ನಿಜವಾಗುತ್ತಾ ಐಐಟಿ ಕಾನ್ಪುರ ಭವಿಷ್ಯ?

By Suvarna NewsFirst Published Jun 4, 2022, 10:17 AM IST
Highlights

* ಕೋವಿಡ್‌ ಭಾರೀ ಏರಿಕೆ: 4041 ಕೇಸು, 10 ಸಾವು

* ನಿಜವಾಗುತ್ತಾ ಐಐಟಿ ಕಾನ್ಪುರ ಭವಿಷ್ಯ?

* ಜೂ.22- ಅ.24ವರೆಗೆ ಕೋವಿಡ್‌ ಅಲೆ ಎಂದಿದ್ದ ತಜ್ಞರು

ಹೈದರಾಬಾದ್‌(ಜೂ.04): ದೇಶದಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದು ಜೂನ್‌ ಅಂತ್ಯದ ವೇಳೆಗೆ ದೇಶದಲ್ಲಿ ಕೋವಿಡ್‌ ನಾಲ್ಕನೇ ಅಲೆ ಕಾಣಿಸಿಕೊಳ್ಳಬಹುದು ಎಂದು ಐಐಟಿ ಕಾನ್ಪುರ ಕಳೆದ ಫೆಬ್ರವರಿಯಲ್ಲೇ ಮುನ್ಸೂಚನೆ ನಿಜವಾಗುವ ಆತಂಕಕ್ಕೆ ಕಾರಣವಾಗಿದೆ. ಜೂ.22ರಿಂದ ಅ.24ರವರೆಗೆ ನಾಲ್ಕನೇ ಅಲೆ ಭಾರತವನ್ನು ಕಾಡಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದರು.

ಭಾರತದಲ್ಲಿ ಕೋವಿಡ್‌ 4ನೇ ಅಲೆಯಿಂದ ಸುಮಾರು 4 ತಿಂಗಳುಗಳ ಕಾಲ ಸಮಸ್ಯೆಯಾಗಬಹುದು. ಸೋಂಕಿನ ತೀವ್ರತೆ ಹೊಸದಾಗಿ ರೂಪುಗೊಳ್ಳುವ ರೂಪಾಂತರಿ ತಳಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ್ದರು. ಈಗ ದೇಶದಲ್ಲಿ ಒಮಿಕ್ರೋನ್‌ ರೂಪಾಂತರಿಯಾದ ಬಿಎ4 ಸೋಂಕು ಭಾರತದಲ್ಲಿ ಕಾಣಿಸಿಕೊಂಡಿದೆ. 4ನೇ ಅಲೆ ಭಾರತದಲ್ಲಿ ಆ.15ರಿಂದ 31ರ ಸಮಯದಲ್ಲಿ ಉತ್ತುಂಗಕ್ಕೇರಬಹುದು ಎಂದು ತಜ್ಞರು ಹೇಳಿದ್ದಾರೆ.

ಕೋವಿಡ್‌ ಭಾರೀ ಏರಿಕೆ: 4041 ಕೇಸು, 10 ಸಾವು

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿದ್ದು, ಶುಕ್ರವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 4041 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಸುಮಾರು 84 ದಿನಗಳ ನಂತರ ದೇಶದಲ್ಲಿ 4000ಕ್ಕೂ ಹೆಚ್ಚು ದೈನಂದಿನ ಪ್ರಕರಣಗಳು ದಾಖಲಾಗಿವೆ.

ಸಕ್ರಿಯ ಸೋಂಕಿತರ ಸಂಖ್ಯೆಯು 21,177ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ 1,668 ಹೊಸ ಪ್ರಕರಣಗಳು ಸೇರಿಕೊಂಡಿವೆ.

ಇದೇ ವೇಳೆಯಲ್ಲಿ ಒಟ್ಟು 10 ಸೋಂಕಿತರು ಸಾವಿಗೀಡಾಗಿದ್ದಾರೆ. ಕೇರಳದಲ್ಲಿ 6, ದೆಹಲಿಯಲ್ಲಿ 2 ಹಾಗೂ ಮಹಾರಾಷ್ಟ್ರ ಹಾಗೂ ನಾಗಾಲ್ಯಾಂಡಿನಲ್ಲಿ ತಲಾ 1 ಸಾವು ವರದಿಯಾಗಿದೆ.

ದೈನಂದಿನ ಪಾಸಿಟಿವಿಟಿ ದರವು ಶೇ.0.95ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ.0.73ಕ್ಕೆ ಏರಿಕೆಯಾಗಿದೆ. ಕೋವಿಡ್‌ ಚೇತರಿಕೆ ದರವು ಶೇ.98.74ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 193.83 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

 

click me!