
ನೆಲ್ಲೂರು(ಡಿ.28): ಮತ್ತೆ ಅಧಿಕಾರಕ್ಕೆ ಬರಲು ಶತಾಯಗತಾಯ ಪ್ರಯತ್ನದಲ್ಲಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ದುಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ನೆಲ್ಲೂರು ಜಿಲ್ಲೆಯ ಪಮೂರು ಎನ್ಟಿಆರ್ ಸರ್ಕಲ್ನಲ್ಲಿ ತೆರಳುತ್ತಿದ್ದ ಚಂದ್ರಬಾಬು ನಾಯ್ಡು ರೋಡ್ಶೋ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಸಿದೆ. ಕಿಕ್ಕಿರಿದು ತುಂಬಿದ್ದ ರೋಡ್ಶೋದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 8 ಮಂದಿ ಮೃತಪಟ್ಟಿದ್ದಾರೆ. ಮೃತರ ಪೈಕಿ ಓರ್ವ ಮಹಿಳೆಯೂ ಸೇರಿದ್ದಾರೆ. ಇನ್ನು ಹಲವರು ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ.
ಕಂಡಕೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಂದ್ರಬಾಬು ನಾಯ್ಡು ಭಾಷಣ ಆರಂಭಿಸುವ ಮೊದಲೇ ಕಾಲ್ತುಳಿತ ಸಂಭವಿಸಿದೆ. ಕಿಕ್ಕಿರಿದು ತುಂಬಿದ್ದ ಜನಸಾಗರ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇತ್ತ ಕಾರ್ಯಕ್ರಮ ಅರ್ಧಕ್ಕೆ ಮೊಟುಕುಗೊಳಿಸಿ ಆಸ್ಪತ್ರೆ ತೆರಳಿದ ಚಂದ್ರಬಾಬು ನಾಯ್ಡು ಗಾಯಗೊಂಡವರ ಆರೋಗ್ಯ ವಿಚಾರಿಸಿದರು. ಇನ್ನು ದುರಂತದಲ್ಲಿ ಮಡಿದವರ ಕುಟುಂಬಕ್ಕೆ ನಾಯ್ಡು ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಟಿಡಿಪಿ ಮತ್ತೆ ಎನ್ಡಿಎ ಬಳಗಕ್ಕೆ: ನಾಯ್ಡು ಕರೆತರಲು ರಾಮೋಜಿ ಮಧ್ಯಸ್ಥಿಕೆ?
ಘಟನೆಯಿಂದ ತೀವ್ರವಾಗಿ ನೋವಾಗಿದೆ. ದುರಂತದಲ್ಲಿ ಮಡಿದವರ ಕುಟುಂಬದ ಜೊತೆ ನಿಲ್ಲುತ್ತೇನೆ. ಅವರಿಗೆ ಎಲ್ಲಾ ನೆರವು ನೀಡುತ್ತೇನೆ. ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿ ನನ್ನದು. ಎನ್ಟಿಆರ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ನೀಡುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ. ದುರಂತದಲ್ಲಿ ಮಡಿದವರ ಅಂತ್ಯಕ್ರಿಯೆಯನ್ನು ಪಕ್ಷ ಮಾಡಲಿದೆ. ಇನ್ನು ಗಾಯಗೊಂಡವರಿಗೂ ನೆರವು ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ರೋಡ್ಶೋ ಮೂಲಕ ಸಾಗಿಬಂದ ಬೃಹತ್ ರ್ಯಾಲಿ ಎನ್ಟಿಆರ್ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿ ಕಾಲ್ತುಳಿತ ಸಂಭವಿಸಿದೆ. ಕಾಲ್ತುಳಿತದಿಂದ ಬಚಾವ್ ಆಗಲು ಹೋದ ಹಲವರು ತೆರೆದ ಚರಂಡಿಗೆ ಬಿದ್ದಿದ್ದಾರೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಅಧಿಕಾರಕ್ಕೆ ಮರಳುವವರೆಗೂ ಸದನದಲ್ಲಿ ಕಾಲಿಡುವುದಿಲ್ಲ : ಚಂದ್ರಬಾಬು ನಾಯ್ಡು!
ಜ.27ರಿಂದ ನಾಯ್ಡು ಪುತ್ರ ಲೋಕೇಶ್ 4,000 ಕಿ.ಮೀ. ಪಾದಯಾತ್ರೆ
ಒಂದೆಡೆ ಚಂದ್ರಬಾಬು ನಾಯ್ಡು ರೋಡ್ ಶೋ ಆಯೋಜಿಸುತ್ತಿದ್ದರೆ, ಇತ್ತ ಪುತ್ರ ಹಾಗೂ ಆಂಧ್ರ ಪ್ರದೇಶ ವಿಧಾನಸಭೆ ಸದಸ್ಯ ನಾರಾ ಲೋಕೇಶ್ 2023 ಜ.27ರಿಂದ ರಾಜ್ಯದಲ್ಲಿ ಪಾದಯಾತ್ರೆ ಕೈಗೊಳ್ಳಲಿದ್ದಾರೆ. 2024ರ ಏಪ್ರಿಲ್-ಮೇನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ನಿಂದ ಅಧಿಕಾರವನ್ನು ಮರಳಿ ತಮ್ಮ ತೆಕ್ಕೆಗೆ ಪಡೆದುಕೊಳ್ಳುವ ಹಿನ್ನೆಲೆಯಲ್ಲಿ ಲೋಕೇಶ್ ಪಾದಯಾತ್ರೆ ಪ್ರಾರಂಭಿಸಲಿದ್ದಾರೆ.
ಚುನಾವಣೆಯಲ್ಲಿ ಮತ್ತೆ ಸ್ಪಷ್ಟ ಬಹುಮತ ಪಡೆಯಲು ಚಂದ್ರಬಾಬು ನಾಯ್ಡು ಸತತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಇತ್ತೀಚೆಗೆ 2024ರಲ್ಲಿ ಟಿಡಿಪಿ ಆಯ್ಕೆ ಮಾಡದಿದ್ದರೆ ಅದು ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿದ್ದರು. 2024ರ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರದೇ ಹೋದಲ್ಲಿ ಅದೇ ತಮ್ಮ ಕೊನೆ ಚುನಾವಣೆಯಾಗಿರಲಿದೆ ಎಂದು ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಈ ಮೂಲಕ ಭಾವನಾತ್ಮಕವಾಗಿ ಮತದಾರರನನು ಸೆಳೆಯಲೆತ್ನಿಸಿದ್ದಾರೆ. ಬುಧವಾರ ರಾತ್ರಿ ಕರ್ನೂಲಿನ ರೋಡ್ ಶೋನಲ್ಲಿ ಮಾತನಾಡಿದ ಅವರು ‘ಟಿಡಿಪಿ ಅಧಿಕಾರಕ್ಕೆ ಬರುವವರೆಗೂ ನಾನು ವಿಧಾನಸಭೆಗೆ ಕಾಲಿಡುವುದಿಲ್ಲ. ಅಧಿಕಾರಕ್ಕೆ ಬಂದರೆ ಆಂಧ್ರ ಪ್ರದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ. ಜನ ನನ್ನ ವಯಸ್ಸಿನ ಬಗ್ಗೆ ವ್ಯಂಗ್ಯ ಮಾಡುತ್ತಾರೆ. ಆದರೆ ನನ್ನ ಹಾಗೂ ಪ್ರಧಾನಿ ಮೋದಿಯವರ ವಯಸ್ಸು ಒಂದೇ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ