Congress President Election: ರಾಜ್ಯಸಭಾ ವಿಪಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್‌ ಖರ್ಗೆ ರಾಜೀನಾಮೆ!

By Santosh NaikFirst Published Oct 1, 2022, 12:18 PM IST
Highlights

ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಹಿರಿಯ ರಾಜಕಾರಣಿ ಮಲ್ಲಿಕಾರ್ಜನ್‌ ಖರ್ಗೆ, ರಾಜ್ಯಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ರಾಜೀನಾಮೆ ಪ್ರತ್ರವನ್ನು ಅವರು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದಾರೆ.

ನವದೆಹಲಿ (ಅ. 1): ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೇರುವ ಪ್ರಬಲ ಅಭ್ಯರ್ಥಿಯಾಗಿರುವ ಹಿರಿಯ ನಾಯಕ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜಸ್ಥಾನದದ ಉದಯಪುರದಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂದು ನಿರ್ಣಯ ಮಂಡನೆಯಾದ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರ ದೊಡ್ಡ ಬೆಂಬಲದೊಂದಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ದಾರೆ. ಬಹುತೇಕ ಅವರೇ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗುವುದು ಖಚಿತವಾಗಿದೆ. ಶುಕ್ರವಾರ ಅವರು ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಇದ್ದ ಕಾಂಗ್ರೆಸ್‌ ನಾಯಕರನ್ನು ನೋಡಿ, ಎದುರಾಳಿಯಾಗಿರುವ ಶಶಿ ತರೂರ್‌ ಕೂಡ ಕಾಂಗ್ರೆಸ್‌ ಹೈಕಮಾಂಡ್‌ಅನ್ನು ಟೀಕೆ ಮಾಡಿದ್ದರು. ಅಧ್ಯಕ್ಷ ಪದವಿಗೆ ಅವರೇ ಅಧಿಕೃತ ಅಭ್ಯರ್ಥಿ ಎಂದು ಬಿಂಬಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಇಂದು ಅವರು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿ ಕಾರ್ಜುನ ಖರ್ಗೆ ಅವರೊಂದಿಗೆ ಸಂಸದ ಶಶಿ ತರೂರ್‌, ಜಾರ್ಖಂಡ್‌ನ ಕೆಎನ್‌ ತ್ರಿಪಾಠಿ ಕೂಡ ಸ್ಪರ್ಧೆ ಮಾಡಿದ್ದಾರೆ.

ಈ ಮೂವರು ಕೂಡ ಶುಕ್ರವಾರ ಅಧ್ಯಕ್ಷ ಪದವಿಗೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕರ್ನಾಟಕ ಹಿರಿಯ ನಾಯಕ ಗಾಗೂ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಗೆಲ್ಲುವ ಅಭ್ಯರ್ಥಿ ಎಂದೇ ಹೇಳಲಾಗಿದೆ. ಅದಲ್ಲದೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್‌ನಾಥ್‌ ಕೂಡ ಅವರಿಗೆ ಬೆಂಬಲ ನೀಡಿದ್ದಾರೆ. ಇನ್ನು ಶಶಿ ತರೂರ್‌ ಕೂಡ ತಮಗೆ ಉತ್ತಮ ಬೆಂಬಲವಿದ್ದು ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನೊಂದೆಡೆ ಕೆಎನ್‌ ತ್ರಿಪಾಠಿ ಜಾರ್ಖಂಡ್‌ನ ಮಾಜಿ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ.

ಅಶೋಕ್ ಗೆಹ್ಲೋಟ್, ದಿಗ್ವಿಜಯ್ ಸಿಂಗ್, ಎ.ಕೆ. ಆಫ್. ಆ್ಯಂಟನಿ, ಅಂಬಿಕಾ ಸೋನಿ ಮತ್ತು ಮುಕುಲ್ ವಾಸ್ನಿಕ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ನೆಚ್ಚಿನ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಹಲವು ಮುಖಂಡರು ಅವರ ಜತೆ ಕಾಣಿಸಿಕೊಂಡಿದ್ದರು. ಅನೇಕ ಜಿ-23 ನಾಯಕರು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಬೆಂಬಲಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಗೆದ್ದರೆ, ಎಸ್ ನಿಜಲಿಂಗಪ್ಪ (S Nijalingappa) ನಂತರ ಕರ್ನಾಟಕದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ (President of the All India Congress Committee) ಎರಡನೇ ನಾಯಕರಾಗಿದ್ದಾರೆ. ಗೆದ್ದರೆ ಜಗಜೀವನ್ ರಾಮ್ ನಂತರ ಈ ಹುದ್ದೆ ಅಲಂಕರಿಸಿದ ಎರಡನೇ ದಲಿತ ನಾಯಕ(Dalit Leader) ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಖರ್ಗೆ ಅವರು 50 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.

ಪಕ್ಷ ಕೊಡುವ ಜವಾಬ್ದಾರಿ ನಿಭಾಯಿಸುವೆ : ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಖರ್ಗೆ ಪ್ರತಿಕ್ರಿಯೆ

ಗಾಂಧಿ ಪರಿವಾರಕ್ಕೆ ನಿಷ್ಠ ವ್ಯಕ್ತಿಯಾಗಿರುವ 80 ವರ್ಷದ ಮಲ್ಲಿಕಾರ್ಜುನ ಖರ್ಗೆ ತಮ್ಮ ರಾಜಕೀಯ ಜೀವನದಲ್ಲಿ ಹಲವು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಈ ಎಲ್ಲಾ ಸಮಯದಲ್ಲೂ ಅವರಿಗೆ ಮುಳುವಾಗಿದ್ದು ಅವರ ಆಪ್ತ ಸ್ನೇಹಿತರೇ ಎನ್ನುವುದು ವಿಶೇಷ. 1999, 2004 ಹಾಗೂ 2013ರಲ್ಲಿ ಅವರಿಗೆ ಸಿಎಂ ಹುದ್ದೆಗೇರುವ ಅವಕಾಶವಿತ್ತಾದರೂ, ಕ್ರಮವಾಗಿ ಎಸ್‌ಎಂಕೃಷ್ಣ, ಧರ್ಮಸಿಂಗ್‌ ಹಾಗೂ ಸಿದ್ಧರಾಮಯ್ಯ ಮುಂದೆ ಶರಣಾಗಿದ್ದರು.

ಕಾಂಗ್ರೆಸ್‌ ತೊರೆದ ಗುಲಾಂ ನಬಿ ಆಜಾದ್‌: ಅಧಿಕಾರ ಅನುಭವಿಸಿ ರಾಜೀನಾಮೆ ಸರಿಯಲ್ಲ: ಖರ್ಗೆ

ಆದರೆ ಮಾಜಿ ವಿದ್ಯಾರ್ಥಿ ನಾಯಕ, ಗುಲ್ಬರ್ಗ ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಒಂಬತ್ತು ಬಾರಿ ಶಾಸಕರಾಗಿರುವ ಅವರು ಎಂದಿಗೂ ಭರವಸೆ ಕಳೆದುಕೊಳ್ಳಲಿಲ್ಲ, ಬಂಡಾಯವೆದ್ದರು. ಕಾಂಗ್ರೆಸ್‌ನ ಅತ್ಯಂತ ಪ್ರಮುಖ ದಲಿತ ಮುಖಗಳಲ್ಲಿ ಒಬ್ಬರು ಎನಿಸಿಕೊಂಡರು. ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಹಿಡಿತ ಹೊಂದಲು ಪ್ರಬಲವಾಗಿ ಸಹಾಯ ಮಾಡಿದರು. ಇದಕ್ಕಾಗಿ ಅವರಿಗೆ ರಾಜ್ಯಸಭೆ ಹಾಗೂ ಲೋಕಸಭೆಗಳಲ್ಲಿ ಪ್ರತಿಪಕ್ಷದ ನಾಯಕರಾಗುವಂಥ ರಿವಾರ್ಡ್‌ಗಳನ್ನೂ ಕೂಡ ಪಕ್ಷ ನೀಡಿತ್ತು.

click me!