ರಾಹುಲ್‌ ಕೇಸ್‌: ಪೂರ್ಣೇಶ್‌ ಮೋದಿ, ಗುಜರಾತ್‌ ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

By Anusha KbFirst Published Jul 22, 2023, 8:13 AM IST
Highlights

ಮೋದಿ ಉಪನಾಮ' ಮಾನಹಾನಿ ಪ್ರಕರಣದಲ್ಲಿ ತಮಗೆ ವಿಧಿಸಿದ ಎರಡು ವರ್ಷಗಳ ಜೈಲುಶಿಕ್ಷೆಗೆ ತಡೆ ಕೋರಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಪ್ರಕರಣದ ದೂರುದಾರರಾದ ಗುಜರಾತ್‌ನ (Gujarat) ಮಾಜಿ ಸಚಿವ ಪೂರ್ಣೇಶ್‌ ಮೋದಿ (Purnesh Modi) ಮತ್ತು ಗುಜರಾತ್‌ ಸರ್ಕಾರಕ್ಕೆ ಸುಪ್ರಿಂಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. 

ನವದೆಹಲಿ:  'ಮೋದಿ ಉಪನಾಮ' ಮಾನಹಾನಿ ಪ್ರಕರಣದಲ್ಲಿ ತಮಗೆ ವಿಧಿಸಿದ ಎರಡು ವರ್ಷಗಳ ಜೈಲುಶಿಕ್ಷೆಗೆ ತಡೆ ಕೋರಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಸಂಬಂಧ ಪ್ರಕರಣದ ದೂರುದಾರರಾದ ಗುಜರಾತ್‌ನ (Gujarat) ಮಾಜಿ ಸಚಿವ ಪೂರ್ಣೇಶ್‌ ಮೋದಿ (Purnesh Modi) ಮತ್ತು ಗುಜರಾತ್‌ ಸರ್ಕಾರಕ್ಕೆ ಸುಪ್ರಿಂಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ. ಮುಂದಿನ ವಿಚಾರಣೆಯನ್ನು ಆ.4ಕ್ಕೆ ನಿಗದಿಪಡಿಸಿದೆ.

ಲೋಕಸಭೆ ಚುನಾವಣೆಗೂ ಮುನ್ನ ಕೋಲಾರದ ರಾಲಿಯಲ್ಲಿ ‘ಮೋದಿ ಎಂಬ ಸರ್‌ನೇಮ್‌ ಹೊಂದಿದವರೆಲ್ಲ ಕಳ್ಳರೇ ಯಾಕಾಗಿರುತ್ತಾರೆ’ ಎಂದು ರಾಹುಲ್‌ ಪ್ರಶ್ನಿಸಿದ್ದರು. ಅದರ ವಿರುದ್ಧ ಪೂರ್ಣೇಶ್‌ ಮೋದಿ ಹೂಡಿದ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ರಾಹುಲ್‌ಗೆ ಎರಡು ವರ್ಷ ಜೈಲುಶಿಕ್ಷೆಯಾಗಿತ್ತು. ಹೀಗಾಗಿ ವಯನಾಡ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಹುಲ್ ಗಾಂಧಿ ಸಂಸತ್‌ ಸದಸ್ಯತ್ವ ರದ್ದಾಗಿತ್ತು. ಶಿಕ್ಷೆಗೆ ತಡೆ ನೀಡುವಂತೆ ಕೋರಿ ರಾಹುಲ್‌ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್‌ ಹೈಕೋರ್ಟ್ ವಜಾಗೊಳಿಸಿತ್ತು. ಅದನ್ನು ರಾಹುಲ್‌ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

Breaking: ಮೋದಿ ಸರ್‌ನೇಮ್‌ ಕೇಸ್‌: ಗುಜರಾತ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋದ ರಾಹುಲ್‌ ಗಾಂಧಿ

ಅರ್ಜಿ ವಿಚಾರಣೆ ವೇಳೆ ರಾಹುಲ್‌ ಪರ ವಾದಿಸಿದ ಹಿರಿಯ ನ್ಯಾಯವಾದಿ ಅಭಿಷೇಕ್‌ ಸಿಂಘ್ವಿ (Abhishek singhwi), ರಾಹುಲ್‌ ಈಗಾಗಲೇ 111 ದಿನ ಪರಿತಪಿಸಿದ್ದಾರೆ. ಸಂಸತ್ತಿನ ಒಂದು ಅಧಿವೇಶನದಿಂದ ವಂಚಿತರಾಗಿದ್ದಾರೆ. ಈಗ ನಡೆಯುತ್ತಿರುವ ಇನ್ನೊಂದು ಅಧಿವೇಶನದಿಂದಲೂ ವಂಚಿತರಾಗುವ ಸಾಧ್ಯತೆಯಿದೆ. ಅವರು ಪ್ರತಿನಿಧಿಸುತ್ತಿದ್ದ ವಯನಾಡ್‌ ಕ್ಷೇತ್ರಕ್ಕೆ ಯಾವ ಕ್ಷಣದಲ್ಲಿ ಬೇಕಾದರೂ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆಯಿದೆ. ಹೀಗಾಗಿ ಕೂಡಲೇ ಶಿಕ್ಷೆಗೆ ತಡೆ ನೀಡಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಪೂರ್ಣೇಶ್‌ ಮತ್ತು ಗುಜರಾತ್‌ ಸರ್ಕಾರಕ್ಕೆ ನ್ಯಾ.ಬಿ.ಆರ್‌.ಗವಾಯಿ ಹಾಗೂ ಪಿ.ಕೆ.ಮಿಶ್ರಾ ಪೀಠ ನೋಟಿಸ್‌ ಜಾರಿಗೊಳಿಸಿತು.

ರಾಹುಲ್‌ ಗಾಂಧಿಗೆ ಶಿಕ್ಷೆ ತಗ್ಗಿಸದ ಹೈಕೋರ್ಟ್‌: ಅನರ್ಹತೆ ತಡೆಯಾಜ್ಞೆ ಅರ್ಜಿ ತಿರಸ್ಕಾರ

 

click me!