Latest Videos

ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ, ಸ್ಥಳಕ್ಕೆ ದೌಡಾಯಿಸಿದ ಪೊಲೀಸ್!

By Suvarna NewsFirst Published Dec 26, 2023, 7:59 PM IST
Highlights

ಇಸ್ರೇಲ್ ಜೊತೆ ಆತ್ಮೀಯ ಸಂಬಂಧ, ಟ್ರೇಡಿಂಗ್ ಹೊಂದಿರುವ ಭಾರತವನ್ನು ಟಾರ್ಗೆಟ್ ಮಾಡಲಾಗತ್ತಿದೆ. ಅರಬ್ಬಿ ಸಮುದ್ರದಲ್ಲಿ ಭಾರತಕ್ಕೆ ಆಗಮಿಸುತ್ತಿದ್ದ ಸರಕು ಹಡಗಿನ ಮೇಲೆ ದಾಳಿ ನಡೆದಿದೆ. ಇದರ ಬೆನ್ನಲ್ಲೇ ಇದೀಗ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ ಬಂದಿದೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
 

ನವದೆಹಲಿ(ಡಿ.26) ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬರುತ್ತಿದ್ದ ತೈಲ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ನಡೆದ ಡ್ರೋನ್‌ ದಾಳಿಯ ಹಿಂದೆ ಇರಾನ್‌ ಕೈವಾಡವಿದೆ ಎಂದು ಅಮೆರಿಕ ಮೂಲಗಳು ಹೇಳುತ್ತಿದೆ. ಹೌತಿ ಉಗ್ರರು ಈ ದಾಳಿ ನಡೆಸಿದ್ದಾರೆ ಅನ್ನೋ ಮಾಹಿತಿಗಳು ಹೊರಬೀಳುತ್ತಿದೆ. ಹಡುಗು ನಿರ್ವಹಣೆಯನ್ನು ಇಸ್ರೇಲ್ ಮಾಡುತ್ತಿದೆ ಅನ್ನೋ ಕಾರಣಕ್ಕೆ ದಾಳಿಯಾಗಿರುವ ಸಾಧ್ಯತೆಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ ಬಂದಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶೋಧ ಕಾರ್ಯ ನಡಸಿದ್ದಾರೆ. ಈ ವೇಳೆ ಯಾವುದೇ ಅನುಮಾನಸ್ಪದ ವಸ್ತು ಪತ್ತೆಯಾಗಿಲ್ಲ. ಆದರೆ ಬೆದರಿಕೆ ಕರೆಯಿಂದ ಭದ್ರತೆ ಹೆಚ್ಚಿಸಲಾಗಿದೆ.

ದೆಹಲಿಯ ಚಾಣಾಕ್ಯಪುರಿ ವಲಯದಲ್ಲಿರುವ ಇಸ್ರೇಲ್ ಎಂಬಸಿ ಬಳಿ ಬಾಂಬ್ ಇಡಲಾಗಿದ್ದು ಸ್ಫೋಟ ನಡೆಯಲಿದೆ ಅನ್ನೋ ಬೆದರಿಕೆ ಕರೆ ಬಂದಿದೆ. ದೆಹಲಿ ಅಗ್ನಿಶಾಮಕ ದಳಕ್ಕೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಈ ಎಚ್ಚರಿಕೆ ನೀಡಿದ್ದಾನೆ. ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸ್, ಅಗ್ನಿಶಾಮಕ ದಳ ಹಾಗೂ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿ ಶೋಧ ನಡೆಸಿದೆ.  

ಹೊಸ ವರ್ಷ ಸಂಭ್ರಮದ ಬೆನ್ನಲ್ಲೇ ಮುಂಬೈನ 11 ಕಡೆ ಬಾಂಬ್ ದಾಳಿ ಬೆದರಿಕೆ, RBIಗೆ ಬಂತು ಮೇಲ್!

ಇಸ್ರೇಲ್ ಎಂಬಸಿ ಹಿಂಭಾಗದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅಪರಿಚಿತ ವ್ಯಕ್ತಿ ಬೆದರಿಕೆ ಕರೆ ಮಾಡಿದ್ದಾನೆ. ಇತ್ತ ದೆಹಲಿ ಪೊಲೀಸರು ಫೋನ್ ಕರೆ ಕುರಿತು, ಅನಾಮಕಿ ವ್ಯಕ್ತಿ ಕುರಿತು ತನಿಖೆ ಆರಂಭಿಸಿದೆ. ಈ ಬೆದರಿಕೆ ಬೆನ್ನಲ್ಲೇ ಇಸ್ರೇಲ್ ಎಂಬಸಿ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಇದೇ ವೇಳೆ ಹಲವೆಡೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇಂದು ಮುಂಬೈನ ಆರ್‌ಬಿಐ ಕಚೇರಿಗೂ ಇದೇ ರೀತಿ ಬಾಂಬ್ ಬೆದರಿಕೆ ಇಮೇಲ್ ಬಂದಿತ್ತು. ಮುಂಬೈನ 11 ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆರ್‌ಸಿಬಿ ಗವರ್ನರ್ ಶಶಿಕಾಂತ ದಾಸ್ ಹಾಗೂ ಕೇಂದ್ರ ಗೃಹ ಸಚಿವ ನಿರ್ಮಲಾ ಸೀತಾರಾಮನ್ ತಕ್ಷಣವೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಂಬೈ 11 ಕಡೆಗಳಲ್ಲಿ ಇಟ್ಟಿರುವ ಬಾಂಬ್ ಒಂದರ ಹಿಂದೆ ಒಂದರಂತೆ ಸ್ಫೋಟಗೊಳ್ಳಲಿದೆ ಎಂದು ಇಮೇಲ್ ಮೂಲಕ ಎಚ್ಚರಿಸಲಾಗಿತ್ತು.

ಮಂಗಳೂರಿಗೆ ಬರ್ತಿದ್ದ ಹಡಗು ದಾಳಿಕೋರರು ಸಮುದ್ರದ ಆಳದಲ್ಲಿದ್ರೂ ಪತ್ತೆ ಮಾಡ್ತೇವೆ: ರಾಜನಾಥ್‌ ಸಿಂಗ್ ಎಚ್ಚರಿಕೆ

ಪೊಲೀಸರು, ಬಾಂಬ್ ನಿಷ್ಕ್ರೀಯದಳ 11 ಕಡೆಗಳಿಗೆ ತೆರಳಿ ಶೋಧ ಕಾರ್ಯ ನಡೆಸಿದೆ. ಯಾವುದೇ ಅನುಮಾನಸ್ಪದ ವಸ್ತುಗಳ ಪತ್ತೆಯಾಗಿಲ್ಲ. ಆದರೆ ಮುಂಬೈನ ಹಲವು ಕಡೆಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. 

click me!