ಆಕಸ್ಮಿಕವೋ? ಭಯೋತ್ಪಾದಕರ ಆತ್ಮಾಹುತಿ ದಾಳಿಯೋ? ದಿಲ್ಲಿ ಕಾರು ಸ್ಫೋಟಕ್ಕೆ 9 ಬಲಿ

Published : Nov 11, 2025, 06:39 AM IST
Delhi blast

ಸಾರಾಂಶ

ಭದ್ರತಾ ಪಡೆಗಳು ಭಾನುವಾರವಷ್ಟೇ ಗುಜರಾತ್‌ನಲ್ಲಿ ಮೂವರು ಮತ್ತು ಸೋಮವಾರ ಕಾಶ್ಮೀರದಲ್ಲಿ 8 ಉಗ್ರರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವುದು, ಇದು ಉಗ್ರ ಕೃತ್ಯವಿರಬಹುದು ಎಂಬ ಶಂಕೆಗೆ ಕಾರಣವಾಗಿದೆ.

ನವದೆಹಲಿ (ನ.11): ಉಗ್ರರ ವಿರುದ್ಧ ಭದ್ರತಾಪಡೆಗಳು ದೇಶವ್ಯಾಪಿ ಕಾರ್‍ಯಾಚರಣೆ ನಡೆಸಿ ಕಳೆದ 2 ದಿನದಲ್ಲಿ 11 ಉಗ್ರರನ್ನು ಬಂಧಿಸಿದ ಬೆನ್ನಲ್ಲೇ, ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್‌ ಸಿಗ್ನಲ್‌ ಬಳಿ ಸೋಮವಾರ ಸಂಜೆ 6.52ರ ವೇಳೆಗೆ ಭೀಕರ ಸ್ಫೋಟವೊಂದು ಸಂಭವಿಸಿದೆ. ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಅದರ ತೀವ್ರತೆಗೆ ಅಕ್ಕಪಕ್ಕದ ವಾಹನಗಳಿಗೂ ಬೆಂಕಿ ಹತ್ತಿಕೊಂಡು ಅವು ಸುಟ್ಟು ಕರಕಲಾಗಿವೆ. ಈ ದುರ್ಘಟನೆಯಲ್ಲಿ 9 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗಾಯಗೊಂಡರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ಎದುರಾಗಿದೆ. ಸ್ಫೋಟ ಆಕಸ್ಮಿಕವೇ ಅಥವಾ ಉಗ್ರರ ಕೃತ್ಯವೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಘಟನಾ ಸ್ಥಳಕ್ಕೆ ಎನ್ಎಸ್‌ಜಿ, ಎನ್‌ಐಎ, ವಿಧಿವಿಜ್ಞಾನ ತಜ್ಞರು ಧಾವಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಾರು ಮಾಲೀಕ ಸಲ್ಮಾನ್‌ ಎಂಬುವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ ನೀಡಿದ್ದಾರೆ. ಇದರ ನಡುವೆ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್‌ ಶಾರಿಂದ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದ್ದು ಇಡೀ ಘಟನೆ ಬಗ್ಗೆ ತೀವ್ರ ನಿಗಾ ಇರಿಸಿದ್ದಾಗಿ ಹೇಳಿದ್ದು, ಅಪಾರ ಸಾವು ನೋವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ದೆಹಲಿ ಸ್ಫೋಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಯುಪಿ, ಸೇರಿ ದೇಶಾದ್ಯಂತ ಭಾರೀ ಹೈಅಲರ್ಟ್‌ ಘೋಷಿಸಲಾಗಿದೆ. ಅಲ್ಲದೆ ಪ್ರಮುಖ ದೇಗುಲ ನಗರಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಭದ್ರತಾ ಪಡೆಗಳು ಭಾನುವಾರವಷ್ಟೇ ಗುಜರಾತ್‌ನಲ್ಲಿ ಮೂವರು ಮತ್ತು ಸೋಮವಾರ ಕಾಶ್ಮೀರದಲ್ಲಿ 8 ಉಗ್ರರನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ಈ ಘಟನೆ ನಡೆದಿರುವುದು, ಇದು ಉಗ್ರ ಕೃತ್ಯವಿರಬಹುದು ಎಂಬ ಶಂಕೆಗೆ ಕಾರಣವಾಗಿದೆ. ಒಂದು ವೇಳೆ ಇದು ಉಗ್ರ ಕೃತ್ಯವೆಂದು ಖಚಿತವಾದರೆ ಅದು ಈ ವರ್ಷ ದೇಶದಲ್ಲಿ ನಡೆದ 2ನೇ ಉಗ್ರ ದಾಳಿಯಾಗಲಿದೆ. ಈ ಹಿಂದೆ ಏ.22ರಂದು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿ 26 ಜನರನ್ನು ಬಲಿ ಪಡೆದಿದ್ದರು.

ಏನಾಯ್ತು?: ಸೋಮವಾರ ಸಂಜೆ 6.52ರ ವೇಳೆಗೆ ಕೆಂಪುಕೋಟೆಯ ಮೆಟ್ರೋ ಸ್ಟೇಷನ್‌ ಬಳಿ ಇರುವ ಸಿಗ್ನಲ್‌ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹ್ಯುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕಾರಿನಲ್ಲಿ ಮೂವರು ಕುಳಿತಿದ್ದರು ಎಂಬುದು ಖಚಿತಪಟ್ಟಿದೆ. ಸ್ಫೋಟದ ತೀವ್ರತೆಗೆ ಭಾರೀ ಬೆಂಕಿ ಹತ್ತಿಕೊಂಡು ಅದು ಅಕ್ಕಪಕ್ಕದ ವಾಹನಗಳಿಗೂ ಹಬ್ಬಿದ ಕಾರಣ ಅವುಗಳಿಗೂ ಬೆಂಕಿ ಹಲವು ವಾಹನಗಳು ಅಗ್ನಿಗೆ ಆಹುತಿಯಾಗಿವೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು 30 ನಿಮಿಷಗಳ ಕಾಲ ಶ್ರಮಿಸಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಸ್ಫೋಟದ ತೀವ್ರತೆ, ಬೆಂಕಿಯ ಕೆನ್ನಾಲಿಗೆಗೆ ಅನೇಕರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕಾರು ಮಾಲೀಕ ವಶಕ್ಕೆ: ಸ್ಫೋಟಗೊಂಡ ಕಾರು ಹರ್ಯಾಣ ಮೂಲದ ಸಲ್ಮಾನ್‌ ಎಂಬ ವ್ಯಕ್ತಿ ಹೆಸರಲ್ಲಿ ನೋಂದಣಿಯಾಗಿದ್ದು ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಾನು ಕಾರು ಮಾರಿದ್ದಾಗಿ ಸಲ್ಮಾನ್‌ ಹೇಳಿದ್ದಾನೆ. ಆತನ ಮಾತಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೇಹ ಚೆಲ್ಲಾಪಿಲ್ಲಿ: ಘಟನಾ ಸ್ಥಳದಲ್ಲಿ ಸ್ಫೋಟದ ತೀವ್ರತೆ ಸಾರುವಂತ ಸುಟ್ಟು ಕರಕಲಾದ ವಾಹನಗಳು, ಮೃತ ವ್ಯಕ್ತಿಗಳ ದೇಹದ ಭಾಗಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳು ಎಲ್ಲರ ಮನಕಲಕುವಂತಿದ್ದವು. ಘಟನೆಯಲ್ಲಿ 6 ಕಾರು, 2 ಇ ರಿಕ್ಷಾ, ಒಂದು ಆಟೋ ರಿಕ್ಷಾ ಸುಟ್ಟು ಕರಕಲಾಗಿದೆ. ಕಾರು ಮಾರಿದ್ದ ಸಲ್ಮಾನ್‌ ಅರೆಸ್ಟ್‌ನವದೆಹಲಿ: ಸೋಮವಾರದ ಸ್ಫೋಟ ಘಟನೆ ಸಂಬಂಧ ಕಾರಿನ ಹಿಂದಿನ ಮಾಲೀಕ ಸಲ್ಮಾನ್‌ ಎಂಬಾತನನ್ನು ಬಂಧಿಸಲಾಗಿದೆ. ಈಗ ದೆಹಲಿ ಓಕ್ಲಾ ಪ್ರದೇಶದ ನದೀಂ ಎಂಬುವವರಿಗೆ ಈ ಕಾರು ಮಾರಾಟ ಮಾಡಿದ್ದು ಎಂದು ಬೆಳಕಿಗೆ ಬಂದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ.

ಮುಂಬೈ, ಯುಪಿ ಸೇರಿ ದೇಶಾದ್ಯಂತ ಹೈ ಅಲರ್ಟ್‌

ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಭೀಕರ ಸ್ಫೋಟ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ತಾಜ್‌ ಹೋಟೆಲ್‌, ಗೇಟ್‌ ವೇ ಆಫ್‌ ಇಂಡಿಯಾ , ಸಿದ್ಧಿ ವಿನಾಯಕ ದೇವಸ್ಥಾನ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರವಾಸಿ ತಾಣಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ರಾಮಮಂದಿರ, ಕಾಶಿ, ವಾರಾಣಸಿಯಂತಹ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಅಯೋಧ್ಯೆಯಲ್ಲಿಯೂ ಪೊಲೀಸರು ಕಣ್ಗಾವಲಿರಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ