
ಹಾಪುರ್ (ನ.28) ಅಂತ್ಯಸಂಸ್ಕಾರದ ವೇಳೆ, ಅಗ್ನಿಸ್ಪರ್ಶಕ್ಕೂ ಕಲವೇ ನಿಮಿಷ ಮೊದಲು ಸತ್ತ ವ್ಯಕ್ತಿ ಎದ್ದು ಬಂದ ಘಟನೆ ಹಲವು ಬಾರಿ ನಡೆದಿದೆ. ಆಸ್ಪತ್ರೆ ಶವಾಗಾರದಿಂದ ರುದ್ರಭೂಮಿಗೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಜೀವ ಬಂದ ಘಟನೆಗಳು ವರದಿಯಾಗಿದೆ. ಆದರೆ ಇದು ನೋಡುತ್ತಿದ್ದ ಸ್ಥಳೀಯರನ್ನೇ ಬೆಚ್ಚಿ ಬೀಳಿಸಿದ ಘಟನೆ. ಅಂತ್ಯಸಂಸ್ಕಾರಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ವಿಧಿವಿಧಾನಗಳೂ ಪೂರ್ಣಗೊಂಡಿತ್ತು. ಇನ್ನು ಅಗ್ನಿಸ್ಪರ್ಶ ಮಾತ್ರ ಬಾಕಿ. ಅಷ್ಟರಲ್ಲೇ ಚಿತೆಯಲ್ಲಿ ಶವವೇ ಇರಲಿಲ್ಲ. ಅಚ್ಚರಿಯಾದರೂ ಸತ್ಯ, ಚಿತೆಯಲ್ಲಿ ಶವ ಇರಲಿಲ್ಲ. ಬದಲಾಗಿ ಪ್ಲಾಸ್ಟಿಕ್ ಪ್ರತಿಮೆಯೊಂದು ಪ್ರತ್ಯಕ್ಷವಾಗಿತ್ತು. ಸ್ಥಳೀಯರು ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ. ಇದು ಹೇಗೆ ಸಾಧ್ಯ, ಕಾರಣವೇನು ಎಂದು ಕುತೂಹಲಗೊಂಡ ಸ್ಥಳೀಯರು ಪ್ರಶ್ನಿಸಿದಾಗ ಅಸಲಿ ವಿಚಾರ ಬಹಿರಂಗಗೊಂಡಿದೆ. ಈ ಘಟನೆ ಉತ್ತರ ಪ್ರದೇಶದ ಘರ್ಮುಕ್ತೇಶ್ವರ ಗಂಗಾ ಘಾಟ್ ಬಳಿ ನಡೆದಿದೆ.
ಹರ್ಯಾಣದಿಂದ ಐ20 ಕಾರಿನಲ್ಲಿ ನಾಲ್ವರು ಗಂಗಾ ಘಾಟ್ ಬಳಿ ಆಗಮಿಸಿದ್ದಾರೆ. ಅಂತ್ಯಸಂಸ್ಕಾರದ ವಿಧಿ ವಿಧಾನಕ್ಕೆ ಸ್ಥಳ ಬುಕ್ ಮಾಡಿದ್ದಾರೆ. ವಿಧಿಗಳನ್ನು ಪೂರ್ಣಗೊಳಿಸಲು ವ್ಯವಸ್ಥೆ ಮಾಡಿದ್ದರೆ. ಹಣ ಪಾವತಿ ಮಾಡಿ ಸಿದ್ಧತೆ ಮಾಡಿದ್ದಾರೆ. ನಾಲ್ವರು ವಿಧಿವಿಧಾನ ಬಹುತೇಕ ಪೂರ್ಣಗೊಂಡು ಅಗ್ನಿಸ್ಪರ್ಶಕ್ಕೆ ಕೆಲವೇ ನಿಮಿಷ ಮಾತ್ರ ಬಾಕಿ ಇತ್ತು. ಅಷ್ಟರಲ್ಲೇ ಸ್ಥಳೀಯರಿಗೆ ಅನುಮಾನ ಕಾಡಿದೆ. ಎಲ್ಲಾ ಅಂತ್ಯಸಂಸ್ಕಾರದ ರೀತಿ ಇರಲಿಲ್ಲ. ಹೀಗಾಗಿ ಹತ್ತಿರ ಹೋಗಿ ನೋಡಿದಾಗ ಗುಟ್ಟು ಬಯಲಾಗಿದೆ. ಮೃತದೇಹ ಇಟ್ಟಿರುವ ರೀತಿ, ಎಲ್ಲವೂ ಅನುಮಾನ ತರಿಸಿತ್ತು. ಹೀಗಾಗಿ ಕಟ್ಟಿಗೆ ಮೆಲ್ಲನೆ ಸರಿಸಿ ನೋಡಿದಾಗ ಚಿತೆಯಲ್ಲಿ ಶವ ಇರಲಿಲ್ಲ. ಶವದ ಬದಲು ಪ್ಲಾಸ್ಟಿಕ್ ಪ್ರತಿಮೆ ಪ್ರತ್ಯಕ್ಷವಾಗಿತ್ತು. ಸ್ಥಳೀಯರು ಮಧ್ಯಪ್ರವೇಸ ಮಾಡುತ್ತಿದ್ದಂತೆ ಇಬ್ಬರು ಯುವಕರು ಪರಾರಿಯಾಗಿದ್ದಾರೆ. ಮತ್ತಿಬ್ಬರನ್ನು ಸ್ಥಳೀಯರು ಹಿಡಿದ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಮಲ್ ಸೋಮಾನಿ ಹಾಗೂ ಆಶಿಶ್ ಖರಾನ ಇಬ್ಬರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ. ಈ ಇಬ್ಬರನ್ನು ಪೊಲೀಸರು ಪ್ರಶ್ನಿಸಿದಾಗ ಕೆಲ ಕತೆ ಹೇಳಿದ್ದಾರೆ. ಈ ಪೈಕಿ ಒಂದು ಕತೆ ಅಯ್ಯೋ ದೆಹಲಿ ಆಸ್ಪತ್ರೆಯಲ್ಲಿ ಶವ ನೀಡುವ ಬದಲು ಪ್ರತಿಮೆ ನೀಡಿದ್ದಾರೆ ಎಂದಿದ್ದಾರೆ. ಪೊಲೀಸರು ತಮ್ಮದೇ ಭಾಷೆಯಲ್ಲಿ ಪ್ರಶ್ನಿಸಿದಾಗ ಪೊಲೀಸರು ದಂಗಾಗಿದ್ದಾರೆ.ಕಮಲ್ ಸೋಮಾನಿಗೆ ಸರಿಸುಮಾರು 50 ಲಕ್ಷ ರೂಪಾಯಿ ಸಾಲ ಇತ್ತು. ಇದಕ್ಕಾಗಿ ಈತ ಸತ್ತಂತೆ ನಟಿಸಿಲ್ಲ. ಇದರಲ್ಲೂ ಟ್ವಿಸ್ಟ್. ಕಾರಣ ಈತ ತನ್ನ ಮಾಜಿ ಸಹೋದ್ಯೋಗಿ ಅಂಶುಲ್ ಕುಮಾರ್ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಕದ್ದಿದ್ದಾನೆ. ಇದು ಒಂದು ವರ್ಷ ಮೊದಲೇ ಈ ಕಳ್ಳತನ ಮಾಡಿದ್ದಾನೆ. ಬಳಿಕ ಅಂಶುಲ್ ಕುಮಾರ್ ಹೆಸರಿನಲ್ಲಿ ವಿಮೆ ಮಾಡಿದ್ದಾನೆ. ಕಳೆದ ಒಂದು ವರ್ಷದಿಂದ ಸಾಲ ಮಾಡಿ ವಿಮೆ ಕಂತು ಕಟ್ಟಿದ್ದಾನೆ. ಅಂಶುಲ್ ಕುಮಾರ್ ನಾಮಿನಿಯಾಗಿ ಕಮಲ್ ಸೋಮಾನಿ ಹೆಸರನ್ನು ಉಲ್ಲೇಖಿಸಿದ್ದಾನೆ. ಒಂದು ವರ್ಷವಾಗುತ್ತಿದ್ದಂತೆ ತನ್ನ ಸಾಲ ಕ್ಲೀಯರ್ ಮಾಡಲು ಅಂಶುಲ್ ಕುಮಾರ್ ಮೃತಪಟ್ಟ ಕತೆ ಕಟ್ಟಿ ಅಂತ್ಯಸಂಸ್ಕಾರ ನಡೆಸುವ ಪ್ಲಾನ್ ಮಾಡಿದ್ದಾನೆ. ಇದಕ್ಕಾಗಿ ಪ್ಲಾಸ್ಟಿಕ್ ಪ್ರತಿಮೆ ಹಿಡಿದು ಗಂಗಾ ತಟದಲ್ಲಿ ನೋಂದಣಿ ಮಾಡಿಕೊಂಡು ಅಂತ್ಯಸಂಸ್ಕಾರಕ್ಕೆ ಎಲ್ಲಾ ತಯಾರಿ ಮಾಡಿದಾಗಲೇ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳು ಹೇಳಿದ ಅಂಶುಲ್ ಕುಮಾರ್ ಕುರಿತು ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಅಂಶುಲ್ ಕುಮಾರ್ ಆರೋಗ್ಯವಾಗಿರುವುದು ಪತ್ತೆಯಾಗಿದೆ. ಅಂಶುಲ್ ಕುಮಾರ್ಗೆ ಈ ರೀತಿಯ ವಿಮೆ ಮಾಡಿರುವುದೇ ಗೊತ್ತಿಲ್ಲ. ಅಲ್ಲಿಗೆ ದೊಡ್ಡ ಪ್ಲಾನ್ ಬಟಾ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ