
ತಿರುವನಂತಪುರ[ಫೆ.04]: ಚೀನಾದಲ್ಲಿ 361 ಮಂದಿಯನ್ನು ಬಲಿ ಪಡೆದಿರುವ ಹಾಗೂ ವಿಶ್ವಾದ್ಯಂತ ಭೀತಿ ಮೂಡಿಸಿರುವ ಮಾರಕ ಕೊರೋನಾವೈರಸ್ ಮತ್ತೊಬ್ಬ ಭಾರತೀಯ ಪ್ರಜೆಗೆ ತಗುಲಿದೆ. ಇದರಿಂದಾಗಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರಕ್ಕೇರಿಕೆಯಾಗಿದೆ. ಮೂವರೂ ಸೋಂಕಿತರು ಕೇರಳದವರೇ ಆಗಿದ್ದಾರೆ.
ಕೊರೋನಾ ಸೋಂಕಿನ ಕೇಂದ್ರ ಬಿಂದುವಾಗಿರುವ ಚೀನಾದ ವುಹಾನ್ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯಲ್ಲಿ ಸೋಂಕು ದೃಢಪಟ್ಟಿದೆ. ಆ ವಿದ್ಯಾರ್ಥಿಯನ್ನು ಕಾಸರಗೋಡು ಜಿಲ್ಲೆಯ ಕಾಂಞಂಗಾಡ್ ಜಿಲ್ಲಾಸ್ಪತ್ರೆಯ ಪ್ರತ್ಯೇಕ ಕೊಠಡಿಯಲ್ಲಿ ಇಡಲಾಗಿದೆ. ದೇಹಸ್ಥಿತಿ ಸ್ಥಿರವಾಗಿದೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ವಿಧಾನಸಭೆಗೆ ಸೋಮವಾರ ತಿಳಿಸಿದರು.
ಭಾನುವಾರದವರೆಗೆ 104 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಮೂರೂ ಪ್ರಕರಣಗಳೂ ಕೇರಳದವೇ ಆಗಿವೆ. ಈ ಹಿಂದೆ ತ್ರಿಶ್ಶೂರು ಹಾಗೂ ಆಲಪ್ಪುಳದಲ್ಲಿ ಪ್ರಕರಣಗಳು ಪತ್ತೆಯಾಗಿದ್ದವು. ಆ ಸೋಂಕಿತರು ಕೂಡ ಚೀನಾದಿಂದಲೇ ಬಂದವರಾಗಿದ್ದರು.
ಚೀನಾ ಹಾಗೂ ಕೊರೋನಾ ಸೋಂಕಿನ ಇನ್ನಿತರೆ ದೇಶಗಳಿಗೆ ಹೋಗಿ ಬಂದಿರುವ ಇತಿಹಾಸವುಳ್ಳ 1999 ವ್ಯಕ್ತಿಗಳನ್ನು ಕೇರಳದಲ್ಲಿ ಪರಿಶೀಲನೆಯಲ್ಲಿಡಲಾಗಿದೆ. ಆ ಪೈಕಿ 75 ಮಂದಿಯನ್ನು ಆಸ್ಪತ್ರೆಗಳ ಪ್ರತ್ಯೇಕ ಕೊಠಡಿಯಲ್ಲಿಡಲಾಗಿದೆ. ಉಳಿಕೆ 1924 ಮಂದಿಗೆ ಅವರ ಮನೆಯಲ್ಲೇ ನಿಗಾ ವಹಿಸಲಾಗಿದೆ. ಸಾರ್ವಜನಿಕ ಸಮಾರಂಭ ಹಾಗೂ ಕಾರ್ಯಕ್ರಮದಲ್ಲಿ ಭಾಗಿಯಾಗದಂತೆ, ಮನೆಯಿಂದ ಹೊರಗಡೆ ಹೋಗದಂತೆ ಸೂಚಿಸಲಾಗಿದೆ. 28 ದಿನಗಳ ಕಾಲ ಇವರ ಮೇಲೆ ನಿಗಾ ಇಟ್ಟಿರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ