
ನವದೆಹಲಿ (ಡಿ.04): ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ತಂಟೆಗೆ ಸರ್ಕಾರ ಹೋಗುವುದಿಲ್ಲ. ಅದಕ್ಕೆ ಯಾವುದೇ ಬದಲಾವಣೆಯನ್ನೂ ತರುವುದಿಲ್ಲ. ಎಂಎಸ್ಪಿ ವ್ಯವಸ್ಥೆ ಮುಂದುವರಿಯಲಿದೆ. ರೈತರು ಕೂಡಲೇ ಚಳವಳಿ ಹಿಂಪಡೆಯಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮನವಿ ಮಾಡಿದ್ದಾರೆ.
ರೈತರೊಂದಿಗಿನ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಪಿಎಂಸಿಗಳನ್ನು ಮತ್ತಷ್ಟುಬಲಯುತಗೊಳಿಸಲು ಹಾಗೂ ಅದರ ಬಳಕೆ ಹೆಚ್ಚಳವಾಗುವಂತೆ ನೋಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಲಿದೆ. ಎಪಿಎಂಸಿ ಹಾಗೂ ನೂತನ ಕಾಯ್ದೆಯಡಿ ರಚನೆಯಾಗುವ ಖಾಸಗಿ ಮಂಡಳಿಗೆ ಸಮಾನ ತೆರಿಗೆ ವಿಧಿಸುವ ಬಗ್ಗೆಯೂ ಸರ್ಕಾರ ಆಲೋಚಿಸಲಿದೆ ಎಂದು ಆಶ್ವಾಸನೆ ನೀಡಿದರು.
ವ್ಯಾಪಾರದ ಸಂದರ್ಭದಲ್ಲಿ ಯಾವುದೇ ವಿವಾದ ಸೃಷ್ಟಿಯಾದರೆ ಉಪವಿಭಾಗೀಯ ಮ್ಯಾಜಿಸ್ಪ್ರೇಟ್ ಕೋರ್ಟ್ ಮೊರೆ ಹೋಗಲು ಕಾಯ್ದೆಯಡಿ ಅವಕಾಶವಿದೆ. ಆದರೆ, ರೈತ ಸಂಘಟನೆಗಳು ಇದು ಕೆಳಹಂತದ ನ್ಯಾಯಾಲಯ. ಇನ್ನೂ ಉನ್ನತ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವ ಅವಕಾಶ ಇರಬೇಕು ಎಂದು ಕೇಳಿದ್ದಾರೆ. ಸರ್ಕಾರ ಈ ವಿಷಯದ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಿ, ಅದನ್ನು ಪರಿಗಣಿಸಲು ಒಪ್ಪಿಗೆ ನೀಡಿದೆ ಎಂದರು.
ತೀವ್ರಗೊಂಡ ರೈತ ಹೋರಾಟ; ಹರ್ಯಾಣ ಗಡಿಯಲ್ಲಿ ಪ್ರತಿಭಟನಾನಿರತ ರೈತರ ಜೊತೆ ಏಷ್ಯಾನೆಟ್ ಸುವರ್ಣ ನ್ಯೂಸ್ ...
ನೂತನ ಕೃಷಿ ಕಾಯ್ದೆಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಗಳು ದುರ್ಬಲವಾಗುತ್ತವೆ ಎಂಬ ರೈತರ ಕಳವಳದ ಬಗ್ಗೆ ಪರಿಶೀಲಿಸಲು ಸರ್ಕಾರ ಸಿದ್ಧವಿದೆ. ಎಪಿಎಂಸಿ ಹಾಗೂ ಖಾಸಗಿ ಮಂಡಿಗಳ ನಡುವೆ ಸಮಾನ ಸ್ಪರ್ಧೆ ಇರುವಂತೆ ಸರ್ಕಾರ ಗಮನಹರಿಸಿದೆ. ಎಪಿಎಂಸಿಯಿಂದ ಹೊರಗೆ ಕಾರ್ಯನಿರ್ವಹಿಸುವ ವ್ಯಾಪಾರಿಗಳ ನೋಂದಣಿಗೆ ಹೊಸ ಕೃಷಿ ಕಾಯ್ದೆಯಡಿ ಅವಕಾಶ ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ರೈತರೊಂದಿಗಿನ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹೊಸ ಕೃಷಿ ಕಾಯ್ದೆಗಳಿಂದ ಎಪಿಎಂಸಿ ವ್ಯವಸ್ಥೆ ಅಂತ್ಯವಾಗಲಿದೆ ಎಂದು ರೈತರು ಹಾಗೂ ರೈತ ಒಕ್ಕೂಟಗಳು ಚಿಂತಿತವಾಗಿವೆ. ಎಪಿಎಂಸಿ ಚೌಕಟ್ಟನ್ನು ಬಲಯುತಗೊಳಿಸಲು ಕೇಂದ್ರ ಸರ್ಕಾರ ಪರಿಶೀಲಿಸಲಿದೆ. ಹೊಸ ಕಾಯ್ದೆಯ ಪ್ರಕಾರ, ಎಪಿಎಂಸಿಯ ಹೊರಗೆ ಖಾಸಗಿ ಮಂಡಿಗಳು ತೆರೆಯಲ್ಪಡುತ್ತವೆ. ಆ ಮಂಡಿಗಳೂ ನೋಂದಣಿಯಾಗುವಂತೆ ಕೇಂದ್ರ ಸರ್ಕಾರ ನೋಡಿಕೊಳ್ಳಲಿದೆ. ಖಾಸಗಿ ಹಾಗೂ ಎಪಿಎಂಸಿ ನಡುವೆ ತೆರಿಗೆ ಸಮಾನತೆ ಯಾವ ರೀತಿ ಇರಬೇಕು ಎಂಬುದನ್ನು ಸರ್ಕಾರ ಚರ್ಚಿಸಲಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ