ಆರ್ಟಿಕಲ್ 356 ಬಳಸಿ 90 ಬಾರಿ ಚುನಾಯಿತ ಸರ್ಕಾರ ಉರುಳಿಸಿದ ಕಾಂಗ್ರೆಸ್, ಮೋದಿ ಭಾಷಣಕ್ಕೆ ಕಾಂಗ್ರೆಸ್ ಥಂಡಾ!

By Suvarna NewsFirst Published Feb 9, 2023, 4:26 PM IST
Highlights

ಅದಾನಿ ಪ್ರಕರಣ ಹಿಡಿದು ಮೋದಿ ಹಾಗೂ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಹಾಗೂ ವಿಪಕ್ಷಕ್ಕೆ ಮೋದಿ ಚಾಟಿ ಬೀಸಿದ್ದಾರೆ. ಪ್ರಮುಖವಾಗಿ ಕಾಂಗ್ರೆಸ್ ತನ್ನ ಸ್ವಂತ ಲಾಭಕ್ಕಾಗಿ ದೇಶದಲ್ಲಿ ಚುನಾಯಿತ ಸರ್ಕಾರವನ್ನು ಯಾವ ರೀತಿ ಬೀಳಿಸಿದೆ ಅನ್ನೋದನ್ನು ಮೋದಿ ಹೇಳಿದ್ದಾರೆ. ಬರೋಬ್ಬರಿ 90 ಬಾರಿ ಕಾಂಗ್ರೆಸ್ ಚುನಾಯಿತ ಸರ್ಕಾರ ಬೀಳಿಸಿದೆ. ಈ ಕುರಿತು ಮೋದಿ ಅಂಕಿ ಅಂಶ ಸಮೇತ ವಿವರಿಸಿದ್ದಾರೆ

ನವದೆಹಲಿ(ಫೆ.09) ರಾಷ್ಟ್ರಪತಿ ಜಂಟಿ ಅಧಿವೇಶವನ್ನುದ್ದೇಶಿ ಮಾಡಿದ ಭಾಷಣದ ಮೇಲೆ ಅಭಿವಂದನಾ ಭಾಷಣ ಮಾಡಿದ ಪ್ರಧಾನಿ ಮೋದಿ ಕಾಂಗ್ರೆಸ್ ಜನ್ಮಜಾಲಾಡಿದ್ದಾರೆ.  ಕಾಂಗ್ರೆಸ್ ಪ್ರತಿ ಹಂತದಲಲ್ಲಿ ಸ್ವಂತ ಲಾಭವನ್ನೇ ಯೋಚಿಸಿದೆ. ಸ್ವಂತ ಲಾಭಕ್ಕಾಗಿಯೇ ಆಡಳಿತ ನಡೆಸಿದೇ ಹೊರತು, ದೇಶಕ್ಕಾಗಿ ಅಲ್ಲ ಎಂದಿದ್ದಾರೆ. ಇದಕ್ಕೆ ಮೋದಿ ಉದಾಹರಣೆ ಸಮೇತ ವಿವರಿಸಿದ್ದಾರೆ. ಕಾಂಗ್ರೆಸ್ ಬರೋಬ್ಬರಿ 90 ಬಾರಿ ದೇಶದಲ್ಲಿ ಚುನಾಯಿತ ಸರ್ಕಾರವನ್ನು ಬೀಳಿಸಿದೆ. ಆರ್ಟಿಕಲ್ 356ನ್ನು ತನ್ನ ಸ್ವಂತ ಲಾಭಕ್ಕಾಗಿ ಬಳಸಿ ಚುನಾಯಿತ ಸರ್ಕಾರವನ್ನು ಬೀಳಿಸಿದೆ. ಸರ್ಕಾರ ಬೀಳಿಸಿದರಲ್ಲಿ ಗರಿಷ್ಠ ಶ್ರೇಯಸ್ಸ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ಸಲ್ಲಲಿದೆ. ಇಂದಿರಾ ಗಾಂಧಿ 50 ಬಾರಿ ಚುನಾಯಿತ ಸರ್ಕಾರ ಬೀಳಿಸಿದೆ ಎಂದು ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ಮತ್ತೊಂದು ಆರೋಪ ಪದೇ ಪದೇ ಮಾಡುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತೊಂದರೆ ನೀಡುತ್ತದೆ. ರಾಜ್ಯಗಳಿಗೆ ಸ್ಪಂದಿಸುತ್ತಿಲ್ಲ ಅನ್ನೋ ಆರೋಪವನ್ನು ಕಾಂಗ್ರೆಸ್ ಮಾಡಿದೆ. ನಾನು ಸುದೀರ್ಘ ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಇಲ್ಲಿಗೆ ಬಂದಿದ್ದೇನೆ. ವಿಕೇಂದ್ರೀಕರಣದ ಮಹತ್ವವನ್ನು ಅರಿತುಕೊಂಡವನು. ಇದಕ್ಕಾಗಿ ಬಿಜೆಪಿ ಸರ್ಕಾರ ಕಾಪರೇಟೀವ್ ಕಾಂಪಿಟೀಟಿವ್ ಫೆಡರಲಿಸಂಗೆ ಒತ್ತು ನೀಡಿದೆ. ನಾವು ರಾಷ್ಟ್ರೀಯ ಅಭಿವೃದ್ಧಿ ಹಾಗೂ ರಾಜ್ಯಗಳ ಆಕಾಂಕ್ಷೆಯನ್ನೂ ಪೂರೈಸಿದ್ದೇವೆ. ಆದರೆ ಈಗ ವಿಪಕ್ಷದಲ್ಲಿ ಕುಳಿತಿರುವ ಪಕ್ಷ ರಾಜ್ಯದ ಮೇಲೆ ನಡೆಸಿದ ಆಕ್ರಮಣವನ್ನು ಒಂದೊಂದಾಗಿ ಹೇಳುತ್ತೇನೆ ಎಂದ ಮೋದಿ ಕಾಂಗ್ರೆಸ್ ಆಡಳಿತದಲ್ಲಿನ ಘಟನೆ ವಿವರಿಸಿದರು.

ಶಿಕಾರಿ ಕತೆಯೊಂದಿಗೆ ಕಾಂಗ್ರೆಸ್ ಆಡಳಿತ ವೈಖರಿ ವಿವರಿಸಿದ ಮೋದಿ, ನಗೆಗಡಲಲ್ಲಿ ತೇಲಿದ ಸಂಸತ್ತು!

ಕಾಂಗ್ರೆಸ್ ಆರ್ಟಿಕಲ್ 356 ನ್ನು ಅತೀ ಹೆಚ್ಚು ಬಾರಿ ದುರುಪಯೋಗ ಮಾಡಿಕೊಂಡಿದೆ. 90 ಬಾರಿ ಚುನಾಯಿತ ಸರ್ಕಾರವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಬೀಳಿಸಿದೆ. ಒರ್ವ ಪ್ರಧಾನ ಮಂತ್ರಿ ಆರ್ಟಿಕಲ್ 356ನ್ನು 50 ಬಾರಿ ದುರುಪಯೋಗ ಮಾಡಿದ್ದಾರೆ. 50 ಬಾರಿ ಸರ್ಕಾರವನ್ನು ಬೀಳಿಸಿದ ಕೀರ್ತಿ ಇಂದಿರಾ ಗಾಂಧಿಗೆ ಸಲ್ಲಲಿದೆ. ಕೇರಳದಲ್ಲಿ ಜನರಿಂದ ಆರಿಸಿ ಬಂದ ಸರ್ಕಾರ ಜವಾಹರ್ ಲಾಲ್ ನೆಹರೂವಿಗೆ ಇಷ್ಟವಿರಲಿಲ್ಲ. ಕೆಲ ದಿನಗಳಲ್ಲೇ ಚುನಾಯಿತ ಸರ್ಕಾರವನ್ನು ನೆಹರೂ ಆರ್ಟಿಕಲ್ 356 ಬಳಸಿ ಬೀಳಿಸಿದರು. ತಮಿಳುನಾಡಿನಲ್ಲಿ ಎಂಜಿಆರ್ ಹಾಗೂ ಕರುಣಾನಿಧಿ ಅವರಂತ ದಿಗ್ಗಜ ಸರ್ಕಾರವಿತ್ತು. ಆದರೆ ಇವರ ಸರ್ಕಾರವನ್ನು ಕಾಂಗ್ರೆಸ್ ಬೀಳಿಸಿದೆ. ಇವೆಲ್ಲವನ್ನು ಎಂಜಿಆರ್ ಆತ್ಮ ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಈ ಸದನದ ಹಿರಿಯ ಸದಸ್ಯ, ನಾನು ಅವರನ್ನು ಆದರಣಿಯ ನಾಯಕ ಎಂದು ಪರಿಗಣಿಸಿದ್ದೇನೆ. ಅವರು ಶರದ್ ಪವಾರ್. ಶರದ್ ಪವಾರ್ ಯುವ ನಾಯಕನಾಗಿದ್ದ ಸಂದರ್ಭದಲ್ಲಿ ಜನರಿಂದ ಆರಿಸಿ ಮುಖ್ಯಮಂತ್ರಿಯಾಗಿದ್ದರು. ಮಹಾರಾಷ್ಟ್ರದಲ್ಲಿ ಸರ್ಕಾರವನ್ನೂ ರಚಿಸಿದ್ದರು. ಆದರೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಪವಾರ್ ಸರ್ಕಾರವನ್ನೂ ಬೀಳಿಸಿದರು. ಎನ್‌ಟಿಆರ್ ಸರ್ಕಾರ ಉತ್ತಮ ಆಡಳಿತ ನಡೆಸುತ್ತಿತ್ತು. ಆದರೆ ಮುಖ್ಯಮಂತ್ರಿ ಎನ್‌ಟಿಆರ್ ಆರೋಗ್ಯ ಚೆಕ್‌ಅಪ್ ಕಾರಣಕ್ಕೆ ಅಮೆರಿಕ ತೆರಳಿದ್ದರು. ಈ ವೇಳೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಎನ್‌ಟಿಆರ್ ಸರ್ಕಾರವನ್ನೂ ಬೀಳಿಸುವ ಪ್ರಯತ್ನ ಮಾಡಿತ್ತು. ರಾಜಭವನವನ್ನು ಕಾಂಗ್ರೆಸ್ ಹೆಡ್‌ಕ್ವಾರ್ಟರ್ ಮಾಡಿಕೊಂಡಿದ್ದರು ಎಂದು ಇತಿಹಾಸ ಪುಟಗಳನ್ನು ತಿರುವಿ ಕಾಂಗ್ರೆಸ್ ಬಾಯಿ ಮುಚ್ಚಿಸಿದರು.

 

ಮೋದಿಜೀ ನಿಮ್ಗೆ ನಂದೊಂದೇ ಕ್ಷೇತ್ರ ಸಿಕ್ಕಿರೋದಾ, ಸಂಸತ್ತಿನಲ್ಲಿ ಖರ್ಗೆ ಪ್ರಶ್ನೆ!

2005ರಲ್ಲಿ ಜಾರ್ಖಂಡ್‌ನಲ್ಲಿ ಎನ್‌ಡಿಕೂ ಕೂಟ ಅತೀ ಹೆಚ್ಚು ಸ್ಥಾನ ಗೆದ್ದಿತ್ತು. ಆದರೆ ರಾಜ್ಯಾಪಾಲರು ಯುಪಿಎಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದರು. ಹರ್ಯಾಣದಲ್ಲಿ ಬಿಜೆಪಿ ಹಾಗೂ ದೇವಿಲಾಲ್ ಮೈತ್ರಿ ಪಕ್ಷ ಚುನಾವಣೆ ಎದುರಿಸಿತ್ತು. ಮೈತ್ರಿಯಾಗಿ ಎದುರಿಸಿದ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನ ಗೆದ್ದಿತ್ತು. ಆದರೆ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರ ರಚಿಸಲು ಆಹ್ವಾನ ನೀಡಿದರು. ಇದು ಕಾಂಗ್ರೆಸ್ ಮಾಡಿದ ಪಾಪ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಆರ್ಥಿಕ ನೀತಿ ಬೇಕಿಲ್ಲ. ದಿನದ 24 ಗಂಟೆಯೂ ರಾಜಕೀಯದಲ್ಲೇ ಮುಳುಗಿದೆ. ಕಾಂಗ್ರಸ್ ಅರ್ಥನೀತಿಯನ್ನು ಅನರ್ಥ ನೀತಿಯನ್ನಾಗಿ ನೋಡುತ್ತಿದೆ. ಕಾಂಗ್ರೆಸ್ ನಡೆಸಿದ ದುರಾಡಳಿತದಿಂದ ದೇಶ ಯಾವ ಮಟ್ಟಿಗೆ ತಲುಪಿತ್ತು ಅನ್ನೋದು ನಾವೆಲ್ಲ ನೋಡಿದ್ದೇವೆ.  ಇಂದು ಭಾರತ ಬದಲಾಗಿದೆ. ಆರ್ಥಿಕವಾಗಿ ಸದೃಢವಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
 

click me!