
ದೇಶದಲ್ಲಿ ಕೋವಿಡ್ - 19 ಕೇಸ್ಗಳ ಪ್ರಮಾಣ ಇಳಿಕೆಯಾಗಿದ್ದರೂ, ಕೊರೊನಾ ವೈರಸ್ ಇನ್ನೂ ಹೋಗಿಲ್ಲ ಎಂದು ಸರ್ಕಾರ ಹಾಗೂ ವೈದ್ಯರು ಎಚ್ಚರಿಸುತ್ತಲೇ ಇರುತ್ತಾರೆ. ಈ ಹಿನ್ನೆಲೆ ಸದ್ಯ, ಕೆಂದ್ರ ಸರ್ಕಾರ ಉಚಿತವಾಗಿ ಕೋವಿಡ್ - 19 ವಿರುದ್ಧದ ಮೂರನೇ ಡೋಸ್ ಲಸಿಕೆಯನ್ನು 45 ದಿನಗಳ ಕಾಲ ಉಚಿತವಾಗಿ ನೀಡುತ್ತಿದೆ. ಉಚಿತವಾಗಿ ಲಸಿಕೆ ನೀಡುವುದನ್ನು ಆರಂಭಿಸಿದ ನಂತರ ಮೂರನೇ ಡೋಸ್ ಲಸಿಕೆ ಪಡೆಯುತ್ತಿರುವ ಜನಸಂಖ್ಯೆ ಹೆಚ್ಚಾಗಿದೆ ಎಂಬ ವರದಿಗಳಿದ್ರೂ, ಇನ್ನೂ ಹಲವರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆ ಮೂರನೇ ಡೋಸ್ ಲಸಿಕೆ ಪಡೆದ್ರೆ ಉಚಿತವಾಗಿ ‘ಚೋಲೆ ಭಟುರೆ’ ಪಡೆಯುವ ಅವಕಾಶ ನಿಮಗಿದೆ. ಹೇಗೆ ಅಂತೀರಾ..? ಮುಂದೆ ಓದಿ..
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆ ಪಡೆದ ಚಂಡೀಗಢದ ವ್ಯಾಪಾರಿಯೊಬ್ಬರು ಕೋವಿಡ್ - 19 ಲಸಿಕೆಯ ಮೂರನೇ ಡೋಸ್ ಪಡೆದವರಿಗೆ ಜನರಿಗೆ ಉಚಿತ ‘ಚೋಲೆ ಭಟುರೆ’ ಅನ್ನು ನೀಡುತ್ತಿದ್ದಾರೆ. ಕೊರೊನಾ ಪ್ರಕರಣಗಳು ಇನ್ನೂ ವರದಿಯಾಗುತ್ತಿದ್ದು, ಆದರೆ ಮೂರನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಹೆಚ್ಚು ಜನರು ಮುಂದಾಗುತ್ತಿಲ್ಲ ಎಂಬ ಕಳವಳ ವ್ಯಕ್ತಪಡಿಸಿದ 45 ವರ್ಷದ ಮಾರಾಟಗಾರ ಸಂಜಯ್ ರಾಣಾ ಈ ನಿರ್ಧಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೋವಿಡ್ ಲಸಿಕೆ: ಫ್ರೀ 3ನೇ ಡೋಸ್ಗೆ ಭಾರೀ ಬೇಡಿಕೆ
ಕಳೆದ ವರ್ಷ ಸಹ ಕೋವಿಡ್ ಲಸಿಕೆ ಪಡೆದ ನಂತರ ಅದೇ ದಿನ ಲಸಿಕೆ ಪಡೆದ ಬಗ್ಗೆ ಪುರಾವೆ ನೀಡಿದರೆ ಉಚಿತವಾಗಿ ಚೋಲೆ ಭಟುರೆ ನೀಡುತ್ತಿದ್ದರು ಇದೇ ಚಂಡೀಗಢದ ವ್ಯಾಪಾರಿ ಸಂಜಯ್ ರಾಣಾ. ಅವರ ಬಗ್ಗೆ ಪ್ರಸ್ತಾಪಿಸಿದ್ದ ಪ್ರಧಾನಿ ಮೋದಿ, ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದರು.
"ಸಂಜಯ್ ರಾಣಾ ಜಿಯವರ 'ಚೋಲೆ ಭಟುರೆ' ಅನ್ನು ಉಚಿತವಾಗಿ ಸವಿಯಲು, ನೀವು ಅದೇ ದಿನ ಲಸಿಕೆ ತೆಗೆದುಕೊಂಡಿದ್ದೀರಿ ಎಂದು ತೋರಿಸಬೇಕು. ನೀವು ಲಸಿಕೆ ಸಂದೇಶವನ್ನು ತೋರಿಸಿದ ತಕ್ಷಣ ಅವರು ನಿಮಗೆ ರುಚಿಕರವಾದ 'ಚೋಲೆ ಭಟುರೆ' ನೀಡುತ್ತಾರೆ’’ ಎಂದು ಆ ವೇಳೆ ಪ್ರಧಾನಿ ಮೋದಿ ಹೇಳಿದ್ದರು. ಅಲ್ಲದೆ, ಅವರ ಪ್ರಯತ್ನವನ್ನು ಶ್ಲಾಘಿಸಿದ್ದ ಪ್ರಧಾನಿ, "ಸಮಾಜದ ಒಳಿತಿಗಾಗಿ ಕೆಲಸ ಮಾಡಲು, ಸೇವಾ ಮನೋಭಾವ ಮತ್ತು ಕರ್ತವ್ಯ ಪ್ರಜ್ಞೆ ಬೇಕು ಎಂದು ಹೇಳಲಾಗುತ್ತದೆ, ನಮ್ಮ ಸಹೋದರ ಸಂಜಯ್ ಇದನ್ನು ಸಾಬೀತುಪಡಿಸುತ್ತಿದ್ದಾರೆ" ಎಂದು ಹೇಳಿದ್ದರು.
ಐದೂವರೆ ತಿಂಗಳ ಬಳಿಕ ಕರ್ನಾಟಕದಲ್ಲಿ 2000ಕ್ಕೂ ಅಧಿಕ ಕೋವಿಡ್ ಪ್ರಕರಣ: 4 ಸಾವು
ಕಳೆದ 15 ವರ್ಷಗಳಿಂದ ಆಹಾರದ ಸ್ಟಾಲ್ ನಡೆಸುತ್ತಿದ್ದೇನೆ ಎಂದು ಹೇಳುವ ಸಂಜಯ್, ಸೈಕಲ್ನಲ್ಲಿ ಚೋಲೆ ಭಟುರೆ ಮಾರಾಟ ಮಾಡುತ್ತಾರಂತೆ. ಅಲ್ಲದೆ, ಕಳೆದ ವರ್ಷ ತಮ್ಮ ಮಗಳು ಹಾಗೂ ಸೊಸೆ ಲಸಿಕೆ ಪಡೆದವರಿಗೆ ಉಚಿತವಾಗಿ ಚೋಲೆ ಭಟುರೆ ನೀಡುವ ಐಡಿಯಾ ನೀಡಿದ್ದರು ಎಂದಿದ್ದಾರೆ. ಹಾಗೂ, ತಾನು ಮೂರನೇ ಡೋಸ್ ಲಸಿಕೆ ಪಡೆದಿದ್ದೇನೆ ಎಂದ ವ್ಯಾಪಾರಿ, ಹೆಚ್ಚು ಜನರು ಲಸಿಕೆ ಪಡೆಯಲು ಮುದಾಗದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
"ಎಲ್ಲ ಅರ್ಹರು ಮುಂದೆ ಬರಬೇಕು ಮತ್ತು ಹಿಂಜರಿಯಬಾರದು. ಈಗಾಗಲೇ, ನಾವು ದೇಶದ ಹಲವೆಡೆ ಸೋಂಕುಗಳಲ್ಲಿ ಸ್ವಲ್ಪ ಏರಿಕೆ ಕಾಣುತ್ತಿದ್ದೇವೆ. ಪರಿಸ್ಥಿತಿ ಕೈ ಮೀರುವವರೆಗೆ ನಾವು ಏಕೆ ಕಾಯಬೇಕು? ಏಪ್ರಿಲ್-ಮೇ 2021 ರಲ್ಲಿದ್ದ ಪರಿಸ್ಥಿತಿಯ ಬಗ್ಗೆ ನಾವು ಪಾಠಗಳನ್ನು ಕಲಿಯಬೇಕು’’ ಎಂದೂ ರಾಣಾ ಹೇಳಿದರು. ಹಾಗೂ, ಕಳೆದ ವರ್ಷ ಮೇ ತಿಂಗಳಿನಿಂದ 7 ತಿಂಗಳಿಗೂ ಹೆಚ್ಚು ಕಾಲ ಉಚಿತ 'ಚೋಲೆ ಭಟುರೆ' ನೀಡಿದ್ದೇನೆ ಮತ್ತು ಈ ಬಾರಿ ಕೆಲವು ವಾರಗಳವರೆಗೆ ಅದನ್ನು ಉಚಿತವಾಗಿ ನೀಡಲು ತಲೆ ಕೆಡಿಸಿಕೊಳ್ಳಲ್ಲ ಎಂದು ಸಹ ಚಂಡೀಗಢದ 45 ವರ್ಷದ ಬೀದಿ ಬದಿಯ ವ್ಯಾಪಾರಿ ಸಂಜಯ್ ರಾಣಾ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ