
ನಿಷ್ಠೆ, ನಿಯತ್ತಿಗೆ ಇನ್ನೊಂದು ಹೆಸರೇ ನಾಯಿ. ನಾಯಿ ಎನ್ನುವುದನ್ನು ಅತ್ಯಂತ ಕೆಟ್ಟ ಪದದ ರೂಪದಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತಿದ್ದರೂ, ಅವುಗಳಿಗೆ ಇರುವಷ್ಟು ನಿಯತ್ತು ಬಹುಶಃ ಯಾವ ಮನುಷ್ಯನಿಗೂ ಇರಲಿಕ್ಕಿಲ್ಲ. ಒಮ್ಮೆ ಒಂದಿಷ್ಟು ಹಿಡಿ ಅನ್ನ ಹಾಕಿದರೆ ಸಾಕು, ಸಾಯುವವರೆಗೂ ಆ ವ್ಯಕ್ತಿಯ ಮೇಲೆ ನಿಷ್ಠೆ ತೋರುತ್ತದೆ ನಾಯಿ. ಅದರಲ್ಲಿಯೂ ಸಾಕುನಾಯಿಗಳು ಎಷ್ಟೋ ಬಾರಿ ತಾನು ಸಾವಿನ ಬಾಯಿಯೊಳಕ್ಕೆ ಹೋಗಿ ತನ್ನ ಮಾಲೀಕರನ್ನು ಕಾಪಾಡಿದ್ದು ಇದೆ. ಸಾವು ಕಣ್ಣೆದುರೇ ಇದ್ದರೂ ಡೋಂಟ್ಕೇರ್ ಎನ್ನದೇ ತನ್ನ ಒಡೆಯನಿಗಾಗಿ ಪ್ರಾಣ ತ್ಯಾಗ ಮಾಡಿರುವ ಅದೆಷ್ಟೋ ಉದಾಹರಣೆಗಳಿದ್ದು, ಆಗೀಗ ಅಂಥ ಸುದ್ದಿಗಳು ಬರುತ್ತಲೇ ಇರುತ್ತವೆ. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಇಂಥ ವಿಡಿಯೋಗಳು ವೈರಲ್ ಆಗುತ್ತವೆ.
ಈಗ ನಾಯಿಯ ನಿಯತ್ತನ್ನು ತೋರಿಸುವ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಇಲ್ಲಿ ನಾಯಿ ತನ್ನ ಜೀವವನ್ನು ಪಣಕ್ಕಿಟ್ಟು ಕಾಪಾಡಿದ್ದು ಯಜಮಾನರು ಅಥವಾ ಅವರ ಕುಟುಂಬದವರನ್ನು ಅಲ್ಲ, ಬದಲಿಗೆ ಯಜಮಾನನ ತೋಟದಲ್ಲಿ ಕೆಲಸ ಮಾಡುವ ಕೂಲಿಕಾರರ ಮಕ್ಕಳನ್ನು! ಜೆನ್ನಿ ಎನ್ನುವ ನಾಯಿ ನಾಗರಹಾವಿನಿಂದ ಮಕ್ಕಳನ್ನು ಕಾಪಾಡುವ ಸಲುವಾಗಿ ಹಾವಿನ ಜೊತೆ ಸೆಣಸಾಟ ಮಾಡಿ, ಅದನ್ನು ಸಾಯಿಸಿ ಹಾಕಿದೆ.
ಶೂಟಿಂಗ್ ವೇಳೆ ಭಾಗ್ಯಳನ್ನು ಒದೆಯಲು ಹೋದ ಶ್ರೇಷ್ಠಾ ಪಾತ್ರಧಾರಿಯ ಹಿಂಬದಿ ಡ್ಯಾಮೇಜ್!
ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಶಿವಗಣೇಶ್ ಕಾಲೋನಿಯಲ್ಲಿರುವ ಮನೆಯೊಂದರ ತೋಟದಲ್ಲಿ ಮನೆ ಕೆಲಸದವರ ಮಕ್ಕಳು ಆಟವಾಡುತ್ತಿದ್ದ ವೇಳೆಗೆ ಹಾವು ನುಗ್ಗಿತ್ತು. ಮಕ್ಕಳು ಅದನ್ನು ನೋಡಿ ಕಿರುಚಿಕೊಂಡಿದ್ದಾರೆ. ಸರ್ಪವನ್ನು ನೋಡಿ ಮಕ್ಕಳು ಏನು ಮಾಡಬೇಕು ಎಂದು ಗೊತ್ತಾಗದೇ ದಂಗಾಗಿ ಹೋಗಿದ್ದಾರೆ. ಹಾವು ತಮ್ಮ ಕಡೆ ಬರುತ್ತಿರುವುದನ್ನು ನೋಡಿದ ಅವರಿಗೆ ಉಸಿರೇ ನಿಂತಂತಾಗಿದೆ. ಮಕ್ಕಳ ಚೀರಾಟವನ್ನು ಅಲ್ಲಿಯೇ ಇದ್ದ ಜೆನ್ನಿ ಕೇಳಿಸಿಕೊಂಡಿದೆ. ಅದನ್ನು ಕಟ್ಟಿಹಾಕಲಾಗಿತ್ತು. ಆದರೆ ಮಕ್ಕಳಿಗೆ ಏನೋ ಅಪಾಯ ಸಂಭವಿಸಿದೆ ಎಂದು ಅರಿತ ನಾಯಿ ಸರಪಳಿಯನ್ನು ತುಂಡರಿಸಿಕೊಂಡು ಬಂದು ಹಾವಿನ ಮೇಲೆ ದಾಳಿ ಮಾಡಿದೆ.
ಈ ಭೀಕರ ಕಾಳಗದ ವಿಡಿಯೋ ವೈರಲ್ ಆಗಿದೆ. ಕೊನೆಗೆ ಹಾವನ್ನು ಸಾಯಿಸುವಲ್ಲಿ ಜೆನ್ನಿ ಯಶಸ್ವಿಯಾಗಿದೆ. ಅಂದಹಾಗೆ ಜೆನ್ನಿಯ ಮಾಲೀಕ ಪಂಜಾಬ್ ಸಿಂಗ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ತೋಟದಲ್ಲಿ ಹಾವು ಬರುವುದು ಸಾಮಾನ್ಯ. ಇದಾಗಲೇ ಜೆನ್ನಿ ಹಲವಾರು ಹಾವುಗಳನ್ನು ಕೊಂದಿದ್ದಾಳೆ. ಆದರೆ ಇದೀಗ ನಾನು ಮನೆಯಲ್ಲಿ ಇರದ ಸಂದರ್ಭದಲ್ಲಿ ಮಕ್ಕಳನ್ನು ಅವಳು ಕಾಪಾಡಿದ್ದಾರೆ. ಇದು ದೊಡ್ಡ ವಿಷಯ ಎಂದಿದ್ದಾರೆ. ಇಲ್ಲಿ ಮಳೆಗಾಲದಲ್ಲಿ ಹಾವುಗಳು ಹೆಚ್ಚಾಗಿ ಕಂಡುಬರುತ್ತವೆ. ಈಗಲೂ ಹಾಗೆಯೇ ಆಗಿದೆ. ಜೆನ್ನಿ ನಾಗರ ಹಾವಿನ ಜೊತೆ ಸುಮಾರು ಐದು ನಿಮಿಷಗಳ ಕಾಲ ಹೋರಾಟ ಮಾಡಿದೆ. ಇದರ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಕೊನೆಯ ಕ್ಷಣದವರೆಗೂ ಹಾವು ಬಿಟ್ಟುಕೊಡಲಿಲ್ಲ. ಆದರೆ ಅದನ್ನು ಪದೇ ಪದೇ ನೆಲಕ್ಕೆ ನಾಯಿ ಬಡಿದಿದ್ದರಿಂದ ಗಾಯಗೊಂಡು ಸಾವನ್ನಪ್ಪಿದೆ ಎಂದಿದ್ದಾರೆ.
ಅರ್ಜೆಂಟ್ ಬಂದ್ರೂ ಬಾತ್ರೂಮ್ಗೆ ಹೋಗಲು ಪರದಾಡಿದ್ರಂತೆ ಆಲಿಯಾ! ಸೀರೆ ಫಜೀತಿ ಬಗ್ಗೆ ಹೇಳಿದ್ದೇನು ಕೇಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ