ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆ, ಎಪ್ರಿಲ್ 1ವರೆಗೆ ಇಡಿ ಕಸ್ಟಡಿ ವಿಸ್ತರಿಸಿದ ಕೋರ್ಟ್!

By Suvarna NewsFirst Published Mar 28, 2024, 4:24 PM IST
Highlights

ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿಸುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಹಿನ್ನಡೆಯಾಗಿದೆ. ಇದೀಗ ಕೋರ್ಟ್ ಮತ್ತೆ ನಾಲ್ಕು ದಿನ ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿಗೆ ಒಪ್ಪಿಸಿದೆ.

ನವದೆಹಲಿ(ಮಾ.28) ದೆಹಲಿ ಅಬಕಾರಿ ಹಗರಣದಲ್ಲಿ ಜೈಲು ಪಾಲಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಕಷ್ಟ ಮುಂದುವರಿದಿದೆ. ಬಂಧನದ ಬಳಿಕ ಮಾರ್ಚ್ 28ರ ವರೆಗೆ ಕೇಜ್ರಿವಾಲ್ ಅವರನ್ನು ಇಡಿ ಕಸ್ಟಡಿಗೆ ನೀಡಲಾಗಿತ್ತು. ಇದೀಗ ಮತ್ತೆ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ಪಡೆಯಲು ಇಡಿ ಅಧಿಕಾರಿಗಳು ಕೋರ್ಟ್‌ಗೆ ಮನವಿ ಮಾಡಿದ್ದರು. ಇತ್ತ ಅರವಿಂದ್ ಕೇಜ್ರಿವಾಲ್ ಪರ ಪ್ರಬಲ ವಾದ ಮಂಡಿಸಿದ್ದರೂ ಮನ್ನಣೆ ಸಿಗಲಿಲ್ಲ. ಕೇಜ್ರಿವಾಲ್ ಅವರನ್ನು ಇದೀಗ ಮತ್ತೆ 4 ದಿನ ಇಡಿ ಕಸ್ಚಡಿ ನೀಡಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಈ ಆದೇಶ ನೀಡಿದೆ. ಎಪ್ರಿಲ್ 1ರ ವರೆಗೆ ಕೇಜ್ರಿವಾಲ್ ಇಡಿ ಕಸ್ಟಡಿಯಲ್ಲೇ ಕಳೆಯಲಿದ್ದಾರೆ.

ಇಂದು ದೆಹಲಿ ಹೈಕೋರ್ಟ್ ಆದೇಶವೊಂದು ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಾರ್ಟಿ ವಿಶ್ವಾಸ ಇಮ್ಮಡಿಗೊಳಿಸಿತ್ತು. ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅರೆಸ್ಟ್ ಆಗಿರುವ ಸಿಎಂ ಜೈಲಿನಿಂದಲೇ ಆದೇಶ ನೀಡುತ್ತಿದ್ದಾರೆ. ಹೀಗಾಗಿ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಕೇಜ್ರಿವಾಲ ಪರ ಆದೇಶ ನೀಡಿತ್ತು. ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್, ಜೈಲಿನಿಂದ ಸರ್ಕಾರ ನಡೆಸಬಾರದು ಎಂದು ಎಲ್ಲೂ ಹೇಳಿಲ್ಲ ಎಂದಿತ್ತು. ಆ ತೀರ್ಪು ಆಪ್ ನಾಯಕರ ಸಂಭ್ರಮ ಇಮ್ಮಡಿಗೊಳಿಸಿತ್ತು. ಆದರೆ ದೆಹಲಿ ಹೈಕೋರ್ಟ್ ಬಳಿಕ ರೋಸ್ ಅವೆನ್ಯೂ ಕೋರ್ಟ್ ಆದೇಶ ಆಪ್ ನಾಯಕರ ನಿದ್ದೆಗೆಡಿಸಿದೆ. 

Breaking: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್‌ ನೀಡಿದ ದೆಹಲಿ ಹೈಕೋರ್ಟ್‌

ಅರವಿಂದ್ ಕೇಜ್ರಿವಾಲ್ ಬಂಧನ ಅಸಂವಿಧಾನಿಕ ಹಾಗೂ ಕಾನೂನುಬಾಹಿರ. ಕೇಜ್ರಿವಾಲ್ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ. ಇಲ್ಲ ಸಲ್ಲದ ಆರೋಪಗಳ ಮೇಲೆ ಬಂಧಿಸಲಾಗಿದೆ. ಈ ಬಂಧನ ಆಮ್ ಆದ್ಮಿ ಪಾರ್ಟಿಯನ್ನು ಮುಗಿಸುವ ಕುತುಂತ್ರ ಭಾಗವಾಗಿದೆ ಎಂದು ಕೇಜ್ರಿವಾಲ್ ಪರ ವಾದ ಮಂಡಿಸಲಾಗಿತ್ತು. ಇತ್ತ ಕೋರ್ಟ್‌ನಲ್ಲಿ ನೇರವಾಗಿ ಅರವಿಂದ್ ಕೇಜ್ರಿವಾಲ್ ತಮ್ಮ ವಾದ ಮಂಡಿಸಿದ್ದರು. ಯಾವುದೇ ಕೋರ್ಟ್ ನನ್ನನ್ನು ತಪ್ಪಿತಸ್ಥ ಎಂದು ಹೇಳಿಲ್ಲ. ನನ್ನ ವಿರುದ್ಧ ಆರೋಪಗಳು ಮಾತ್ರ ಇವೆ, ದಾಖಲೆಗಳಿಲ್ಲ ಎಂದಿದ್ದರು.

ಎಪ್ರಿಲ್ 1ರ ವೆರೆಗೆ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ನಾಲ್ಕು ದಿನಗಳ ಬಳಿಕ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ. ಈ ಕುರಿತು ಕೋರ್ಟ್‌ಗೆ ಮನವಿ ಮಾಡಲು ಸಿಬಿಐ ಸಜ್ಜಾಗಿದೆ. ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮಾರ್ಚ್ 21 ರಂದು ಕೇಜ್ರಿವಾಲ್‌ರನ್ನು ಬಂಧಿಸಿತ್ತು. ಕೋರ್ಟ್ ಮಾರ್ಚ್ 28ವರೆಗೆ ಇ.ಡಿ. ಕಸ್ಟಡಿಗೆ ನೀಡಿತ್ತು. ಇಂದು ಅವಧಿ ಅಂತ್ಯಗೊಂಡ ಕಾರಣ ಕೇಜ್ರಿವಾಲ್ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿ ಮತ್ತೆ ನಾಲ್ಕು ದಿನಗಳ ಕಾಲ ಕಸ್ಟಡಿ ಪಡೆಯುವಲ್ಲಿ ಯಶಸ್ವಿಯಾಗಿದೆ. 

ಅರವಿಂದ್‌ ಕೇಜ್ರಿವಾಲ್‌ ಬಂಧನ ವಿರೋಧಿಸಿ ವಕೀಲರ ಪ್ರತಿಭಟನೆ, ಎಚ್ಚರಿಕೆ ನೀಡಿದ ದೆಹಲಿ ಹೈಕೋರ್ಟ್‌

click me!