ಪೌರತ್ವ ವಿರೋಧಿಗಳನ್ನು ನಾಯಿ ರೀತಿ ಹೊಡೆದು ಹಾಕಿದ್ದೇವೆ!

Suvarna News   | Asianet News
Published : Jan 14, 2020, 07:34 AM IST
ಪೌರತ್ವ ವಿರೋಧಿಗಳನ್ನು ನಾಯಿ ರೀತಿ ಹೊಡೆದು ಹಾಕಿದ್ದೇವೆ!

ಸಾರಾಂಶ

ಸಿಎಎ ವಿರೋಧಿ ಹೋರಾಟದಲ್ಲಿ ಬಿಜೆಪಿ ಅಧಿಕಾರಲ್ಲಿ ಇರುವ ರಾಜ್ಯದಲ್ಲಿ ನಾಯಿಗಳಂತೆ ಹೊಡೆದು ಹಾಕಿದದ್ದೇವೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷರ ಹೇಳಿಕೆ ಇದೀಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. 

ಕೋಲ್ಕತಾ [ಜ.14]:  ‘ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಿದವರನ್ನು ನಮ್ಮ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕ, ಉತ್ತರಪ್ರದೇಶ ಹಾಗೂ ಅಸ್ಸಾಂನಲ್ಲಿ ಗುಂಡಿಕ್ಕಿ ನಾಯಿಗಳಂತೆ ಹೊಡೆದು ಹಾಕಲಾಗಿದೆ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು ಬಡಾಯಿ ಕೊಚ್ಚಿಕೊಂಡಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ವತಃ ಬಿಜೆಪಿ ನಾಯಕರೂ ಆಗಿರುವ ಕೇಂದ್ರ ಸಚಿವ ಬಾಬುಲ್‌ ಸುಪ್ರಿಯೋ ಅವರು ಘೋಷ್‌ ಹೇಳಿಕೆ ಬೇಜವಾಬ್ದಾರಿತನದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಮನಸ್ಥಿತಿ ಹಾಗೂ ಅಜೆಂಡಾವನ್ನು ಘೋಷ್‌ ಅವರು ತಮ್ಮ ಮಾತುಗಳಲ್ಲಿ ತಿಳಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಕಿಡಿಕಾರಿದ್ದರೆ, ಸರ್ವಾಧಿಕಾರಿ ರಾಜ್ಯವನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಡಪಕ್ಷಗಳು ಹರಿಹಾಯ್ದಿವೆ. ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದಲ್ಲಿ ಹಿಂಸೆ ಸೃಷ್ಟಿಸಿದ ಎಬಿವಿಪಿ/ಬಿಜೆಪಿ ಕಾರ್ಯಕರ್ತರನ್ನೇಕೆ ನಾಯಿಗಳಿಗೆ ಗುಂಡಿಡುವ ರೀತಿಯಲ್ಲಿ ದೆಹಲಿ ಪೊಲೀಸರು ಕೊಲ್ಲಲಿಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ ನಾಯಕ ದಿನೇಶ್‌ ಗುಂಡೂರಾವ್‌ ಪ್ರಶ್ನೆ ಮಾಡಿದ್ದಾರೆ.

ಘೋಷ್‌ ‘ನಾಯಿ’ ಹೇಳಿಕೆ:  ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಭಾನುವಾರ ಸಾರ್ವಜನಿಕ ಸಭೆಯೊಂದನ್ನುದ್ದೇಶಿಸಿ ಮಾತನಾಡಿದ ದಿಲೀಪ್‌ ಘೋಷ್‌, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್‌ನಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟಮಾಡುತ್ತಿದ್ದರೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗೋಲಿಬಾರ್‌ ಮಾಡಿಸಲಿಲ್ಲ. ಲಾಠಿ ಚಾಜ್‌ರ್‍ ಕೂಡ ಮಾಡಿಸಲಿಲ್ಲ. ಪ್ರತಿಭಟನೆ ಮಾಡುತ್ತಿದ್ದವರೆಲ್ಲಾ ದೀದಿ ಅವರ ಮತದಾರರಾದ ಕಾರಣ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಅದೇ ಉತ್ತರಪ್ರದೇಶ, ಕರ್ನಾಟಕ ಹಾಗೂ ಅಸ್ಸಾಂನಲ್ಲಿನ ನಮ್ಮ ಸರ್ಕಾರಗಳು ಈ ವ್ಯಕ್ತಿಗಳನ್ನು ಗುಂಡಿಟ್ಟು ನಾಯಿಗಳಂತೆ ಹತ್ಯೆ ಮಾಡಿದವು ಎಂದು ಅಬ್ಬರಿಸಿದರು.

ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಗುಂಡು ಹಾರಿಸುವ ಮೂಲಕ ಉತ್ತರಪ್ರದೇಶ, ಅಸ್ಸಾಂ ಹಾಗೂ ಕರ್ನಾಟಕ ಸರ್ಕಾರಗಳು ಒಳ್ಳೆಯ ಕೆಲಸವನ್ನೇ ಮಾಡಿವೆ. ಬೆಂಕಿ ಹಚ್ಚುವ ಹಾಗೂ ಧ್ವಂಸ ನಡೆಸುವವರನ್ನು ಇದೇ ರೀತಿ ಗುಂಡಿಟ್ಟು ಕೊಲ್ಲಬೇಕು ಎಂದು ಆಗ್ರಹಿಸಿದರು.

PK ಟ್ವೀಟ್ ಬೆನ್ನಲ್ಲೇ ಬಿಹಾರ ಸಿಎಂ ಮಹತ್ವದ ಘೋಷಣೆ: ಬಿಜೆಪಿಗೆ ಆಘಾತ!...

‘ನಾಶಪಡಿಸಿದ ಸಾರ್ವಜನಿಕ ಆಸ್ತಿ ಯಾರಿಗೆ ಸೇರಿದ್ದು ಎಂದು ಅವರೆಲ್ಲಾ ಭಾವಿಸಿದ್ದಾರೆ? ಇದೇನು ಅವರ ಅಪ್ಪನದ್ದಾ? ಸಾರ್ವಜನಿಕ ಆಸ್ತಿ ತೆರಿಗೆದಾರರಿಗೆ ಸೇರಿದ್ದು... ಅವರೆಲ್ಲಾ ಇಲ್ಲಿಗೆ ಬರುತ್ತಾರೆ. ನಮ್ಮ ಆಹಾರ ತಿನ್ನುತ್ತಾರೆ. ಇಲ್ಲೇ ವಾಸಿಸುತ್ತಾರೆ. ಸೌಲಭ್ಯಗಳನ್ನು ಅನುಭವಿಸುತ್ತಾರೆ. ದೇಶದ ಆಸ್ತಿಯನ್ನು ನಾಶಪಡಿಸುತ್ತಾರೆ. ಇದೆಲ್ಲಾ ಅವರ ಜಾಗವೇನು? ನಿಮ್ಮನ್ನೆಲ್ಲಾ ಲಾಠಿಯಿಂದ ಹೊಡೆಯುತ್ತೇವೆ. ಗುಂಡು ಹಾರಿಸುತ್ತೇವೆ. ಜೈಲಿಗೆ ತಳ್ಳುತ್ತೇವೆ’ ಎಂದೆಲ್ಲಾ ಹರಿಹಾಯ್ದರು.

ದೇಶದಲ್ಲಿ 2 ಕೋಟಿ ಮುಸ್ಲಿಂ ಒಳನುಸುಳುಕೋರರು ಇದ್ದಾರೆ. ಆ ಪೈಕಿ ಬರೋಬ್ಬರಿ 1 ಕೋಟಿ ಮಂದಿ ಪಶ್ಚಿಮ ಬಂಗಾಳದಲ್ಲೇ ಇದ್ದಾರೆ. ಅವರನ್ನು ರಕ್ಷಿಸಲು ಮಮತಾ ಬ್ಯಾನರ್ಜಿ ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲಾ ಅವರ ಮತದಾರರಾದ ಕಾರಣ ಮಮತಾ ಅವರು ಸಾರ್ವಜನಿಕ ಆಸ್ತಿ ಪಾಸ್ತಿ ನಾಶವಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.

ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಡಿ.19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪ ತಾಳಿತ್ತು. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಗೋಲಿಬಾರ್‌ ಮಾಡಿದ್ದರು. ಆ ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು. ಇದೇ ವೇಳೆ ಉತ್ತರಪ್ರದೇಶದಲ್ಲಿ ಗೋಲಿಬಾರ್‌ಗೆ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್