
ಕೋಲ್ಕತಾ(ಮೇ.22): ಪಶ್ಚಿಮ ಬಂಗಾಳ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾದ ಬಕ್ರೀದ್ ಗೋವಧೆ ವಿಚಾರದಲ್ಲಿ ಈಗ ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರು ವಧೆ ನಡೆಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಬೆಂಬಲ ಸೂಚಿಸಿದೆ.
ತೀರ್ಪಿನ ವೇಳೆ ನ್ಯಾಯಾಲಯ, 'ಗೋವಧೆ ಈದ್ ಅಲ್-ಅಧಾ ಹಬ್ಬದ ಅವಿಭಾಜ್ಯ ಅಂಗವಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಗಳನ್ನು ವಧೆ ಮಾಡಲು ಅವಕಾಶ ನೀಡಲಾಗುವುದಿಲ್ಲ' ಎಂದು ಸ್ಪಷ್ಟಪಡಿಸಿದೆ. ಈ ಮಾತು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ.
ಮೇ 13ರಂದು ಪಶ್ಚಿಮ ಬಂಗಾಳ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯಲ್ಲಿ, ಹಸು, ಕರು, ಎಮ್ಮೆ, ಎತ್ತು ಮತ್ತು ಹೋರಿಗಳನ್ನು 'ಅನರ್ಹ' ಎಂದು ಪ್ರಮಾಣೀಕರಿಸಿದ ಬಳಿಕ ಮಾತ್ರ ವಧೆ ಮಾಡಬಹುದು ಎಂದು ಹೇಳಲಾಗಿತ್ತು.
ಇದನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಮುಖ್ಯ ನ್ಯಾಯಮೂರ್ತಿ ಸುಜೋಯ್ ಪಾಲ್ ಹಾಗೂ ನ್ಯಾಯಮೂರ್ತಿ ಪಾರ್ಥ ಸಾರಥಿ ಸೇನ್ ನೇತೃತ್ವದ ಪೀಠ, 'ಈ ಅಧಿಸೂಚನೆ 2018ರ ಹೈಕೋರ್ಟ್ ಆದೇಶದ ಅನುಸಾರವೇ ಹೊರಡಿಸಲಾಗಿದೆ” ಎಂದು ಹೇಳಿ ಅರ್ಜಿಗಳನ್ನು ವಜಾಗೊಳಿಸಿದೆ.
ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆಗೆ ಅವಕಾಶ
ನ್ಯಾಯಾಲಯ ಮತ್ತೊಂದು ಮಹತ್ವದ ಸೂಚನೆ ನೀಡಿದ್ದು, ಸರ್ಕಾರ ಮಾನ್ಯತೆ ನೀಡಿದ ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ನಡೆಸಬೇಕು ಎಂದು ಹೇಳಿದೆ.
ಅಕ್ರಮ ಗೋವಧೆ ತಡೆಯಲು ಅಧಿಕಾರಿಗಳಿಗೆ ಪರಿಶೀಲನೆ ನಡೆಸುವ ಅಧಿಕಾರವೂ ನೀಡಲಾಗಿದೆ.
ಧಾರ್ಮಿಕ ಹಕ್ಕುಗಳ ಪ್ರಶ್ನೆ ಎತ್ತಿದ ಟಿಎಂಸಿ ಶಾಸಕ
ಈ ಪ್ರಕರಣದಲ್ಲಿ ಟಿಎಂಸಿ ಶಾಸಕ ಅಖ್ರುಝಮಾನ್, 'ಬಕ್ರೀದ್ ವೇಳೆ ದೊಡ್ಡ ಪ್ರಾಣಿಗಳ ಬಲಿ ಅನೇಕ ಮುಸ್ಲಿಮರ ಧಾರ್ಮಿಕ ಆಚರಣೆಯ ಭಾಗ. ಸರ್ಕಾರ ಸೆಕ್ಷನ್ 12 ಅಡಿಯಲ್ಲಿ ವಿನಾಯಿತಿ ನೀಡಿಲ್ಲ' ಎಂದು ವಾದಿಸಿದ್ದರು. ಅವರ ಪ್ರಕಾರ, ಬಡ ಮುಸ್ಲಿಂ ಕುಟುಂಬಗಳಿಗೆ ಎಮ್ಮೆ ಅಥವಾ ಎತ್ತು ಬಲಿ ನೀಡುವುದು ಧಾರ್ಮಿಕ ಹಾಗೂ ಆರ್ಥಿಕವಾಗಿ ಅನುಕೂಲಕರ ಮಾರ್ಗವಾಗಿದೆ.
ರಾಜಕೀಯ ವಲಯದಲ್ಲಿ ಭಾರೀ ಚರ್ಚೆ
ಈ ತೀರ್ಪಿನ ನಂತರ ಪಶ್ಚಿಮ ಬಂಗಾಳದಲ್ಲಿ ಧಾರ್ಮಿಕ ಆಚರಣೆ, ಕಾನೂನು ಮತ್ತು ರಾಜಕೀಯದ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ. ವಿಶೇಷವಾಗಿ ಸುವೇಂದು ಅಧಿಕಾರಿ ಪ್ರಭಾವ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ