
ನವದೆಹಲಿ(ಜೂ.28): ವಕೀಲರು ಇನ್ನುಮುಂದೆ ಮಾತನಾಡುವಾಗ ಅಥವಾ ಬರೆಯುವಾಗ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಕೇಂದ್ರ ಸರ್ಕಾರವು ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ತಿದ್ದುಪಡಿ ತಂದಿದ್ದು, ವಕೀಲರು ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧೀಶರು ಅಥವಾ ನ್ಯಾಯಾಂಗದ ಯಾವುದೇ ಸದಸ್ಯ ಅಥವಾ ಬಾರ್ ಕೌನ್ಸಿಲ್ ಬಗ್ಗೆ ‘ಕೀಳು’ ಪದ ಬಳಕೆ ಮಾಡಿದರೆ ಅವರನ್ನು ಅಮಾನತು ಮಾಡಲು ಅಥವಾ ಸದಸ್ಯತ್ವದಿಂದ ವಜಾಗೊಳಿಸಲು ಇದರಡಿ ಅವಕಾಶ ಕಲ್ಪಿಸಲಾಗಿದೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳಿಗೆ ‘ಡ್ಯೂಟೀಸ್ ಟುವಾರ್ಡ್ಸ್ ಸೊಸೈಟಿ ಅಂಡ್ ಬಾರ್’ ಎಂಬ ಸೆಕ್ಷನ್ 5ನ್ನು ಹೊಸತಾಗಿ ಸೇರಿಸಿ ಶುಕ್ರವಾರ ಕೇಂದ್ರ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ‘ವಕೀಲರು ಆರೋಗ್ಯಕರ ಅಥವಾ ಉತ್ತಮ ಉದ್ದೇಶದಿಂದ ಮಾಡುವ ಟೀಕೆಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದರೆ, ವಕೀಲರು ಯಾವುದೇ ಕೋರ್ಟ್, ಜಡ್ಜ್, ನ್ಯಾಯಾಂಗದ ಸದಸ್ಯ ಅಥವಾ ಬಾರ್ ಕೌನ್ಸಿಲ್ ವಿರುದ್ಧ ಮುದ್ರಣ, ಎಲೆಕ್ಟ್ರಾನಿಕ್ ಅಥವಾ ಸೋಷಿಯಲ್ ಮೀಡಿಯಾಗಳಲ್ಲಿ ಕೀಳು ಹೇಳಿಕೆ ನೀಡಿದರೆ ಅವರನ್ನು ಬಾರ್ ಕೌನ್ಸಿಲ್ನ ಸದಸ್ಯತ್ವದಿಂದ ಅಮಾನತು ಮಾಡಬಹುದು ಅಥವಾ ವಜಾಗೊಳಿಸಬಹುದು.
ವಕೀಲರು ತಮ್ಮ ದೈನಂದಿನ ಬದುಕಿನಲ್ಲಿ ಉತ್ತಮ ನಡತೆಯನ್ನು ಹೊಂದಿರಬೇಕು. ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಳ್ಳಬಾರದು. ಮುದ್ರಣ, ಎಲೆಕ್ಟ್ರಾನಿಕ್ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಕೋರ್ಟ್ ಅಥವಾ ಜಡ್ಜ್ ವಿರುದ್ಧ ಅವಾಚ್ಯ, ಕೀಳು, ಮಾನಹಾನಿಕರ, ದುರುದ್ದೇಶಪೂರಿತ ಅಥವಾ ಕಿಡಿಗೇಡಿತನದ ಹೇಳಿಕೆ ನೀಡಬಾರದು’ ಎಂದು ನಿಯಮದಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ