
ಹೈದರಾಬಾದ್ (ಫೆ.13): ಪ್ರೀತಿಯೇ ಸಾವಿನ ಬಲೆಯಾಯಿತು. ಹತ್ತು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡು, ಮಗಳೇ ಪ್ರಪಂಚ ಎಂಬಂತೆ ಬದುಕುತ್ತಿದ್ದ ಮಗನನ್ನು ಕಳೆದುಕೊಂಡ ತಾಯಿಗೆ, ಅವಳೇ ಆಕೆಯ ಪಾಲಿನ ಯಮ ಎನಿಸಿದಳು. ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿಯಲ್ಲಿ ಸಂಭವಿಸಿದ ರಮಾದೇವಿಯ ಸಾವು ಆರಂಭದಲ್ಲಿ ಅಪಘಾತ ಎಂದು ಎಲ್ಲರೂ ಭಾವಿಸಿದ್ದರು. ಕೊನೆಗೆ ಪೊಲೀಸರು ಕೂಲಂಕಷ ತನಿಖೆ ನಡೆಸಿದಾಗ ಆಘಾತಕಾರಿ ಸತ್ಯಗಳು ಬೆಳಕಿಗೆ ಬಂದವು.
ಅಕ್ಕಪಕ್ಕದ ಮನೆಯಲ್ಲಿ ಮನೆಕೆಲಸ ಮಾಡಿಕೊಂಡು ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿ ನಿವಾಸಿ ರಮಾದೇವಿ ವಾಸವಿದ್ದರು. ಅವರ ಪತಿ ಹತ್ತು ವರ್ಷಗಳ ಹಿಂದೆ ಸಾವು ಕಂಡಿದ್ದರೆ, ಮನೆಗೆ ಆಧಾರವಾಗಬೇಕಿದ್ದ ಇದ್ದೊಬ್ಬ ಮಗ,ಯಾರಿಗೂ ತಿಳಿಸದೇ ಮನೆ ಬಿಟ್ಟು ಹೋಗಿದ್ದ. ರಮಾದೇವಿ ತನ್ನ ಮಗಳು ಲಕ್ಷ್ಮಿಯೊಂದಿಗೆ ಮನೆಯಲ್ಲಿ ವಾಸವಿದ್ದಳು.
ವಯಸ್ಸಿಗೆ ಬಂದ ಬಳಿಕ ಲಕ್ಷ್ಮೀಯನ್ನು ವಿಜಯವಾಡದ ಶ್ರೀನಿವಾಸ ರಾವ್ ಕಿಚ್ಚಿ ಎನ್ನುವವನೊಂದಿಗೆ ವಿವಾಹ ಮಾಡಿಕೊಟ್ಟಿದ್ದರು. ಅಂದಿನಿಂದ, ರಮಾದೇವಿ ಸತ್ತೇನಪಲ್ಲಿಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದರು. ತಿಂಗಳಲ್ಲಿ ಕೆಲವೊಮ್ಮೆ ಲಕ್ಷ್ಮಿ, ಅವರ ಪತಿ ಮತ್ತು ಮಕ್ಕಳು ರಮಾದೇವಿಯ ಮನೆಗೆ ಬಂದು ಹೋಗುತ್ತಿದ್ದರು. ಆದರೆ, ಈ ತಿಂಗಳ 7 ನೇ ತಾರೀಖಿನ ಸಂಜೆ, ರಮಾದೇವಿಯ ಮನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಮನೆಯಲ್ಲಿದ್ದ ರಮಾದೇವಿ ತನ್ನ ಹಾಸಿಗೆಯ ಮೇಲೆ ಮಲಗಿದ್ದ ರೀತಿಯಲ್ಲಿಯೇ ಬೆಂಕಿಯಲ್ಲಿ ಸಿಲುಕಿ ಸುಟ್ಟು ಕರಕಲಾದರು. ಆದರೆ, ಶಾರ್ಟ್ ಸರ್ಕ್ಯೂಟ್ ನಿಂದ ಈ ಅಪಘಾತ ಸಂಭವಿಸಿರಬೇಕು ಎಂದು ಎಲ್ಲರೂ ಭಾವಿಸಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದರು.
ಬಳಿಕ ಮಗಳು ಲಕ್ಷ್ಮಿಗೆ ಕರೆ ಮಾಡಿ ತನ್ನ ತಾಯಿಯ ಸಾವಿನ ಬಗ್ಗೆ ತಿಳಿಸಲಾಗಿತ್ತು. ಆದರೆ, ಲಕ್ಷ್ಮಿಯ ಪ್ರತಿಕ್ರಿಯೆಯಿಂದ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ಅದಾದ ಕೆಲವು ಗಂಟೆಗಳ ನಂತರ ಅವರು ಮತ್ತೆ ಕರೆ ಮಾಡಿದರು. ಈ ಬಾರಿ, ಫೋನ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿತ್ತು. ಇದು ರಮಾದೇವಿಯವರ ಸಾವಿನ ಬಗ್ಗೆ ಪೊಲೀಸರ ಅನುಮಾನವನ್ನು ಹೆಚ್ಚಿಸಿತು. ಅವರು ತಕ್ಷಣವೇ ಸುತ್ತಮುತ್ತಲಿನ ಪ್ರದೇಶದಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದರು. ಈ ಸಿಸಿಟಿವಿ ದೃಶ್ಯಗಳ ಮೂಲಕ, ರಮಾದೇವಿಯವರ ಮನೆಯಲ್ಲಿ ಅಪಘಾತ ಸಂಭವಿಸುವ ಸ್ವಲ್ಪ ಸಮಯದ ಮೊದಲು ಮಹಿಳೆಯೊಬ್ಬರು ಮನೆಯಿಂದ ಹೊರ ಹೋಗಿದ್ದಾರೆ ಎನ್ನುವುದು ಗೊತ್ತಾಗಿತ್ತು.
ಪೊಲೀಸರು ತಕ್ಷಣ ವಿಜಯವಾಡಕ್ಕೆ ಹೋಗಿ ಲಕ್ಷ್ಮಿಯನ್ನು ಬಂಧಿಸಿದರು. ಅವರು ತಮ್ಮದೇ ಆದ ಶೈಲಿಯಲ್ಲಿ ಲಕ್ಷ್ಮಿಯನ್ನು ಪ್ರಶ್ನಿಸಿದಾಗ, ಆಕೆ ಸತ್ಯ ಹೇಳಿದ್ದಾರೆ. ತಾಯಿ ರಮಾದೇವಿಗೆ ನಿದ್ರೆ ಮಾತ್ರೆಗಳನ್ನು ಲಕ್ಷ್ಮೀ ನೀಡಿದ್ದಳು. ಆಕೆ ಗಾಢ ನಿದ್ರೆಗೆ ಜಾರಿದ ನಂತರ, ಆಕೆಯ ಮೇಲೆ ಪೆಟ್ರೋಲ್ ಸುರಿದು ಲಕ್ಷ್ಮಿ ಬೆಂಕಿ ಹಚ್ಚಿದ್ದಾಳೆ. ಕೆಲವು ಸಮಯದಿಂದ, ತಾಯಿ ಮತ್ತು ಮಗಳು ಕುಟುಂಬದ ಆಸ್ತಿ ಮತ್ತು ಇತರ ಸಮಸ್ಯೆಗಳಿಗಾಗಿ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಇದರೊಂದಿಗೆ, ಲಕ್ಷ್ಮಿಯೇ ರಮಾದೇವಿಯನ್ನು ಕೊಂದಿದ್ದಾಳೆ ಎಂದು ಪೊಲೀಸರು ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಪೊಲೀಸರು ಆಕೆ ತನ್ನ ತಾಯಿಯನ್ನು ಕೊಲ್ಲುವ ಮೂಲ ಉದ್ದೇಶವೇನು ಅನ್ನೋದನ್ನು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ