ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

Published : May 14, 2022, 10:19 AM ISTUpdated : May 14, 2022, 10:22 AM IST
ಕಾಂಗ್ರೆಸ್‌ನ ‘ಒಂದು ಕುಟುಂಬ, ಒಂದು ಟಿಕೆಟ್‌’ ಈ ಪ್ರಮುಖ ಐವರಿಗೆ ಅನ್ವಯವಾಗಲ್ಲ!

ಸಾರಾಂಶ

* ‘ಒಂದು ಕುಟುಂಬ, ಒಂದು ಟಿಕೆಟ್‌’ ಅನೇಕರಿಗೆ ಅನ್ವಯಿಸಲ್ಲ * ರಾಹುಲ್‌, ಪ್ರಿಯಾಂಕಾ, ಖರ್ಗೆ, ಚಿದು ಕುಟುಂಬಕ್ಕೆ ಅನ್ವಯವಿಲ್ಲ * ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ

ನವದೆಹಲಿ(ಮೇ.14): ‘ಒಂದು ಕುಟುಂಬ ಒಂದು ಟಿಕೆಟ್‌’ ಎಂಬ ಕಾಂಗ್ರೆಸ್‌ನ ಸಂಭಾವ್ಯ ಹೊಸ ನೀತಿ, ಹಾಲಿ ಜನಪ್ರತಿನಿಧಿಗಳಾಗಿರುವ ಹಾಗೂ ಪಕ್ಷದಲ್ಲಿ ಹುದ್ದೆಗಳನ್ನು ಹೊಂದಿರುವ ಹಲವಾರು ಪ್ರಭಾವಿಗಳ ಕುಟುಂಬಕ್ಕೆ ಅನ್ವಯ ಆಗುವುದಿಲ್ಲ ಎಂಬ ವಿಷಯ ಗಮನಾರ್ಹವಾಗಿದೆ.

‘ಪಕ್ಷಕ್ಕೆ ಸೇರಿದ ತಕ್ಷಣ ಏಕಾಏಕಿ ಟಿಕೆಟ್‌ ನೀಡುವುದಿಲ್ಲ. ಆದರೆ ಪಕ್ಷ ಸೇರಿ ಕನಿಷ್ಠ 5 ವರ್ಷ ಉತ್ತಮ ಸೇವೆ ಸಲ್ಲಿಸಿದವರಿಗೆ ಟಿಕೆಟ್‌ ನೀಡಲಾಗುತ್ತದೆ’ ಎಂಬುದು ‘ಒಂದು ಕುಟುಂಬ ಒಂದು ಟಿಕೆಟ್‌ ನೀತಿ’ಯ ಪ್ರಮುಖಾಂಶ. ಹೀಗಾಗಿ ಈಗಾಗಲೇ ಪಕ್ಷ ಸೇರಿ ಹಲವಾರು ವರ್ಷ ಸೇವೆ ಸಲ್ಲಿಸಿರುವ ಗಾಂಧಿ ಕುಟುಂಬದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಈ ನೀತಿ ಅನ್ವಯಿಸುವುದಿಲ್ಲ.

ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ್‌ ಖರ್ಗೆ, ಪಿ. ಚಿದಂಬರಂ-ಕಾರ್ತಿ ಚಿದಂಬರಂ, ಡಿ.ಕೆ. ಶಿವಕುಮಾರ್‌-ಡಿ.ಕೆ. ಸುರೇಶ್‌ ಹೀಗೆ ಅನೇಕರಿಗೆ ಇದು ಅನ್ವಯಿಸುವುದಿಲ್ಲ.

Ramya Politics ರಮ್ಯಾ ರಾಜಕೀಯ ರೀ-ಎಂಟ್ರಿ ಮುನ್ಸೂಚನೆ?

ಆದರೆ, ಹೊಸದಾಗಿ ಈ ಕುಟುಂಬದ ಸದಸ್ಯರು ಪಕ್ಷ ಸೇರಿದ ತಕ್ಷಣ ಟಿಕೆಟ್‌ ಬಯಸಿದರೆ ಅವರಿಗೆ ಟಿಕೆಟ್‌ ದೊರಕುವುದಿಲ್ಲ.

ಒಂದು ಕುಟುಂಬ ಒಂದು ಟಿಕೆಟ್ ನೀತಿ ಏಕೆ?

ಕಾಂಗ್ರೆಸ್‌ ಪಕ್ಷದಲ್ಲಿ ವಂಶಪಾರಂಪರ್ಯ ರಾಜಕೀಯ ನಡೆಸಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಲು ಪಕ್ಷ ಈ ಕ್ರಮ ಕೈಗೊಳ್ಳುತ್ತಿದೆ. ಆದರೆ ಪಕ್ಷದಲ್ಲಿ ಕನಿಷ್ಠ 5 ವರ್ಷ ಕಾಲ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ‘ಒಂದು ಕುಟುಂಬ, ಒಂದು ಟಿಕೆಟ್‌’ ನೀತಿಯಿಂದ ವಿನಾಯ್ತಿ ಸಿಗಲಿದ್ದು, ಇಂಥವರು ಒಂದೇ ಕುಟುಂಬದಲ್ಲಿದ್ದರೂ ಟಿಕೆಟ್‌ ಗಿಟ್ಟಿಸಬಹುದಾಗಿದೆ.

ಇದೇ ವೇಳೆ, 50-60 ವರ್ಷದಿಂದ ನಿಂತ ನೀರಾಗಿದ್ದ ಪಕ್ಷ ಸಂಘಟನೆಯಲ್ಲಿ ವ್ಯಾಪಕ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಈಗಿರುವ ಬೂತ್‌ ಹಾಗೂ ಬ್ಲಾಕ್‌ ಮಟ್ಟದ ಸಮಿತಿಗಳ ಮಧ್ಯದಲ್ಲಿ ‘ಮಂಡಲ ಕಮಿಟಿ’ಗಳನ್ನು ರಚಿಸುವ ಪರಿಶೀಲನೆ ನಡೆದಿದೆ. ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಮಿಟಿಗಳಲ್ಲಿ 50 ವರ್ಷಕ್ಕಿಂತ ಕೆಳಗಿರುವವರಿಗೆ ಆದ್ಯತೆ ನೀಡಲಾಗುತ್ತದೆ. ಪಕ್ಷದಲ್ಲಿ ಯಾವುದಾದರೂ ಸ್ಥಾನ ಬೇಕು ಎಂದರೆ ಪಕ್ಷದಲ್ಲಿ ಆತ ಕನಿಷ್ಠ 3ರಿಂದ 5 ವರ್ಷ ದುಡಿದಿರಬೇಕು. ಪಕ್ಷದಲ್ಲಿನ ಪದಾಧಿಕಾರಿಗಳ ಸಾಧನೆ ಅಳೆದು ಅವರಿಗೆ ಪದೋನ್ನತಿ ನೀಡಲು ‘ಮೌಲ್ಯಮಾಪನ ವಿಭಾಗ’ ಹಾಗೂ ಜನರ ನಾಡಿಮಿಡಿತ ಅರಿಯಲು ‘ಸಾರ್ವಜನಿಕ ದೂರದೃಷ್ಟಿವಿಭಾಗ’ ರಚನೆ ಮಾಡಬೇಕು ಎಂಬ ಪ್ರಸ್ತಾವಗಳೂ ಚಿಂತನ ಶಿಬಿರದಲ್ಲಿವೆ.

Anti Conversion Bill ಮತಾಂತರ ನಿಷೇಧ ಸುಗ್ರೀವಾಜ್ಞೆ ತಿರಸ್ಕಾರಕ್ಕೆ ಸಿದ್ದು ಆಗ್ರಹ!

ಜೊತೆಗೆ ರಾಜ್ಯಸಭೆಗೆ ಗರಿಷ್ಠ 2-3 ಬಾರಿ ಮಾತ್ರ ಆಯ್ಕೆ ಮಾಡುವ ನಿಯಮ, ನಿಗದಿತ ವಯೋಮಿತಿ ಮೀರಿದವರನ್ನು ಪಕ್ಷದ ಯಾವುದೇ ಹುದ್ದೆಗಳಿಗೂ ನೇಮಕ ಮಾಡದೇ ಇರುವ, ಸಂಘಟನೆಯಲ್ಲಿನ ಎಲ್ಲಾ ಹಂತದ ಹುದ್ದೆಗಳಿಗೂ ವಿವಿಧ ವಯೋಮಿತಿ ನಿಗದಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಉದಾಹರಣೆಗೆ ಇದೀಗ ಬಿಜೆಪಿಯಲ್ಲಿ 70-75 ವರ್ಷದ ವಯೋಮಿತಿ ಹಾಕಲಾಗಿದೆ. ಕಾಂಗ್ರೆಸ್‌ನಲ್ಲೂ ಇಂಥದ್ದೇ ನೀತಿ ಜಾರಿಗೆ ಮುಂದಾಗಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌, ‘ಬದಲಾದ ಸಮಯದಲ್ಲಿ ಇಂಥ ದೊಡ್ಡ ಬದಲಾವಣೆ ಮಾಡಲು ಪಕ್ಷ ಮುಂದಾಗಿದೆ’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!