ತಮಿಳುನಾಡು, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳು ದೇಸೀ ವಿಮಾನಯಾನಕ್ಕೆ ಪೂರ್ಣ ಪ್ರಮಾಣದ ಒಪ್ಪಿಗೆ ನೀಡಿಲ್ಲ.

ಕೇಂದ್ರ ಸರ್ಕಾರ ವಿಧಿಸಿದ ಮಾರ್ಗಸೂಚಿಯಂತೆ ವಿಮಾನದಲ್ಲಿ ಪ್ರಯಾಣಿಕರಿಗೆ ಆಹಾರ ನೀಡಲಿಲ್ಲ. ಟಿಕೆಟ್‌ ದರಕ್ಕೆ ಮಿತಿ ವಿಧಿಸಲಾಗಿತ್ತು. ಪ್ರಯಾಣಿಕರು ಮಾಸ್ಕ್‌ ಧರಿಸುವುದು ಹಾಗೂ ಆರೋಗ್ಯ ಸೇತು ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳುವುದು ಕಡ್ಡಾಯವಾಗಿತ್ತು. ವಿಮಾನಗಳಲ್ಲಿ ಮೂರನೇ ಒಂದರಷ್ಟುಸೀಟುಗಳಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿತ್ತು. ವಿಮಾನ ನಿಲ್ದಾಣಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಹಾಗೂ ಲಗೇಜ್‌ಗಳನ್ನು ಸ್ಯಾನಿಟೈಸ್‌ ಮಾಡುವುದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು.

click me!