
ಚೆನ್ನೈ : ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ನಾಶಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿರುವ, ಡಾಲ್ಫಿನ್ ಹಂಟರ್ ಎಂದೇ ಪ್ರಸಿದ್ಧವಾದ ಐಎನ್ಎಸ್ ಅಂಜದೀಪ್ ಯುದ್ಧನೌಕೆ ಶುಕ್ರವಾರ ಭಾರತೀಯ ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಕರ್ನಾಟಕದ ಕಾರವಾರ ಕರಾವಳಿಯಲ್ಲಿರುವ ಅಂಜದೀಪ್ ದ್ವೀಪದ ಹೆಸರನ್ನು ಇದಕ್ಕಿಟ್ಟಿರುವುದು ವಿಶೇಷ.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ, ಚೆನ್ನೈ ಬಂದರಿನಲ್ಲಿ ಯುದ್ಧನೌಕೆಯ ಕಾರ್ಯಾರಂಭಕ್ಕೆ ಚಾಲನೆ ನೀಡಿದರು. ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿರುವ 8 ಸಮರ ಹಡಗುಗಳ ಪೈಕಿ ಇದು 3ನೆಯದು.
ಕೋಲ್ಕತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಮತ್ತು ಎಂಜಿನಿಯರ್ಗಳು ಸ್ಥಳೀಯವಾಗಿ ನಿರ್ಮಿಸಿದ ಈ ನೌಕೆಯನ್ನು ‘ಡಾಲ್ಫಿನ್ ಹಂಟರ್’ ರೀತಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಶತ್ರು ಜಲಾಂತರ್ಗಾಮಿ ನೌಕೆಗಳ ಪತ್ತೆ, ಟ್ರ್ಯಾಕಿಂಗ್ ಮತ್ತು ತಟಸ್ಥಗೊಳಿಸುವಿಕೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.
77 ಮೀ. ಉದ್ದದ ಈ ಹಡಗು ಅತಿ ವೇಗದ ವಾಟರ್-ಜೆಟ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಹೊಂದಿದ್ದು, ತ್ವರಿತ ಪ್ರತಿಕ್ರಿಯೆ ಮತ್ತು ನಿರಂತರ ಕಾರ್ಯಾಚರಣೆಗಾಗಿ 25 ನಾಟ್ಗಳ ಗರಿಷ್ಠ ವೇಗವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಕರಾವಳಿ ಕಣ್ಗಾವಲು, ಕಡಿಮೆ ತೀವ್ರತೆಯ ಸಮುದ್ರಯಾನವನ್ನು ಕೈಗೊಳ್ಳಲು ಸಹ ಸಜ್ಜುಗೊಂಡಿದೆ.
ಕರ್ನಾಟಕದ ಕಾರವಾರದಿಂದ 10 ಕಿ.ಮೀ. ದೂರದಲ್ಲಿರುವ ‘ಅಂಜದೀಪ’ ಎಂಬ ದ್ವೀಪದ ಹೆಸರನ್ನು ಈ ನೌಕೆಗೆ ಇಟ್ಟಿರುವುದು ವಿಶೇಷ. ಈ ದ್ವೀಪದಲ್ಲಿ ನೌಕಾದಳ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿತ್ತು. ನೌಕಾದಳಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಕಾರಣಕ್ಕೆ ನೌಕೆಗೆ ದ್ವೀಪದ ಹೆಸರಿಟ್ಟು ಗೌರವಿಸಲಾಗಿದೆ. ಆದರೆ ಅಂಜದೀಪ ಆಡಳಿತಾತ್ಮಕವಾಗಿ ಗೋವಾ ರಾಜ್ಯದ ಅಡಿಯಲ್ಲಿ ಬರುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ