
ನವದೆಹಲಿ[ಮಾ.17]: ಯುರೋಪ್ ದೇಶಗಳು ಕೊರೋನಾ ಸೋಂಕಿನ ಹೊಸ ಕೇಂದ್ರಸ್ಥಾನವಾಗಿ ಹೊರಹೊಮ್ಮಿರುವ ಬೆನ್ನಲ್ಲೇ, ಮಾ.18ರಿಂದ ಮಾ.31ರವರೆಗೂ ಯುರೋಪ್ ರಾಷ್ಟ್ರಗಳು, ಟರ್ಕಿ ಹಾಗೂ ಬ್ರಿಟನ್ ರಾಷ್ಟ್ರಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರ ಮೇಲೆ ಭಾರತ ಸರ್ಕಾರ ನಿರ್ಬಂಧ ಹೇರಿದೆ.
ಮಲೇಷ್ಯಾ, ಈಜಿಪ್ಟ್ ಬಾಗಿಲು ಬಂದ್
ಮಲೇಷ್ಯಾ ಸರ್ಕಾರ ತನ್ನ ಯಾವುದೇ ನಾಗರಿಕರು ವಿದೇಶಕ್ಕೆ ತೆರಳುವುದನ್ನು ಮತ್ತು ವಿದೇಶಿಗರು ತನ್ನ ದೇಶಕ್ಕೆ ಆಗಮಿಸುವುದನ್ನು ಪೂರ್ಣವಾಗಿ ನಿಷೇಧಿಸಿದೆ. ಈಜಿಪ್ಟ್ ಕೂಡಾ ವಿದೇಶಕ್ಕೆ ತನ್ನ ಎಲ್ಲಾ ವಿಮಾನಗಳ ಸಂಚಾರವನ್ನು ತಕ್ಷಣದಿಂದ ರದ್ದುಪಡಿಸಿದೆ. ಮತ್ತೊಂದೆಡೆ ಅರ್ಮೇನಿಯಾ ದೇಶ ತುರ್ತುಪರಿಸ್ಥಿತಿ ಘೋಷಿಸುವ ಮೂಲಕ ರೋಗ ನಿಯಂತ್ರಣಕ್ಕೆ ಮುಂದಾಗಿದೆ.
ಕೈದಿಗಳ ಬಗ್ಗೆ ಸುಪ್ರೀಂ ಕಳವಳ
ದೇಶಾದ್ಯಂತ 114 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿರುವ ಬೆನ್ನಲ್ಲೇ, ದೇಶದೆಲ್ಲೆಡೆ ಜೈಲುಗಳಲ್ಲಿರುವ ಭಾರೀ ಸಂಖ್ಯೆಯ ಕೈದಿಗಳ ಸ್ಥಿತಿಗತಿ ಬಗ್ಗೆ ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ. 1339 ಜೈಲುಗಳಲ್ಲಿ 4,66,084 ಮಂದಿ ಸೆರೆವಾಸ ಅನುಭವಿಸುತ್ತಿದ್ದಾರೆ. ಒಂದು ವೇಳೆ ಕೊರೋನಾ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳದಿದ್ದರೆ, ಭಾರತದಲ್ಲಿನ ಪರಿಸ್ಥಿತಿ ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಮಾ.23ರಂದು ಈ ಬಗ್ಗೆ ಮತ್ತೆ ವಿಚಾರಣೆ ನಡೆಸುವುದಾಗಿ ಸುಪ್ರೀಂ ಹೇಳಿದೆ.
ಇರಾನ್ನಿಂದ 53 ಜನ ಭಾರತಕ್ಕೆ
ಅತಿಹೆಚ್ಚು ಕೊರೋನಾ ಪೀಡಿತ ರಾಷ್ಟ್ರಗಳಲ್ಲಿ ಒಂದಾಗಿರುವ ಇರಾನ್ನಿಂದ ಮತ್ತೆ 53 ಭಾರತೀಯರನ್ನು ರಕ್ಷಣೆ ಮಾಡಲಾಗಿದೆ. ತನ್ಮೂಲಕ ಇರಾನ್ನಿಂದ ಇದುವರೆಗೂ ಒಟ್ಟು 389 ಭಾರತೀಯ ನಾಗರಿಕರ ರಕ್ಷಣೆ ಮಾಡಿದಂತಾಗಿದೆ. ಸೋಮವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ 53 ಮಂದಿಯನ್ನು ಆ ನಂತರ ರಾಜಸ್ಥಾನದ ಜೈಸಲ್ಮೇರ್ಗೆ ಏರ್ ಇಂಡಿಯಾ ವಿಮಾನದಲ್ಲಿ ರವಾನಿಸಲಾಯಿತು. ಅವರನ್ನು ಇಲ್ಲಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ಪರೀಕ್ಷೆ ನಡೆಸಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ