* ಕೊರೋನಾ ಮೂರನೇ ಅಲೆಯ ಬಗ್ಗೆ ಆತಂಕ
* ಸೆಪ್ಟೆಂಬರ್- ಅಕ್ಟೋಬರಲ್ಲಿ 3ನೇ ಅಲೆ ತುತ್ತತುದಿಗೆ
* ಸಂಖ್ಯಾಶಾಸ್ತ್ರೀಯ ಮಾದರಿ ಆಧರಿಸಿ ಐಐಟಿ ಕಾನ್ಪುರ ಅಧ್ಯಯನ
ನವದೆಹಲಿ(ಜೂ.22): ಕೊರೋನಾ ಮೂರನೇ ಅಲೆಯ ಬಗ್ಗೆ ಆತಂಕ ಎದುರಾಗಿರುವಾಗಲೇ, ಸೆಪ್ಟೆಂಬರ್- ಅಕ್ಟೋಬರ್ನಲ್ಲಿ 3ನೇ ಅಲೆ ತುತ್ತತುದಿಯನ್ನು ತಲುಪಲಿದೆ ಎಂದು ಐಐಟಿ ಕಾನ್ಪುರ ನಡೆಸಿದ ಅಧ್ಯಯನ ವರದಿಯೊಂದು ತಿಳಿಸಿದೆ.
ಸಂಖ್ಯಾಶಾಸ್ತ್ರೀಯ ಮಾದರಿಯನ್ನು ಆಧರಿಸಿ ಐಐಟಿ ಪ್ರಾಧ್ಯಾಪಕರಾದ ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ ಅವರ ನೇತೃತ್ವದ ತಂಡ ವರದಿ ಸಿದ್ಧಪಡಿಸಿದೆ. ಅದರಂತೆ ಮೂರನೇ ಅಲೆ ಅಕ್ಟೋಬರ್ನಲ್ಲಿ ತುತ್ತತುದಿಯನ್ನು ತಲುಪುವ ನಿರೀಕ್ಷೆ ಇದೆ. ಆದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿದರೆ 2ನೇ ಅಲೆಗಿಂತಲೂ ಕಡಿಮೆ ಗರಿಷ್ಠ ಮಟ್ಟವನ್ನು ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.
ಲಸಿಕೆಯವನ್ನು ಪರಿಗಣಿಸಿಲ್ಲ: ಆದರೆ, ಈ ಅಧ್ಯಯನಕ್ಕೆ ಲಸಿಕೆಯ ಪ್ರಭಾವನ್ನು ಪರಿಗಣಿಸಲಾಗಿಲ್ಲ. ಒಂದು ವೇಳೆ ಲಸಿಕೆಯ ಪ್ರಭಾವವನ್ನು ಪರಿಗಣಿಸಿದರೆ ಮೂರನೇ ಅಲೆಯ ತುತ್ತತುದಿ 2ನೇ ಅಲೆಗಿಂತಲೂ ಗಣನೀಯ ಪ್ರಮಾಣದಲ್ಲಿ ಇಳಿಕೆ ಆಗುವ ಸಾಧ್ಯತೆ ಇದೆ ಎಂಬುದಾಗಿಯೂ ವರದಿಯಲ್ಲಿ ತಿಳಿಸಲಾಗಿದೆ.
ಅಧ್ಯಯನ ವರದಿಯಲ್ಲಿ ಏನಿದೆ?
ಜೂ.15ರವೇಳೆಗೆ ಭಾರತ ಸಂಪೂರ್ಣವಾಗಿ ಅನ್ಲಾಕ್ ಆಗಲಿದ್ದು, ಜನಜೀವನ ಸಹಜಸ್ಥಿತಿಗೆ ಮರಳಿದೆ ಎಂಬ ಸನ್ನಿವೇಶದಲ್ಲಿ 2ನೇ ಅಲೆ ಮುಕ್ತಾಯದ ಬಳಿಕ ಮೂರು ರೀತಿಯ ಸನ್ನಿವೇಶವನ್ನು ಅಧ್ಯಯನ ಗುರುತಿಸಿದೆ.
ಸಾಧ್ಯತೆ-1 (ಸಾಮಾನ್ಯ ಸ್ಥಿತಿಗೆ ಮರಳುವಿಕೆ): ಅಕ್ಟೋಬರ್ ವೇಳೆಗೆ 3ನೇ ಅಲೆ ತುತ್ತತುದಿಗೆ. ಆದರೆ 2ನೇ ಅಲೆಗಿಂತ ಕಡಿಮೆ ಹಾನಿ.
ಸಾಧ್ಯತೆ-2 (ವೈರಸ್ ರೂಪಾಂತರ): ಸೆಪ್ಟೆಂಬರ್ ವೇಳೆಗೆ 3ನೇ ಅಲೆ. 3ನೇ ಅಲೆ ತುತ್ತತುದಿಯ ಪರಿಣಾಮವು ಹೆಚ್ಚು.
ಸಾಧ್ಯತೆ-3 (ಕಠಿಣ ನಿಯಂತ್ರಣ): ಕಠಿಣ ಕೋವಿಡ್ ಮಾರ್ಗಸೂಚಿ ಪಾಲಿಸಿದರೆ, ಅಕ್ಟೋಬರ್ವರೆಗೂ 3ನೇ ಅಲೆ ಮುಂದೂಡಬಹುದು. 3ನೇ ಅಲೆಯ ಪರಿಣಾಮ 2ನೇ ಅಲೆಗಿಂತ ಕಡಿಮೆ