ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!

Suvarna News   | Asianet News
Published : Jan 04, 2020, 03:12 PM ISTUpdated : Jan 04, 2020, 03:17 PM IST
ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!

ಸಾರಾಂಶ

ದೇಶಾದ್ಯಂತ ಸಿಎಎ ಪರ-ವಿರೋಧ ಚರ್ಚೆ| ನೆರೆ ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ| ಧಾರ್ಮಿಕ ದೌರ್ಜನ್ಯಕ್ಕೊಳಗಾಗಿರುವ ಸಹೋದರರಿಗೆ ಭಾರತದ ಸಹಾಯ ಹಸ್ತ| ಸಂಸದ ರಾಜೀವ್ ಚಂದ್ರಶೇಖರ್ ತಿರುವಿದ ಇತಿಹಾಸದ ಪುಟಗಳು| 'ಸಿಎಎ ಜಾರಿಗೂ ವಿಭಜನೆಯ ಕರಳ ದಿನಗಳಿಗೂ ಇದೆ ಸಂಬಂಧ'|  ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆಮ್ಮದಿಯ ಜೀವನ| ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಮಾನ ಅಧಿಕಾರ ನೀಡಿದ ಜಾತ್ಯಾತೀತ ಭಾರತ| ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಪಾಕ್‌ನ ಆಡಳಿತ ನೀತಿ| 'ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ'| ಸಿಎಎ ಮೂಲಕ ನಮ್ಮ ಸಹೋದರರನ್ನು ಬರಮಾಡಿಕೊಳ್ಳೋಣ ಎಂದ ರಾಜೀವ್ ಚಂದ್ರಶೇಖರ್|

ರಾಜೀವ್ ಚಂದ್ರಶೇಖರ್-ರಾಜ್ಯಸಭಾ ಸಂಸದ

ಬೆಂಗಳೂರು(ಜ.04): ಕೇಂದ್ರ ಸರ್ಕಾರ  ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ದೇಶದಲ್ಲಿ ಪರ-ವಿರೋಧದ ಚರ್ಚೆಗೆ ವೇದಿಕೆ ಕಲ್ಪಿಸಿದೆ. 
ಏಳು ದಶಕಕ್ಕೂ ಹೆಚ್ಚುಕಾಲ ಪಾಕಿಸ್ತಾನದ ರಾಕ್ಷಸಿ ಆಡಳಿತಕ್ಕೆ ಸಿಕ್ಕು ನಲುಗಿರುವ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ಈ ಕಾಯ್ದೆಯ ಮೂಲಕ ಭಾರತ ನೆರಳಾಗಲಿದೆ. ಅಲ್ಲದೇ ನೆರೆಯ ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲೂ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿರುವ ಅಲ್ಪಸಂಖ್ಯಾತರಿಗೆ ಸಿಎಎ ವರದಾನವಾಗಿ ಪರಿಣಮಿಸಲಿದೆ.

ಆದರೆ ಸಿಎಎ ದೇಶದಲ್ಲಿ ಧಾರ್ಮಿಕ ಸಾಮರಸ್ಯ ಕೆಡಿಸಲಿದ್ದು, ಒಂದು ದೀರ್ಘ ಕೋಮು ದಳ್ಳುರಿಗೆ ಈ ಕಾಯ್ದೆ ಮುನ್ನುಡಿ ಬರೆಯಲಿದೆ ಎಂದು ಕಾಯ್ದೆಯ ವಿರೋಧಿಗಳು ಆರೋಪಿಸುತ್ತಿದ್ದಾರೆ. ಇದೇ ಕಾರಣಕ್ಕೆ ದೇಶಾದ್ಯಂತ ವಿಪಕ್ಷಗಳು ದೇಶಾದ್ಯಂತ ಸಂಘಟಿತ ಹೋರಾಟ ನಡೆಸಿವೆ.

ಈ ಮಧ್ಯೆ ಸಿಎಎ ಕಾಯ್ದೆ ಹಾಗೂ ಅದರ ಜಾರಿಯ ಹಿಂದಿನ ಕಾರಣಗಳ ಕುರಿತು ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನ ಪ್ರಕಟಿಸಿದ್ದು, ಇದುವರೆಗೂ ಯಾರೂ ತೆರಯದ ಇತಿಹಾಸದ ಪುಟಗಳನ್ನು ಜನರ ಮುಂದೆ ತೆರೆದಿಟ್ಟಿದ್ದಾರೆ.

ಪೌರತ್ವ ಕಾಯ್ದೆ: ರಾಜೀವ್ ಚಂದ್ರಶೇಖರ್ ಕಣ್ತೆರೆಸುವ ವಿಶ್ಲೇಷಣೆ

ಪ್ರಮುಖವಾಗಿ ಸಿಎಎ ವಿಭಜನೆ ಎಂಬ ಕರಾಳ ಇತಿಹಾಸದ ಕೂಸು ಎನ್ನುತ್ತಾರೆ ರಾಜೀವ್ ಚಂದ್ರಶೇಖರ್. ಧರ್ಮದ ಆಧಾರದ ಮೇಲೆ ಭಾರತದ ವಿಶಾಲ ಭೂಭಾಗವನ್ನು ಕತ್ತರಿಸಿದ ಪಾಕಿಸ್ತಾನ ರಚಿಸಿಕೊಂಡ ಕೆಲವು ಧರ್ಮಾಂಧರು, ತಮ್ಮ ನೆಲದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ನಡೆಸಿದ ದೌರ್ಜನ್ಯಕ್ಕೆ ಉತ್ತರವಾಗಿ ಸಿಎಎ ಹೊರಹೊಮ್ಮಿದೆ ಎಂಬುದು ರಾಜೀವ್ ಚಂದ್ರಶೇಖರ್ ವಾದವಾಗಿದೆ.

ಇತಿಹಾಸದ ಪುಟ ತಿರುವಿದ ಆರ್‌ಸಿ:

'ವಿಭಜನೆಯ ಗಾಯಗಳು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಾಣುತ್ತಿದ್ದ 1950ರ ದಶಕದಲ್ಲಿ ಎರಡೂ ದೇಶಗಳಲ್ಲಿರುವ ಅಲ್ಪಸಂಖ್ಯಾತರ ಕುರಿತು ರಾಜಕೀಯ ವಲಯದಲ್ಲಿ ಆತಂಕ ಮನೆ ಮಾಡಿತ್ತು. ಎರಡೂ ದೇಶಗಳಲ್ಲಿರುವ ಧಾರ್ಮಿಕ ಬಹುಸಂಖ್ಯಾತರು ಅಲ್ಪಸಂಖ್ಯಾತರ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯಬಹುದು ಎಂಬುದು ಸಾಮಾನ್ಯ ಊಹೆಯಾಗಿತ್ತು.

ಆದರೆ ಜಾತ್ಯಾತೀತ ತಳಹದಿ ಮೇಲೆ ಅಸ್ತಿತ್ವಕ್ಕೆ ಬಂದಿದ್ದ ಭಾರತ, ಅಲ್ಪಸಂಖ್ಯಾತರಿಗೆ ಸಮಾನ ಅಧಿಕಾರ ನೀಡಿದ್ದಲ್ಲದೇ, ಅವರ ಶೇಯೋಭಿವೃದ್ಧಿಗಾಗಿ ತನ್ನನ್ನು ಸಮರ್ಪಿಸಿಕೊಂಡಿತು.

ಇದಕ್ಕೆ ವಿರುದ್ಧವಾಗಿ ಧರ್ಮದ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ಪಾಕಿಸ್ತಾನ, ಧರ್ಮದ ಅಮಲಿನಲ್ಲಿ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಶೋಷಣೆ ಮಾಡಲು ಆರಂಭಿಸಿತು.

ಈ ಹಿನ್ನೆಲೆಯಲ್ಲಿ 1950ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ-ಪಾಕಿಸ್ತಾನ ಪ್ರಧಾನಿ ಲಿಯಾಖತ್ ಅಲಿ ಖಾನ್ ನೇತೃತ್ವದಲ್ಲಿ ಎರಡೂ ದೇಶಗಳ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದು ನೆಹರೂ-ಲಿಯಾಖತ್ ಒಪ್ಪಂದ ಎಂದೇ ಖ್ಯಾತಿಗಳಿಸಿದೆ.

ಒಪ್ಪಂದದಂತೆ ಭಾರತ ತನ್ನ ಅಲ್ಪಸಂಖ್ಯಾತರಿಗೆ ಎಲ್ಲ ಕ್ಷೇತ್ರಗಳಲ್ಲಿ ಸಮಾನ ಅಧಿಕಾರ ನೀಡಿ ಅವರ ಉನ್ನತಿಗಾಗಿ ಶ್ರಮಿಸಿತು. ಆದರೆ ಒಪ್ಪಂದದ ಹೊರತಾಗಿಯೂ ಪಾಕಿಸ್ತಾನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ನಡೆಸುವುದನ್ನು ತನ್ನ ಆಡಳಿತ ನೀತಿಯನ್ನಾಗಿ ಮುಂದುವರೆಸಿತು.

(ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಲೇಖಕ ಜಾಫ್ರೆಲಾಟ್ ಅವರ ಪಾಕಿಸ್ತಾನದ ಕುರಿತಾದ ಪುಸ್ತಕವನ್ನು ಓದಬಹುದು)

ಅದರಂತೆ 20ನೇ ಶತಮಾನದುದ್ದಕ್ಕೂಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಭಾರತ ಪೌರತ್ವ ನೀಡಿತು. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕೂಡ ಭಾರತದ ಪೌರತ್ವ ಪಡೆಯಲು ಸಾಧ್ಯವಾಯಿತು.

ಅಸಲಿಗೆ ನೆಹರೂ-ಲಿಯಾಖತ್ ಒಪ್ಪಂದ ನಿರಾಶ್ರಿತರ ಸಮಸ್ಯೆ ಬಗೆಹರಿಸುವಲ್ಲಿ ಯಾವುದೇ ಸಹಾಯ ಮಾಡಿಲ್ಲ. ಭಾರತ ಯಾವುದೇ ಸಮುದಾಯದಿಂದ ಬಂದ ರಾಜಕೀಯ ನಿರಾಶ್ರಿತರಿಗೆ ಪೌರತ್ವ ನೀಡುವ ಪ್ರಕ್ರಿಯೆ ಪರಿಣಾಮವಾಗಿಯೇ ಇಂದು ಅನೇಕರು ವಿಶಾಲ ಭಾರತದ ಭಾಗವಾಗಿದ್ದಾರೆ.

ಈ ಏಳು ದಶಕದಲ್ಲಿ ಭಾರತದಲ್ಲಿ ಜಾತ್ಯಾತೀತ ಸಂವಿಧಾನ ಹಾಗೂ ಇದನ್ನು ಅನುಸರಿಸುವ ಸರ್ಕಾರಗಳು ಅಸ್ತಿತ್ವದಲ್ಲಿ ಬಂದವು. ಆದರೆ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ, ಸೇನಾಡಳಿತ, ಸರ್ವಾಧಿಕಾರ ಹೀಗೆ ಎಲ್ಲ ಬಗೆಯ ಆಡಳಿತವನ್ನು ನಾವು ನೋಡಬಹುದು.

ಇದೇ ಕಾರಣಕ್ಕೆ ಭಾರತದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಸುರಕ್ಷಿತ ಭಾವನೆ ಮನೆ ಮಾಡಿದ್ದಾರೆ, ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರಲ್ಲಿ ಯಾವಾಗ ಮನೆ (ದೇಶ) ಬಿಟ್ಟುಓಡಿ ಬಂದೆವೋ ಎಂಬ ಭಾವನೆ ಇದೆ.

CAB: ಈಶಾನ್ಯಕ್ಕೆ ರಾ‘ಜೀವ’ ತುಂಬಿದ ಚಂದ್ರಶೇಖರ್!

ಜಗತ್ತು ನಂಬಿದಂತೆ ಪಾಕಿಸ್ತಾನದಲ್ಲಿ ಸದ್ಯ ಜನರಿಂದ ಚುನಾಯಿತರಾದ ಪ್ರಜಾಪ್ರಭುತ್ವ ಸರ್ಕಾರವಿದೆ. ಆದರೆ ನಿನ್ನೆ(ಜ.03) ಗುರುನಾನಕ್ ಸಾಹೀಬ್ ಗುರುದ್ವಾರದ ಮುಂದೆ ಅಲ್ಲಿನ ಧಾರ್ಮಿಕ ಬಹುಸಂಖ್ಯಾತರು ನಡೆಸಿದ ಪೈಶಾಚಿಕ ಕೃತ್ಯ ಅಲ್ಲಿನ ನೈಜ ಸ್ಥಿತಿಯನ್ನು ಮತ್ತೊಮ್ಮೆ ಹೊರಗಡೆವಿದೆ.

ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ನೆಮ್ಮದಿಯಿಂದ ಬಾಳಲು ಸಾಧ್ಯವಿಲ್ಲ ಎಂಬುದು ಸೂರ್ಯ ಚಂದ್ರರಷ್ಟೇ  ಸತ್ಯ. ಇದೇ ಕಾರಣಕ್ಕೆ ಮೋದಿ ಸರ್ಕಾರದ ಸಿಎಎ ಮೂಲಕ ನಮ್ಮ ಸಹೋದರ ಸಹೋದರಿಯರಿಗೆ ಆಧ್ರಯ ಕಲ್ಪಿಸಲು ಮುಂದಾಗಿದೆ. ಇದು ಭಾರತದ ಕರ್ತವ್ಯ ಎಂಬ ಪ್ರಧಾನಿ ಮೋದಿ ಮಾತು ಸತ್ಯ'.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು