
ಬೆಂಗಳೂರು(ಜ.29): ನದಿಗಳ ಉಳಿಸಿ ಅಭಿಯಾನದ ಮುಂದುವರಿದ ಭಾವಾಗಿ ಈಶಾ ಪ್ರತಿಷ್ಠಾನ ಆರಂಭಿಸಿದ ಕಾವೇರಿ ಕೂಗು(Cauvery Calling) ಅಭಿಯಾನದ ಫಲ ಇದೀಗ ಕಾಣತೊಡಗಿದೆ. ಸದ್ಗುರು ಜಗ್ಗಿ ವಾಸುದೇವ್(sadhguru jaggi vasudev) ನೀಡಿದ ಕರೆಗೆ ಓಗೊಟ್ಟ ರೈತರು ಕಾವೇರಿ ನದಿ(Cauvery River)ಕೊಳ್ಳದ ಗ್ರಾಮ, ಜಿಲ್ಲೆಗಳ ರೈತರು(Farmers) ಮರ ಆಧಾರಿತ ಕೃಷಿ ಅಳವಡಿಸಿಕೊಂಡಿದ್ದಾರೆ. ಪರಿಣಾಮ 2 ವರ್ಷಗಳಲ್ಲಿ ಬರೋಬ್ಬರಿ 2.1 ಕೋಟಿ ಗಿಡಗಳನ್ನು ನೆಡಲಾಗಿದೆ. ಈ ಮೂಲಕ ಅತೀ ದೊಡ್ಡ ಹಸಿರು ಕ್ರಾಂತಿಗೆ ಸದ್ಗುರು ನಾಂದಿ ಹಾಡಿದ್ದಾರೆ.
ಇತ್ತೀಚೆಗೆ ಸದ್ಗುರು ತಮ್ಮ ಕಾವೇರಿ ಕೂಗಿನ ಯಶಸ್ಸು ಹಾಗೂ ಪರಿಸರ ಸಂರಕ್ಷಣೆ ಕುರಿತ ಸಂತಸ ಹಂಚಿಕೊಂಡಿದ್ದರು. ಸೂಕ್ತ ಯೋಜನೆ ಹಾಗೂ ಕಾರ್ಯತಂತ್ರದ ಮೂಲಕ ಅವನತಿ ಹೊಂದಿದ ಭೂಪ್ರದೇಶವನ್ನು(degraded Land) ಬದಲಾಯಿಸಲು ಸಾಧ್ಯ ಎಂದು ಕಾವೇರಿ ಕೂಗು ಆಂದೋಲನದ ಮೂಲಕ ಜಗತ್ತಿಗೆ ತೋರಿಸಲಾಗಿದೆ. ಮಣ್ಣು ಮತ್ತು ನೀರಿನಿಂದ(River) ಪೋಷಣೆ ಪಡೆದ ಪ್ರತಿಯೊಬ್ಬರೂ ಈ ಆಂದೋಲನದ ಭಾಗವಾಗಬೇಕು ಎಂದು ಸದ್ಗುರು ಮನವಿ ಮಾಡಿದ್ದರು.
ರೈತರಿಗೆ(Farmers) ಇದು ಆದಾಯ ತರುವ ಯೋಜನೆಯಾಗಿದೆ. ಇದರ ಜೊತೆಗೆ ದೇಶದ ಮಣ್ಣು ಹಾಗೂ ನದಿ ಸಂರಕ್ಷಿಸಲ್ಪಡುತ್ತದೆ. 50 ವರ್ಷಗಳ ಹಿಂದೆ ಹರಿಯುತ್ತಿದ್ದ ಕಾವೇರಿ ಇದೀಗ ಕೇವಲ ಶೇಕಡಾ 40 ರಷ್ಟು ಮಾತ್ರ ಹರಿಯುತ್ತಿದೆ. ನದಿಗಳು ನಶಿಸಿ ಹೋಗುತ್ತಿದೆ. ಇದಕ್ಕೆ ನಾವೇ ನೇರ ಕಾರಣ. ಹೀಗಾಗಿ ನದಿ, ಭೂಮಿಯನ್ನು ಉಳಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಕಾವೇರಿ ಕೂಗಿಗೆ ಸ್ಪಂದಿಸುವ ಮೂಲಕ ಈ ಅಭಿಯಾನ ಯಶಸ್ವಿಗೊಳಿಸಲು ಕೈಜೋಡಿಸಿ ಎಂದು ಸದ್ಗುರು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕಾವೇರಿ ಕೂಗು ಸಂಯೋಜನಾಧಿಕಾರಿ ತಮಿಳ್ಮಾರನ್ ಈ ಸಂತಸ ಹಂಚಿಕೊಂಡಿದ್ದಾರೆ. ಕಾವೇರಿ ನದಿ ಹರಿಯುವ ಕರ್ನಾಟಕ ಹಾಗೂ ತಮಿಳುನಾಡಿನ(Karnataka and Tamilnadu) ಒಟ್ಟು 1,25,000 ರೈತರು ಕಾವೇರಿ ಕೂಗು ಅಭಿಯಾನದಡಿ ಮರ ಆಧಾರಿತ ಕೃಷಿಯಲ್ಲಿ(Tee based Farming) ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 2019ರಲ್ಲಿ ಆರಂಭಗೊಂಡ ಮಹತ್ವದ ಅಭಿಯಾನ ಇದೀಗ 2 ವರ್ಷ ಪೂರೈಸಿದೆ. 2 ವರ್ಷದಲ್ಲಿ ಅದ್ವೀತಿಯ ಸಾಧನೆಯೊಂದಿಗೆ ಕಾವೇರಿ ನದಿ ಮಾತ್ರವಲ್ಲ ಪರಿಸರವೂ ನಳನಳಿಸುವಂತೆ ಮಾಡಲಾಗಿದೆ.
ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಲು ಸದ್ಗುರು 2019ರಲ್ಲಿ ಕಾವೇರಿ ಕೂಗು ಅಭಿಯಾನ ಆರಂಭಿಸಿದರು. ಮೋಟಾರ್ಸೈಕಲ್ ರ್ಯಾಲಿ, ಹಲವು ಪ್ರಚಾರ ಕಾರ್ಯಕ್ರಮಗಳಿಂದ ದೇಶದಲ್ಲಿ ಕಾವೇರಿ ಕೂಗು ಅಭಿಯಾನ ಭಾರಿ ಸಂಚಲನ ಸೃಷ್ಟಸಿತ್ತು. ಸುಮಾರು 1,800ಕ್ಕೂ ಹೆಚ್ಚು ಪ್ರಚಾರ ಕಾರ್ಯಕ್ರಮದ ಮೂಲಕ ಕಾವೇರಿ ನದಿ ಉಳಿಸುವ ಮಹತ್ವದ ಆಂದೋಲನ ಆರಂಭಗೊಂಡಿತು.
ಕಾವೇರಿ ಕೂಗು ಅಡಿಯಲ್ಲಿ ಸ್ವಯಂ ಸೇವಕರು ಹಳ್ಳಿ ಹಳ್ಳಿಗೆ ತೆರಳು ರೈತರಿಗೆ ಮಾಹಿತಿ ನೀಡಿದ್ದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅರಣ್ಯ, ತೋಟಗಾರಿಕೆ ಇಲಾಖೆ, ಗ್ರಾಮ ಪಂಚಾಯಿತಿ ಸಹಯೋಗದೊಂದಿದೆ ಈ ಅಭಿಯಾನ ನಡೆಸಲಾಯಿತು. ರೈತರಿಗೆ ಮರ ಆಧಾರಿತ ಕೃಷಿಯಿಂದ ಆರ್ಥಿಕ ಪ್ರಯೋಜನ ಹಾಗೂ ಪರಿಸರ ಪ್ರಯೋಜನ ಕುರಿತ ಮಾಹಿತಿಯನ್ನು ತಿಳಿಹೇಳಲಾಯಿತು.
ಮರ ಆಧಾರಿತ ಕೃಷಿ ಕುರಿತು ಆಸಕ್ತಿ ವ್ಯಕ್ತಪಡಿಸುವ ರೈತರ ಬಳಿ ಸೂಕ್ತ ಸಸಿಗಳ ಮಾಹಿತಿ, ನೀರಾವರಿ ಸೌಲಭ್ಯ, ಅರಣ್ಯ ಆಧಾರಿತ ಕೃಷಿ ತರಬೇತಿಗಳನ್ನು ಸ್ವಯಂ ಸೇವಕರು ನೀಡಿದ್ದರು. ಈ ಮೂಲಕ ರೈತರಿಗೆ ಸುಲಭವಾಗಿ ಹಾಗೂ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು ಎಂದು ತಮಿಳ್ಮಾರನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ