ದೆಹಲಿ ಅಬಕಾರಿ ಹಗರಣ, 15 ಆರೋಪಿಗಳ ಪೈಕಿ ಉಪ ಮುಖ್ಯಮಂತ್ರಿ ಸಿಸೋಡಿಯಾ ನಂ.1!

By Suvarna NewsFirst Published Aug 19, 2022, 9:52 PM IST
Highlights

ದೆಹಲಿ ಅಬಕಾರಿ ಹಗರಣ ಭಾರಿ ಕೋಲಾಹಲ ಸೃಷ್ಟಿಸಿದೆ. ಸಿಬಿಐ ದಾಳಿಗೆ ಒಳಗಾಗಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ವಿರುದ್ಧ ಎಫ್ಐಆರ್ ದಾಖಲಿಸಿದೆ. ಇದರಲ್ಲಿ 15 ಆರೋಪಿಗಳ ಪೈಕಿ ಸಿಸೋಡಿಯಾ ಮೊದಲ ಆರೋಪಿಯಾಗಿದ್ದಾರೆ. ಇದರ ನಡುವೆ ರಾಜಕೀಯ ಬಲು ಜೋರಾಗಿದೆ.

ನವದೆಹಲಿ(ಆ.19):  ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿರುವ ಹಗರದಡಿಯಲ್ಲಿ ಸಿಬಿಐ ಪೊಲೀಸರು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ದಾಳಿ ನಡೆಸಿದ್ದಾರೆ.  ಸಿಸೋಡಿಯಾ ಅವರ ಮನೆ ಸೇರಿದಂತೆ ದೇಶಾದ್ಯಂತ 7 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 20 ಸ್ಥಳಗಳ ಮೇಲೆ ದಾಳಿ ನಡೆಸಿ ತೀವ್ರ ಶೋಧ ಕಾರ್ಯ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡಿದೆ. ಸಿಬಿಐ ಅಧಿಕಾರಿಗಳು ದಾಖಲಿಸಿರುವ ಎಫ್ಐಆರ್‌ನಲ್ಲಿ 15 ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ. ಇದರಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಮೊದಲ ಆರೋಪಿಯಾಗಿದ್ದಾರೆ. ಈ ಬೆಳವಣಿಗೆ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿದೆ. ಇದು ದ್ವೇಷದ ರಾಜಕಾರಣ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದ್ದರೆ, ಪಾಪದ ಕೊಡ ತುಂಬಿದೆ ಎಂದು ಬಿಜೆಪಿ ಹೇಳಿದೆ. 

ಸಿಬಿಐ ಪೊಲೀಸರು ದಾಖಲಿಸಿರುವ ಎಫ್ಐಆರ್‌ನಲ್ಲಿ 11 ಪುಟಗಳ ದಾಖಲೆ ವಿವರವನ್ನು ನೀಡಲಾಗಿದೆ. ಭ್ರಷ್ಟಾಚಾರ, ಕ್ರಿಮಿನಲ್ ಪಿತೂರಿ ಹಾಗೂ ಸುಳ್ಳು ಖಾತೆಗಳ ಆರೋಪಗಳು ಸೇರಿವೆ.  15 ಆರೋಪಿಗಳ ಪೈಕಿ ಕೇಜ್ರಿವಾಲ್ ಆಪ್ತರ ಬಳಗವೇ ಇದರಲ್ಲಿದೆ. ಉಪಮುಖ್ಯಮಂತ್ರಿ ಸಿಸೋಡಿಯಾ ಈ ಹಗರಣದ  ಮೊದಲ ಆರೋಪಿ ಎಂದು ಉಲ್ಲೇಖಿಸಲಾಗಿದೆ. 

 

ದೆಹಲಿ ಅಬಕಾರಿ ಹಗರಣ, ಮನೀಷ್‌ ಸಿಸೋಡಿಯಾ ಮನೆ ಸೇರಿದಂತೆ 21 ಕಡೆ ಸಿಬಿಐ ದಾಳಿ!

ಸಿಸೋಡಿಯಾ ಅವರ ಗೃಹ ಮಾತ್ರವೇ ಅಲ್ಲದೆ, ದೆಹಲಿಯ ಐಎಎಸ್‌ ಅಧಿಕಾರಿ ಹಾಗೂ ಮಾಜಿ ಅಬಕಾರಿ ಆಯುಕ್ತ ಆರವ ಗೋಪಿ ಕೃಷ್ಣ ಮತ್ತು 19 ಇತರೆ ಸ್ಥಳಗಳಲ್ಲಿ ಶೋಧ ಕಾರ್ಯವನ್ನು ಸಿಬಿಐ ಅಧಿಕಾರಿಗಳು ನಡೆಸಿದ್ದಾರೆ. ಕಳೆದ ನವೆಂಬರ್‌ನಲ್ಲಿ ಜಾರಿಗೆ ಬಂದ ದೆಹಲಿ ಅಬಕಾರಿ ನೀತಿಯ ರಚನೆ ಹಾಗೂ ಜಾರಿಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದ ಸಿಬಿಐ ಈಗ ಕಾರ್ಯಾಚರಣೆಗೆ ಇಳಿದಿದೆ. ಸಿಸೋಡಿಯಾ ಅವರ ಕೇಂದ್ರ ದೆಹಲಿಯ ಮನೆಯಲ್ಲಿ ಸಿಬಿಐ ಶೋಧ ನಡೆಸುತ್ತಿದ್ದಾಗ, ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು ಜಮಾವಣೆಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?:
ದೆಹಲಿ ಸರ್ಕಾರ 2021-22ನೇ ಸಾಲಿನ ಅಬಕಾರಿ ನೀತಿಯನ್ನು ರೂಪಿಸಿತ್ತು. ಈ ವೇಳೆ 468 ಖಾಸಗಿ ಬಾರ್‌ಗಳಿಗೆ ಅನುಮತಿ ನೀಡಲಾಗಿತ್ತು. ಆದರೆ ಈ ನೀತಿಯ ಜಾರಿಯ ವೇಳೆ ಹಲವಾರು ಅಕ್ರಮಗಳು ನಡೆದಿವೆ ಎಂದು ಉಪರಾಜ್ಯಪಾಲ ವಿ.ಕೆ.ಸಕ್ಸೇನಾ ಅವರು ಕಳೆದ ತಿಂಗಳು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಅಲ್ಲದೆ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು. ಸಿಬಿಐ ತನಿಖೆಗೆ ಸಿಸೋಡಿಯಾ ಕೂಡ ಆಗ್ರಹಿಸಿದ್ದರು. ಮದ್ಯದ ಲೈಸೆನ್ಸ್‌ ಪಡೆದುಕೊಂಡವರಿಗೆ ಟೆಂಡರ್‌ ನಂತರವೂ ಅನೇಕ ಸವಲತ್ತುಗಳನ್ನು ನೀಡಲಾಗಿದೆ. ಇದರಿಂದಾಗಿ ಬೊಕ್ಕಸಕ್ಕೆ ನಷ್ಟವಾಗಿದೆ. ಟೆಂಡರ್‌ ಪಡೆದವರಿಗೆ ಕೋವಿಡ್‌ ಕಾರಣ ನೀಡಿ 144.36 ಕೋಟಿ ರು. ಶುಲ್ಕ ವಿನಾಯಿತಿ ಕೊಡಲಾಗಿದೆ. ಕಡಿಮೆ ಬಿಡ್‌ ಮಾಡಿದ್ದ ಒಬ್ಬರಿಗೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಎನ್‌ಒಸಿ ಸಿಕ್ಕಿಲ್ಲ ಎಂಬ ಕಾರಣದಿಂದ ಅವರು ನೀಡಿದ್ದ 30 ಕೋಟಿ ರು.ಗಳನ್ನು ಮರಳಿಸಲಾಗಿದೆ. ಆದರೆ ನಿಯಮಗಳಲ್ಲಿ ಅದಕ್ಕೆ ಅವಕಾಶವಿಲ್ಲ ಎಂಬ ಆರೋಪವಿದೆ.
 

click me!