ಬಿಬಿಸಿ ಸಾಕ್ಷ್ಯಚಿತ್ರದ ಹಿಂದೆ ಚೀನಾ ಕೈವಾಡ: ಬಿಜೆಪಿ ಸಂಸದ ಜೇಠ್ಮಲಾನಿ

By Kannadaprabha NewsFirst Published Feb 1, 2023, 7:17 AM IST
Highlights

ಬಿಬಿಸಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರದ ಹಿಂದೆ ಚೀನಾ ಕೈವಾಡವಿದೆ ಎಂದು ಬಿಜೆಪಿ ಹಿರಿಯ ಸಂಸದ ಹಾಗೂ ವಕೀಲ ಮಹೇಶ್‌ ಜೇಠ್ಮಲಾನಿ (Mahesh Jethmalani) ಗಂಭೀರ ಆರೋಪ ಮಾಡಿದ್ದಾರೆ.


ನವದೆಹಲಿ: 2002ರ ಗುಜರಾತ್‌ ಗಲಭೆಯಲ್ಲಿ ಅಂದಿನ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪಾತ್ರವಿತ್ತು ಎಂದು ಆರೋಪಿಸಿ ಬಿಬಿಸಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರದ ಹಿಂದೆ ಚೀನಾ ಕೈವಾಡವಿದೆ ಎಂದು ಬಿಜೆಪಿ ಹಿರಿಯ ಸಂಸದ ಹಾಗೂ ವಕೀಲ ಮಹೇಶ್‌ ಜೇಠ್ಮಲಾನಿ (Mahesh Jethmalani) ಗಂಭೀರ ಆರೋಪ ಮಾಡಿದ್ದಾರೆ. ಬಿಬಿಸಿ ಹತಾಶವಾಗಿದ್ದು, ಅದಕ್ಕೆ ಹಣದ ಅಗತ್ಯವಿದೆ ಮತ್ತು ಅದನ್ನು ಚೀನಾ-ಸಂಬಂಧಿತ ಹುಆವೈ (Huawei) ಕಂಪನಿಯಿಂದ ತೆಗೆದುಕೊಳ್ಳುತ್ತಿದೆ ಎಂದು ಟ್ವೀಟ್‌ ಮಾಡಿರುವ ಅವರು, ಬಿಬಿಸಿ ಏಕೆ ಭಾರತ ವಿರೋಧಿಯಾಗಿದೆ? ಏಕೆಂದರೆ ಚೀನಾದ ಸರ್ಕಾರಕ್ಕೆ ಸಂಬಂಧಿತ ಹುಆವೈನಿಂದ ಅದು ಹಣ ಪಡೆದುಕೊಳ್ಳುತ್ತಿದೆ. ಈ ಮೂಲಕ ಅದು ಬಿಬಿಸಿಗೆ ಆಪ್ತರಾದ ಕಾಮ್ರೇಡ್‌ ಜೈರಾಂ (ಕಾಂಗ್ರೆಸ್ಸಿಗ ಜೈರಾಂ ರಮೇಶ್‌) ಅವರ ಕಾರ್ಯಸೂಚಿಯನ್ನು ಪ್ರಚುರಪಡಿಸುತ್ತಿದೆ. ಇದು ಸರಳವಾದ ‘ನಗದು-ಪ್ರಚಾರ’ದ ಒಪ್ಪಂದವಾಗಿದೆ. ಬಿಬಿಸಿ ಮಾರಾಟಕ್ಕಿದೆ’ ಎಂದು ಆಪಾದಿಸಿದ್ದಾರೆ.

ಇದಲ್ಲದೆ, 2022ರ ಆಗಸ್ಟ್‌ನಲ್ಲಿ ಬ್ರಿಟನ್‌ ನಿಯತಕಾಲಿಕೆ ದಿ ಸ್ಪೆಕ್ಟೇಟರ್‌ನಲ್ಲಿ (The Spectator) ಪ್ರಕಟವಾದ ಸುದ್ದಿಯ ಲಿಂಕ್‌ಅನ್ನು ಅವರು ಹಂಚಿಕೊಂಡಿದ್ದಾರೆ. ಅದರಲ್ಲಿ ಹುಆವೈನಿಂದ ಬಿಬಿಸಿ ಹಣ ಪಡೆಯುತ್ತಿದೆ ಎಂದು ಬರೆಯಲಾಗಿದೆ.

ವಿವಾದದ ನಡುವೆ ಕೇರಳದಲ್ಲಿ ಕಾಂಗ್ರೆಸ್‌ನಿಂದ ಮೋದಿ ವಿರುದ್ದ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ!

ಚೀನಾ ಬಗ್ಗೆ ಬಿಜೆಪಿ ಟೀಕೆ:

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಅಮಿತ್‌ ಮಾಳವೀಯ, ಭಾರತದ ಬೆಳವಣಿಗೆಯ ಗಾಥೆಗೆ ಕಡಿವಾಣ ಹಾಕಲು ಸಾಕ್ಷ್ಯಚಿತ್ರ ಬಳಸಲಾಗುತ್ತಿದೆ. ಚೀನಾ ಸರ್ಕಾರದಿಂದ ಪ್ರಾಯೋಜಿಸಲ್ಪಟ್ಟ ಹಲವಾರು ಚೀನೀ ಕಂಪನಿಗಳು ಬಿಬಿಸಿ ಜತೆ ವ್ಯವಹರಿಸುತ್ತವೆ ಎಂದಿದ್ದಾರೆ. ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಪ್ರಧಾನಿ ಮೋದಿಯನ್ನು ದೋಷಮುಕ್ತಗೊಳಿಸಿದೆ. ವಿದೇಶಿ ಮಾಧ್ಯಮ ಸಂಸ್ಥೆಗೆ ಭಾರತದ ವ್ಯವಹಾರದಲ್ಲಿ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.


16.5 ಕೋಟಿ ಭಾರತೀಯರ ಸಾವಿಗೆ ಕಾರಣವಾಗಿರುವ ಬ್ರಿಟಿಷರಿಂದ ಭಾರತಕ್ಕೆ ಮಾನವ ಹಕ್ಕು ಪಾಠ!

click me!