ದೇಶದಲ್ಲಿ ಯಾವ ರೀತಿ ವೈರಾಣು ಹಬ್ಬಿದೆ ಎಂದು ತಿಳಿಯಲು ಕೇಂದ್ರದ ಹೊಸ ಪ್ರಯತ್ನ!

By Kannadaprabha NewsFirst Published May 13, 2020, 3:36 PM IST
Highlights

ಕರ್ನಾಟಕದ 3 ಜಿಲ್ಲೆಗಳಲ್ಲೂ ಕೊರೋನಾ ವೈರಸ್‌ ಪರೀಕ್ಷೆ| ದೇಶಾದ್ಯಂತ ರಾರ‍ಯಂಡಮ್‌ ಟೆಸ್ಟ್‌| ದೇಶದಲ್ಲಿ ಯಾವ ರೀತಿ ವೈರಾಣು ಹಬ್ಬಿದೆ ಎಂಬುದರ ಶೋಧಕ್ಕೆ ಕೇಂದ್ರ ಸರ್ಕಾರದಿಂದ ಸಮೀಕ್ಷೆ

ನವದೆಹಲಿ(ಮೇ.13): ದಿನೇ ದಿನೇ ತನ್ನ ಪ್ರತಾಪ ತೋರುತ್ತಿರುವ ಕೊರೋನಾ ವೈರಸ್‌ ದೇಶದಲ್ಲಿ ಯಾವ ಪ್ರಮಾಣದಲ್ಲಿ ಹಬ್ಬಿದೆ ಎಂಬುದನ್ನು ಪತ್ತೆ ಮಾಡಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೇಶದ 21 ರಾಜ್ಯಗಳ 69 ಜಿಲ್ಲೆಗಳಲ್ಲಿ ರಾರ‍ಯಂಡಮ್‌ ಪರೀಕ್ಷೆ ನಡೆಸಲು ಮುಂದಾಗಿದೆ. ಇದರಲ್ಲಿ ಕರ್ನಾಟಕದ ಬೆಂಗಳೂರು ನಗರ, ಚಿತ್ರದುರ್ಗ ಹಾಗೂ ಕಲಬುರಗಿ ಜಿಲ್ಲೆಗಳೂ ಇವೆ.

ಸಮುದಾಯ ಹಾಗೂ ಆಸ್ಪತ್ರೆ ಆಧರಿತ ಸಮೀಕ್ಷೆ ಇದಾಗಿದೆ. ಪ್ರತಿ ಜಿಲ್ಲೆಯ 10 ಕ್ಲಸ್ಟರ್‌ಗಳಲ್ಲಿ ಮನೆಯಿಂದ ಒಬ್ಬರಂತೆ 400 ಜನರನ್ನು ಆಯ್ಕೆ ಮಾಡಿ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ವ್ಯಕ್ತಿಗಳಿಂದ ರಕ್ತದ ಮಾದರಿ ಪಡೆಯಲಾಗುತ್ತದೆ.

ವುಹಾನ್‌ನಲ್ಲಿ 1.1 ಕೋಟಿ ಜನರಿಗೆ ಕೊರೋನಾ ಟೆಸ್ಟ್‌!

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ಜತೆಗೂಡಿ ಆರೋಗ್ಯ ಸಚಿವಾಲಯ ಈ ಸಮೀಕ್ಷೆ ನಡೆಸಲಿದೆ. ಇದಕ್ಕೆ ಆಯಾ ರಾಜ್ಯಗಳ ಆರೋಗ್ಯ ಇಲಾಖೆಗಳಿಂದಲೂ ಬೆಂಬಲವಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯೂ ಸಾಥ್‌ ನೀಡಲಿದೆ.

ಭಾರತೀಯ ಜನಸಂಖ್ಯೆಯಲ್ಲಿ ಯಾವ ಮಟ್ಟಿಗೆ ಕೊರೋನಾ ಹಬ್ಬಿದೆ ಎಂಬುದನ್ನು ಪತ್ತೆ ಹಚ್ಚಲು ಈ ಸಮೀಕ್ಷೆ ಸಹಕಾರಿಯಾಗಲಿದೆ. ಸುಮಾರು 24 ಸಾವಿರ ವಯಸ್ಕರಲ್ಲಿ ಈ ಸಮೀಕ್ಷೆ ನಡೆಸಲಾಗುತ್ತದೆ.

ರಾಜ್ಯದಲ್ಲಿ ನಿನ್ನೆ ದಾಖಲೆಯ 63 ಕೇಸು: ಕೊರೋನಾ ಮುಕ್ತ ಜಿಲ್ಲೆ 5 ಮಾತ್ರ!

ಕರ್ನಾಟಕದಲ್ಲಿ ಎಲ್ಲೆಲ್ಲಿ?

* ಬೆಂಗಳೂರು ನಗರ

* ಚಿತ್ರದುರ್ಗ 

* ಕಲಬುರಗಿ

ಪರೀಕ್ಷೆ ಹೇಗೆ?

- ಪ್ರತಿ ಜಿಲ್ಲೆಯಲ್ಲಿ 10 ಕ್ಲಸ್ಟರ್‌ ಗುರುತಿಸಲಾಗುತ್ತದೆ

- ಮನೆಗೆ ಒಬ್ಬರಂತೆ 400 ಮಂದಿ ಆಯ್ಕೆ ಮಾಡಲಾಗುತ್ತದೆ

- ದೇಹದಿಂದ ರಕ್ತದ ಮಾದರಿ ತೆಗೆದು ಪರೀಕ್ಷೆ ನಡೆಸಲಾಗುತ್ತದೆ

click me!