ಆಮ್ ಆದ್ಮಿ ಪಾರ್ಟಿಗೆ ಮತ್ತೊಂದು ಆಘಾತ ಎದುರಾಗಿದೆ. ಒಬ್ಬರ ಮೇಲೊಬ್ಬ ನಾಯಕರು ಜೈಲು ಸೇರುತ್ತಿದ್ದಾರೆ. ಇದೀಗ ವಕ್ಫ್ ಮಂಡಳಿ ಹಗರಣದಲ್ಲಿ ಆಪ್ ನಾಯಕ ಅಮಾನತುಲ್ಹಾ ಖಾನ್ ಅರೆಸ್ಟ್ ಆಗಿದ್ದಾರೆ.
ನವದೆಹಲಿ(ಏ.18) ಅಬಕಾರಿ ನೀತಿ ಹಗರಣ, ಜಲ ಮಂಡಳಿ ಹಗರಣ ಜೊತೆಗೆ ದೆಹಲಿ ವಕ್ಫ್ ಹಗರಣ ಆಮ್ ಆದ್ಮಿ ಪಾರ್ಟಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಕ್ಫ್ ಹಗರಣ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಆಪ್ ನಾಯಕ, ಶಾಸಕ ಅಮಾನತುಲ್ಹಾ ಖಾನ್ ಅವರನ್ನು ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಂಧಿಸಿದೆ. ಈ ಮೂಲಕ ಆಮ್ ಆದ್ಮಿ ಪಾರ್ಟಿ ನಾಯಕರ ಜೈಲು ಪರೇಡ್ ಮುಂದುವರಿದಿದೆ. ದೆಹಲಿ ವಕ್ಫ್ ಬೋರ್ಡ್ ಹಗರಣದಲ್ಲಿನ ಅಕ್ರಮ ಹಣ ವರ್ಗಾವಣೆ ಹಾಗೂ ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಇದೀಗ ಆಪ್ ನಾಯಕನ ಬಂಧಿಸಿದೆ.
ಇಡಿ ಅಧಿಕಾರಿಗಳ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅಮಾನತುಲ್ಹಾ ಖಾನ್ ನೇರವಾಗಿ ಸುಪ್ರೀಂ ಕೋರ್ಟ್ ಕದತಟ್ಟಿದ್ದರು. ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇಡಿ ಅಧಿಕಾರಿಗಳಿಂದ ಬಂಧನ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಖಾನ್ಗೆ ಹಿನ್ನಡೆಯಾಗಿತ್ತು. ಈ ಕುರಿತು ಮಧ್ಯಪ್ರವೇಶಿಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಸುಪ್ರೀಂ ಕೋರ್ಟ್ ಆದೇಶದ ಬಳಿಕ ಇಡಿ ಅಧಿಕಾರಿಗಲು ಅಮಾನತುಲ್ಹಾ ಖಾನ್ ವಿಚಾರಣೆ ನಡೆಸಿತ್ತು. ಇಂದು ಸತತ 9 ಗಂಟೆಗಳ ಕಾಲ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಅಮಾನತುಲ್ಹಾ ಖಾನ್ನ್ನು ಬಂಧಿಸಿದ್ದಾರೆ.
'ವರ್ಕ್ ಫ್ರಮ್ ಜೈಲ್' ಅವಕಾಶ ನೀಡುವಂತೆ ಹೈಕೋರ್ಟ್ಗೆ ಅರವಿಂದ್ ಕೇಜ್ರಿವಾಲ್ ಅರ್ಜಿ!
ಏಪ್ರಿಲ್ 18ರ 11 ಗಂಟೆ ಒಳಗೆ ತನಿಖಾ ಸಂಸ್ಥೆ ಮುಂದ ಹಾಜರಾಗುವಂತೆ ಅಮಾನತುಲ್ಹಾ ಖಾನ್ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಇಂದು ಬೆಳಗ್ಗೆ ಇಡಿ ಕಚೇರಿಗೆ ತೆರಳಿದ ಅಮಾನತುಲ್ಲಾ ಖಾನ್ ಅವರನ್ನು ಇಡಿ ವಿಚಾರಣೆ ನಡೆಸಿತ್ತು. ಸುದೀರ್ಘ ವಿಚಾರಣೆ ಬಳಿಕ ಬಂಧಿಸಿದೆ. ಅಮಾನತುಲ್ಹಾ ಖಾನ್ ದೆಹಲಿ ವಕ್ಫ್ ಬೋರ್ಡ್ ಮುಖ್ಯಸ್ಥರಾಗಿದ್ದ ವೇಳೆ ಭಾರಿ ಹಗರಣ ನಡೆಸಿದ್ದಾರೆ ಅನ್ನೋ ಆರೋಪದಡಿಯಲ್ಲಿ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ ಅನ್ನೋ ಗುರುತರ ಆರೋಪವೂ ಕೇಳಿಬಂದಿದೆ.
ಅಮಾನತುಲ್ಹಾ ಖಾನ್ ಬಂಧನ ಮಾಹಿತಿ ಹೊರಬೀಳುತ್ತಿದ್ದಂತೆ ಆಪ್ ಸಚಿವೆ ಆತೀಷಿ ಹಾಗೂ ನಾಯಕ ಸಂಜಯ್ ಸಿಂಗ್ ಅಮಾನತುಲ್ಹಾ ಖಾನ್ ಮನೆಯತ್ತ ಧಾವಿಸಿದ್ದಾರೆ.