ಮತದಾನ ವೇಳೆ ಬುರ್ಖಾಧಾರಿಗಳ ಮುಖ ಪರಿಶೀಲಿಸಿ : ಬಿಜೆಪಿ

Kannadaprabha News   | Kannada Prabha
Published : Oct 05, 2025, 04:10 AM IST
bjp flag

ಸಾರಾಂಶ

ಮತದಾನಕ್ಕೆ ಬುರ್ಖಾ ಧರಿಸಿ ಬರುವ ಮಹಿಳೆಯರ ಮತದಾನ ಗುರುತಿನ ಚೀಟಿಯಲ್ಲಿ ಪರಿಶೀಲಿಸಿ ಬಳಿಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾಗೆ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್‌ ಈ ಬೇಡಿಕೆ

ಪಟನಾ: ಮತದಾನಕ್ಕೆ ಬುರ್ಖಾ ಧರಿಸಿ ಬರುವ ಮಹಿಳೆಯರ ಮುಖವನ್ನು ಮತದಾನ ಗುರುತಿನ ಚೀಟಿಯಲ್ಲಿ ಪರಿಶೀಲಿಸಿ ಬಳಿಕ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಧಾನಸಭೆ ಚುನಾವಣೆ ಪರಿಶೀಲನೆಗಾಗಿ ಶನಿವಾರ ಪಟನಾಗೆ ಆಗಮಿಸಿದ್ದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರ ಬಿಹಾರ ಬಿಜೆಪಿ ಅಧ್ಯಕ್ಷ ದಿಲೀಪ್ ಜೈಸ್ವಾಲ್‌ ಈ ಬೇಡಿಕೆ ಇರಿಸಿದ್ದಾರೆ.

‘ಮತದಾನವನ್ನು 1 ಅಥವಾ 2 ಹಂತಗಳಲ್ಲಿ ಮಾಡಬೇಕು. ಅದಕ್ಕೂ ಮೊದಲು ಮತಪಟ್ಟಿಗೆ ಮುತ್ತಿಗೆ ಹಾಕಿರುವ ಇತಿಹಾಸ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಬೇಕು. ಭದ್ರತಾ ಪಡೆಗಳ ಪರೇಡ್‌ ಮಾಡಬೇಕು. ಬುರ್ಖಾ ಧರಿಸಿದ ಮಹಿಳೆಯರ ಮುಖವನ್ನು ಸರಿಯಾಗಿ ಪರಿಶೀಲಿಸಿ ನಂತರ ಮತದಾನಕ್ಕೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

ಛಠ್‌ ಆದ ತಕ್ಷಣವೇ ಚುನಾವಣೆಗೆ ಮನವಿ:

ಮಾಸಾಂತ್ಯಕ್ಕೆ ಛಠ್ ಪೂಜೆ ಇದೆ. ಈ ವೇಳೆ ಬೇರೆ ರಾಜ್ಯಗಳ ಬಿಹಾರಿಗಳೂ ರಾಜ್ಯಕ್ಕೆ ಬಂದಿರುತ್ತಾರೆ. ಹಬ್ಬ ಆದ ತಕ್ಷಣವೇ ಮತದಾನ ನಡೆದರೆ ಹೆಚ್ಚಿನ ಸಂಖ್ಯೆಯ ಮತದಾನ ಸಾಧ್ಯ. ಹೀಗಾಗಿ ಛಠ್‌ ಮುಗಿದ ತಕ್ಷಣವೇ ಚುನಾವಣೆ ನಡೆಸಿ ಎಂದು ಕೆಲವು ಪಕ್ಷಗಳು ಕುಮಾರ್‌ರನ್ನು ಕೋರಿದವು.

ನ.22ಕ್ಕೆ ಬಿಹಾರ ವಿಧಾನಸಭೆ ಅವಧಿ ಅಂತ್ಯವಾಗುತ್ತದೆ.

ಬಿಹಾರಿ ಯುವಕರ ವಲಸೆಗೆ ಆರ್‌ಜೆಡಿ ಕಾರಣ: ಮೋದಿ

ನವದೆಹಲಿ: ‘ಬಿಹಾರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಲು ಆರ್‌ಜೆಡಿ ಅವಧಿಯಲ್ಲಿದ್ದ ಕಳಪೆ ಶಿಕ್ಷಣವೇ ಕಾರಣ. ಆದರೆ ಸಿಎಂ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರ ಪರಿಸ್ಥಿತಿಯನ್ನು ಸುಧಾರಿಸಿ ರಾಜ್ಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇದೇ ವೇಳೆ ರಾಹುಲ್‌ ಗಾಂಧಿ ವಿರುದ್ಧ ಹರಿಹಾಯ್ದಿರುವ ಅವರು, ‘ಕಾಂಗ್ರೆಸ್‌ ನಾಯಕರೊಬ್ಬರು ತಮ್ಮನ್ನು ತಾವು ಜನನಾಯಕ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆದರೆ ಭಾರತರತ್ನ ಪುರಸ್ಕೃತ ಕರ್ಪೂರಿ ಠಾಕೂರ್‌ ನಿಜವಾದ ಜನನಾಯಕ’ ಎಂದಿದ್ದಾರೆ.

ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಿತೀಶ್‌ ನೇತೃತ್ವದ ಸರ್ಕಾರವು ರಾಜ್ಯದ ಅಭಿವೃದ್ಧಿಗಾಗಿ ಹೊಸ ಸಂಕಲ್ಪಗಳನ್ನು ತೆಗೆದುಕೊಂಡಿದ್ದು, ಕಳೆದ 20 ವರ್ಷಗಳಿಗೆ ಹೋಲಿಸಿದರೆ ಮುಂದಿನ 5 ವರ್ಷಗಳಲ್ಲಿ ಉದ್ಯೋಗ ಪಡೆಯುವ ಜನರ ಸಂಖ್ಯೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ. ಈ ಮೂಲಕ, ಯುವಕರಿಗೆ ರಾಜ್ಯದಲ್ಲೇ ಉದ್ಯೋಗ ಕೊಡಿಸುವ ಗುರಿ ಹೊಂದಿದೆ’ ಎಂದರು.

ಗಡೀಪಾರಾದರೆ ನೀರವ್‌ ತನಿಖೆ ಇಲ್ಲ: ಭಾರತ

ನವದೆಹಲಿ: 6498 ಕೋಟಿ ರು. ಬ್ಯಾಂಕ್ ವಂಚನೆ ಕೇಸಲ್ಲಿ ಭಾರತಕ್ಕೇನಾದರೂ ಗಡೀಪಾರಾದರೆ ಅಲ್ಲಿನ ತನಿಖಾ ಸಂಸ್ಥೆಗಳು ತನ್ನನ್ನು ತೀವ್ರ ವಿಚಾರಣೆಗೊಳಪಡಿಸಬಹುದು ಎಂದು ಹೇಳಿ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಮತ್ತೆ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಕದಬಡಿದಿದ್ದಾನೆ. ಈ ಮೂಲಕ ನ ಬ್ರಿಟನ್‌ ಕೋರ್ಟ್‌ನಲ್ಲಿ ಗಡೀಪಾರಿಗೆ ಸಂಬಂಧಿಸಿದ ಪ್ರಕರಣದ ಮರು ವಿಚಾರಣೆಗೆ ಮನವಿ ಮಾಡಿದ್ದಾನೆ. ಅದರಂತೆ ನ.23ರಂದು ಈ ಕುರಿತು ವಿಚಾರಣೆ ಆರಂಭವಾಗಲಿದೆ.

ಇದಕ್ಕೆ ಪ್ರತಿಯಾಗಿ ಭಾರತೀಯ ಅಧಿಕಾರಿಗಳು, ‘ನೀರವ್‌ ಮೋದಿ ಕೇವಲ ಕೋರ್ಟ್‌ ವಿಚಾರಣೆಯನ್ನಷ್ಟೇ ಎದುರಿಸಬೇಕಿದೆ, ಈಗಾಗಲೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿರುವುದರಿಂದ ಏಜೆನ್ಸಿಗಳು ಅವರ ವಿಚಾರಣೆ ನಡೆಸುವ ಅಗತ್ಯವಿಲ್ಲ. ಒಂದು ವೇಳೆ ವೆಸ್ಟ್‌ಮಿನಿಸ್ಟರ್‌ ಕೋರ್ಟ್‌ ಕೇಳಿದರೆ, ಭಾರತದ ನ್ಯಾಯಾಲಯದಲ್ಲಿ ಅವರ ವಿಚಾರಣೆ ಮಾತ್ರ ನಡೆಯಲಿದೆ ಎಂದು ಭರವಸೆ ನೀಡಲು ಸಿದ್ಧರಿದ್ದೇವೆ’ ಎಂದಿದ್ದಾರೆ.

ಮುಂಬೈ ಜೈಲಲ್ಲಿ ಸುರಕ್ಷತೆ:

‘ಇದರ ಜತೆ ನೀರವ್‌ ಮೋದಿ ಅವರನ್ನು ಮುಂಬೈನ ಆರ್ಥರ್‌ ರಸ್ತೆ ಜೈಲಿನ 12ನೇ ಬರಾಕ್‌ನಲ್ಲಿಡಲಾಗುವುದು. ಅಲ್ಲಿ ಅವರ ಮೇಲೆ ಯಾವುದೇ ಹಿಂಸೆ ಅಥವಾ ದುರ್ನಡತೆಗೆ ಅವಕಾಶ ಇರುವುದಿಲ್ಲ. ಅಗತ್ಯ ಆರೋಗ್ಯ ಸೌಲಭ್ಯ ಸಿಗುವಂತೆಯೂ ನೋಡಿಕೊಳ್ಳಲಾಗುವುದು’ ಎಂದೂ ತಿಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ.ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 6498 ಕೋಟಿ ರು. ವಂಚನೆ ಪ್ರಕರಣದಲ್ಲಿ ಆಭರಣ ಉದ್ಯಮಿಯಾಗಿರುವ ನೀರವ್‌ ಮೋದಿ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಲಂಡನ್‌ನಲ್ಲಿ ನೆಲೆಸಿರುವ ನೀರವ್‌ ಗಡೀಪಾರಿಗೆ 2019ರಿಂದ ಭಾರತ ಪ್ರಯತ್ನ ನಡೆಸುತ್ತಲೇ ಇದೆ.

ದೇವಸ್ವಂ ದಾಖಲೆಯಲ್ಲಿ ತಾಮ್ರ ಮಾತ್ರ ಉಲ್ಲೇಖ, ಚಿನ್ನವಿಲ್ಲ: ಆರೋಪಿ ಸ್ಫೋಟಕ ಹೇಳಿಕೆ

ತಿರುವನಂತಪುರಂ: ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಉನ್ನಿಕೃಷ್ಣನ್‌ ಪೊಟ್ಟಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತನಗೆ ನೀಡಿದ ದಾಖಲೆಗಳಲ್ಲಿ ಕವಚದಲ್ಲಿ ತಾಮ್ರ ಮಾತ್ರ ಇರುವುದಾಗಿ ತಿಳಿಸಿದೆ, ಅದರಲ್ಲಿ ಚಿನ್ನದ ಉಲ್ಲೇಖವೇ ಇಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾನೆ.2019ರಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನಲೇಪಿತ ಕವಚಗಳನ್ನು ಉನ್ನಿಕೃಷ್ಣನ್‌ ಪೊಟ್ಟಿ ಮರುಲೇಪನಕ್ಕಾಗಿ ಚೆನ್ನೈಗೆ ಕೊಂಡೊಯ್ದಿದ್ದ. ಅದನ್ನು ಹಿಂದಿರುಗಿಸುವಾಗ ಸುಮಾರು 4 ಕೆಜಿ ಚಿನ್ನ ಕಡಿಮೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಪೊಟ್ಟಿ, ‘ನನಗೆ ನೀಡಲಾದ ದಾಖಲೆಯಲ್ಲಿ ಆ ಕವಚಗಳು ತಾಮ್ರದ್ದಾಗಿದ್ದವು ಎಂದು ನಮೂದಿಸಲಾಗಿದೆ. ಮಹಜರ್ ದಾಖಲೆಗಳಲ್ಲಿಯೂ ಇದನ್ನೇ ಉಲ್ಲೇಖಿಸಲಾಗಿದೆ. ನಾನು ದಾಖಲೆಗಳ ಮೂಲಕ ಮಾತ್ರ ಹೋಗಬಲ್ಲೆ. ಬಹುಶಃ ಸವಕಳಿಯಿಂದಾಗಿ, ಚಿನ್ನ ಕಳೆದುಹೋಗಿರಬಹುದು. ಹೀಗಾಗಿಯೇ ಟಿಡಿಬಿ ಮರುಲೇಪನ ಮಾಡಲು ನಿರ್ಧರಿಸಿರಬಹುದು’ ಎಂದಿದ್ದಾನೆ.

ಚಿನ್ನದಲ್ಲಿ ಕೊರತೆ ಕಂಡುಬಂದ ಸಂಗತಿ ಈಗಾಗಲೇ ಕೇರಳದಲ್ಲಿ ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ. ದೇಗುಲದ ಸಮಗ್ರ ಆಸ್ತಿಯ ತನಿಖೆ ನಡೆಸುವಂತೆ ಹೈಕೋರ್ಟ್‌ ಆದೇಶಿಸಿದೆ. ಈ ನಡುವೆ ಪೊಟ್ಟಿಯಿಂದ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು