
ಉದಯಪುರ(ಮೇ.16): ಸತತವಾಗಿ ಇತ್ತೀಚಿನ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿರುವ ಪಕ್ಷವನ್ನು ಪುನಶ್ಚೇತನಗೊಳಿಸಲು ಕಾಂಗ್ರೆಸ್ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ, ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ ಒಂದು ಕುಟುಂಬಕ್ಕೆ ಒಂದೇ ಟಿಕೆಟ್, ಪಕ್ಷದ ಸಂಘಟನೆಯಲ್ಲಿ ಅಹಿಂದ ವರ್ಗಕ್ಕೆ ಶೇ.50ರಷ್ಟುಆದ್ಯತೆ, 50 ವರ್ಷ ಕೆಳಗಿನವರಿಗೆ ಪಕ್ಷದ ಶೇ.50ರಷ್ಟುಹುದ್ದೆ, ಪಕ್ಷದ ಎಲ್ಲಾ ಜನಪ್ರತಿನಿಧಿಗಳಿಗೆ ನಿವೃತ್ತಿ ವಯೋಮಿತಿ ನಿಗದಿ- ಇತ್ಯಾದಿ ಮಹತ್ವದ ನಿರ್ಣಯಗಳನ್ನು ಅಂಗೀಕರಿಸಲಾಗಿದೆ.
3 ದಿನಗಳ ನವಸಂಕಲ್ಪ ಚಿಂತನ ಶಿಬಿರ ರಾಜಸ್ಥಾನದ ಉದಯಪುರದಲ್ಲಿ ಭಾನುವಾರ ಸಂಜೆ ಅಂತ್ಯಗೊಂಡಿತು. ಈ ವೇಳೆ ಪಕ್ಷಕ್ಕೆ ಮರುಜೀವ ನೀಡುವ ನಿಟ್ಟಿನಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಸಭೆ ಕೈಗೊಂಡಿತು.
3 ಹೊಸ ವಿಭಾಗ:
ಆಂತರಿಕ ನೋಟ, ಚುನಾವಣಾ ನಿರ್ವಹಣೆ, ತರಬೇತಿ ಎಂಬ ಮೂರು ಹೊಸ ವಿಭಾಗ ತೆರೆಯಲು ನಿರ್ಧರಿಸಲಾಗಿದೆ. ಜತೆಗೆ ರಾಜಕೀಯ ಸವಾಲು ಎದುರಿಸುವ ಸಲಹೆ ನೀಡಲು ಸಿಡಬ್ಲ್ಯುಸಿಯಲ್ಲಿ ಆಯ್ದ ಸದಸ್ಯರ ಸಲಹಾ ಸಮಿತಿ ಹಾಗೂ ಸಂಘಟನಾತ್ಮಕ ಸುಧಾರಣೆಗೆ ಟಾಸ್್ಕ ಫೋರ್ಸ್ ರಚಿಸಲಾಗುತ್ತದೆ.
ಪಕ್ಷದಲ್ಲಿ ವಂಶಪಾರಂಪರ್ಯ ರಾಜಕೀಯ ನಡೆಯುತ್ತಿದೆ ಎಂಬ ಆರೋಪಕ್ಕೆ ಅಂತ್ಯ ಹಾಡಲು, ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿರ್ಣಯ ತೆಗೆದುಕೊಳ್ಳಲಾಗಿದೆ. ಆದರೆ ಅದೇ ಕುಟುಂಬದ ಇನ್ನೊಬ್ಬ ವ್ಯಕ್ತಿ ಪಕ್ಷಕ್ಕಾಗಿ 5 ವರ್ಷದ ದುಡಿದಿದ್ದಲ್ಲಿ ಆತನನ್ನು ಟಿಕೆಟ್ಗೆ ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿ ಒಂದೇ ಹುದ್ದೆ ಹೊಂದಬೇಕು. ಎರಡೆರಡು ಮಹತ್ವದ ಪದವಿ ಹೊಂದುವಂತಿಲ್ಲ ಎಂಬ ನಿರ್ಣಯ ಅಂಗೀಕರಿಸಲಾಗಿದೆ.
ಪ್ರಮುಖ ನಿರ್ಣಯಗಳು
- ಒಬ್ಬ ವ್ಯಕ್ತಿಗೆ ಎರಡು ಹುದ್ದೆ ಇಲ್ಲ. 5ಕ್ಕಿಂತ ಹೆಚ್ಚು ವರ್ಷ ಒಂದೇ ಹುದ್ದೆಯಲ್ಲಿ ಯಾರೂ ಇರುವಂತಿಲ್ಲ
- ಸಂಘಟನಾತ್ಮಕ ಹುದ್ದೆಗಳಲ್ಲಿ 50 ವರ್ಷದೊಳಗಿನವರಿಗೆ 50% ಹುದ್ದೆ, ಅಹಿಂದಕ್ಕೆ 50% ಮೀಸಲಾತಿ
- ಸಂಸತ್, ವಿಧಾನಸಭೆ ಸೇರಿ ಪಕ್ಷದ ಎಲ್ಲಾ ಜನಪ್ರತಿನಿಧಿ, ಸಂಘಟನೆಯ ಪ್ರತಿನಿಧಿಗಳಿಗೆ ನಿವೃತ್ತಿ ವಯೋಮಿತಿ
- ಸಂಸತ್, ವಿಧಾನಸಭೆ, ಪರಿಷತ್ನಲ್ಲಿ ಮಹಿಳೆಯರಿಗೆ ಶೇ.33ರಷ್ಟುಮೀಸಲು ಜಾರಿಗೆ ಕೇಂದ್ರಕ್ಕೆ ಆಗ್ರಹ
- ಜೂನ್ 15ರಿಂದ ಜಿಲ್ಲಾ ಮಟ್ಟದಲ್ಲಿ ‘ಜನ ಜಾಗರಣ ಯಾತ್ರೆ’ಯ 2ನೇ ಚರಣ ಆಯೋಜನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ