Congress President Election: ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

Published : Oct 14, 2022, 11:07 AM IST
Congress President Election: ಗಾಂಧಿ ಪರಿವಾರ ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸಾರಾಂಶ

ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಅಕ್ಟೋಬರ್‌ 17 ರಂದು ನಡೆಯಲಿರುವ ಚುನಾವಣೆಗೆ ಅಧ್ಯಕ್ಷ ಪದವಿಗೆ ಸ್ಪರ್ಧೆ ಮಾಡಿರುವ ತಿರುವನಂತಪುರ ಸಂಸದ ಶಶಿ ತರೂರ್‌ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಮಾತಿನ ಸಮರ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ನನ್ನನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಶಶಿ ತರೂರ್‌ ಹೇಳಿರುವ ನಡುವೆ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ.

ನವದೆಹಲಿ (ಅ.14): ಕಾಂಗ್ರೆಸ್ ಪಕ್ಷದಲ್ಲಿಯೇ ನನಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಚುನಾವಣೆಗೆ ಸ್ಪರ್ಧೆ ಮಾಡಿರುವ ಶಶಿ ತರೂರ್‌ ಹೇಳಿರುವ ನಡುವೆಯೇ ಮಲ್ಲಿಕಾರ್ಜುನ ಖರ್ಗೆ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದು ನಾನಾಗಿಯೇ ಆಪೇಕ್ಷೆ ಪಟ್ಟು ನಿಂತಿರುವ ಚುನಾವಣೆಯಲ್ಲ ಎಂದಿರುವ ಹಿರಿಯ ನಾಯಕ, ದೇಶದಲ್ಲಿ ಗಾಂಧಿ ಪರಿವಾರವನ್ನು ಬಿಟ್ಟು ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಪದವಿಯ ಚುನಾವಣೆಗೆ ನಮ್ಮ ಎಲ್ಲಾ ನಾಯಕರು ಒತ್ತಾಯ ಮಾಡಿದ ಮೇಲೆಯೇ ಸ್ಪರ್ಧೆ ಮಾಡಿದ್ದೇನೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಚುನಾವಣೆಯಲ್ಲಿ ನನಗೆ ಮತ ಹಾಕುವಂತೆ ಹತ್ತು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದೇನೆ. ಇನ್ನೂ ಒಂದಷ್ಟು ರಾಜ್ಯಗಳಲ್ಲಿ ಪ್ರವಾಸ ಮಾಡುವುದು ಬಾಕಿ ಇದೆ ಎಂದು ಹೇಳಿದ್ದಾರೆ. ಚುನಾವಣೆಗೆ ನಿಂತವರು ಸಂಪ್ರದಾಯದಂತೆ ಮತ ಕೇಳುವುದು ವಾಡಿಕೆ. ಅದರಂತೆ ರಾಜ್ಯಗಳಿಗೆ ಭೇಟಿ ನೀಡಿ ಮತ ಕೇಳುತ್ತಿದ್ದೇವೆ. ರಾಜ್ಯದ ಹಲವು ನಾಯಕರಿಗೂ ಫೋನ್‌ನಲ್ಲಿ ಮಾತನಾಡಿ ಮತ ಕೇಳಿದ್ಧೇನೆ. ಅಧ್ಯಕ್ಷ ಚುನಾವಣೆಯಲ್ಲಿ ಗೆಲುವು ಕಾಣುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ ಎಂದು 80 ವರ್ಷದ ಹಿರಿಯ ನಾಯಕ ಹೇಳಿದ್ದಾರೆ.

ಪ್ರತಿ ಪಕ್ಷದಲ್ಲಿ ಪ್ರಮುಖ ನಾಯಕರು ಇರುತ್ತಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಕುಟುಂಬದವರೇ ಪ್ರಮುಖ ನಾಯಕರು. ಕಾಂಗ್ರೆಸ್‌ಗೆ ಪಕ್ಷಕ್ಕಾಗಿ ಗಾಂಧಿ ಪರಿವಾರ ಬಹಳಷ್ಟು ತ್ಯಾಗ ಮಾಡಿದೆ. ಸೋನಿಯಾ ಗಾಂಧಿ ಕೂಡ ಸಾಕಷ್ಟು ಹೋರಾಟವನ್ನು ಮಾಡಿದ್ದಾರೆ. ಬಿಜೆಪಿ ನಮ್ಮ ಸರ್ಕಾರಗಳನ್ನ ಕೆಡವುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದೆ. ಇದನ್ನೆಲ್ಲ ಗಮನಿಸಿಕೊಂಡು ಅವರ ಸಲಹೆ, ಮಾರ್ಗದರ್ಶನ ಪಡೆಯುತ್ತೇನೆ. ಇದರಲ್ಲಿ ನಾಚಿಕೆ ಏನಿದೆ, ತಪ್ಪುಗಳಿದ್ದರೆ ತಿದ್ದುಕೊಳ್ಳುತ್ತೇನೆ ಎಂದು (Mallikarjun Kharge) ಹೇಳಿದ್ದಾರೆ.

ಗಾಂಧಿ ಕುಟುಂಬ ಕಾಂಗ್ರೆಸ್‌ನ ಶಕ್ತಿ ಕೇಂದ್ರವಲ್ಲ, ಆದರೆ, ಅವರ ಅನುಭವವನ್ನು ಪಡೆಯುವುದರಲ್ಲಿ ತಪ್ಪಿಲ್ಲ. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿರುವಂಥ ವ್ಯಕ್ತಿ, ರಾಜ್ಯದಲ್ಲೂ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದ ವೇಳೆಯೂ ಇದನ್ನೇ ಹೇಳಿದ್ದೆ. ನನ್ನೊಬ್ಬನ ಕೈಯಿಂದ ಎಲ್ಲವೂ ಸಾಧ್ಯವಿಲ್ಲ. ಕೆಲವರು ನಾನು ಅಂದುಕೊಂಡು ತಿರುಗಾಟ ಮಾಡ್ತಾರೆ. ನಾವು ಅಂದ್ರೆ ಪಕ್ಷಕ್ಕೆ ಒಳ್ಳೆಯದು. ಯಾಕೆಂದರೆ ರಾಜಕೀಯ  (Politics) ಎನ್ನುವುದು ವೈಯಕ್ತಿಕ ಹೋರಾಟ ಅಲ್ಲ. ಉದಯಪುರ ನಿರ್ಧಾರಗಳನ್ನು ಜಾರಿ ಮಾಡುವುದು ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

"ಸೋನಿಯಾ ಗಾಂಧಿ ನನ್ನ ಹೆಸರನ್ನು ಸೂಚಿಸಿದ್ದು ವದಂತಿಯಷ್ಟೆ"; ಎಐಸಿಸಿ ಅಧ್ಯಕ್ಷ ಚುನಾವಣೆ ಬಗ್ಗೆ ಖರ್ಗೆ

ನಾನು ಐವತ್ತು ವರ್ಷದಿಂದ ಪಕ್ಷದಲ್ಲಿದ್ದೇನೆ. ಕಾಂಗ್ರೆಸ್‌ನ ಹಲವು ನಾಯಕರು ಬಂದು ಭೇಟಿ ಮಾಡಿ ಬೆಂಬಲ ನೀಡಿದ್ದಾರೆ. ಶಶಿ ತರೂರ್ (Shashi Tharoor) ಕಡೆಗೆ ಹೋಗಬೇಡಿ, ಅವರಿಗೆ ಮತ ನೀಡಬೇಡಿ ಎಂದು ನಾನು ಹೇಳಿಲ್ಲವಲ್ಲ. ಅವರ ಶಕ್ತಿ ಇದ್ದರೇ ಕರೆಸಿಕೊಳ್ಳಲಿ, ನಾವು ಬೇಡ ಅಂದಿಲ್ಲ. ಜಿ 23 ನಾಯಕರು ಕೂಡ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮದು ನರೇಂದ್ರ ಮೋದಿ (PM Narendra Modi) ಹಾಗೂ ಅಮಿತ್‌ ಶಾ (Amit Shah) ಅವರ ತತ್ವದ ವಿರುದ್ಧ ಹೋರಾಟ. ಶಾಸಕರ ಖರೀದಿ, ಹಿಂಬಾಗಿಲ‌ ಮೂಲಕ ಸರ್ಕಾರ ರಚನೆ ಇದರ ವಿರುದ್ಧ ನಾವು ಹೋರಾಟ ಮಾಡಲಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

Congress ಅಧ್ಯಕ್ಷ ಪಟ್ಟ: ಶಶಿ ತರೂರ್‌ vs ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಈಗ ಅಧಿಕೃತ

ಅಕ್ಟೋಬರ್‌ 17ಕ್ಕೆ ಚುನಾವಣೆ: ಕಾಂಗ್ರೆಸ್‌ನಲ್ಲಿ (Congress president Election) ಬಹಳ ವರ್ಷಗಳ ಬಳಿಕ ಗಾಂಧಿ ಕುಟುಂಬದ ಹೊರತಾದ ವ್ಯಕ್ತಿ ಕಾಂಗ್ರೆಸ್‌ನ ಅಧ್ಯಕ್ಷರಾಗುತ್ತಿದ್ದಾರೆ. 80 ವರ್ಷದ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗುವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರೆ, ಅವರಿಗೆ ಶಶಿ ತರೂರ್‌ ಅವರಿಂದ ಪ್ರಮುಖ ವಿರೋಧ ವ್ಯಕ್ತವಾಗಿದೆ. ಇವರಿಬ್ಬರೊಂದಿಗೆ ಜಾರ್ಖಂಡ್‌ನ ಕೆಎನ್‌ ತ್ರಿಪಾಠಿ ಕೂಡ ಸ್ಪರ್ಧೆ ಮಾಡಿದ್ದಾರೆ. ಅಕ್ಟೋಬರ್‌ 17 ರಂದು ಚುನಾವಣೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು