
ನವದೆಹಲಿ: ಜಿ20 ಶೃಂಗಕ್ಕಾಗಿ ದೆಹಲಿಗೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತನಗಿಂತ ಹಿರಿಯರಾದ ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಅವರ ಬಳಿ ಮಂಡಿಯೂರಿ ನಿಂತು ಮಾತನಾಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಸಂಸ್ಕಾರ ಹಾಗೂ ವಿನಮ್ರತೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾನುವಾರ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ರಿಷಿ ಮಾತುಕತೆ ನಡೆಸಿದರು. ಭಾನುವಾರ ಬೆಳಗ್ಗೆ ಎಲ್ಲಾ ಜಾಗತಿಕ ನಾಯಕರು ರಾಜ್ಘಾಟ್ನಲ್ಲಿರುವ ಮಹಾತ್ಮಾ ಗಾಂಧೀಜಿ ಅವರ ಸಮಾಧಿ ಸ್ಥಳಕ್ಕೆ ಪುಷ್ಪ ನಮನ ಸಲ್ಲಿಸಲು ತೆರಳಿದ್ದರು. ಈ ವೇಳೆ ರಾಜ್ಘಾಟ್ ಆವರಣದಲ್ಲಿ ಹಸೀನಾ ಅವರು ಕುರ್ಚಿಯಲ್ಲಿ ಕುಳಿತಿದ್ದನ್ನು ಗಮನಿಸಿದ ರಿಷಿ ಸುನಕ್, ಅವರಿದ್ದ ಸ್ಥಳಕ್ಕೆ ತೆರಳಿ ಮಂಡಿಯೂರಿ ಕುಳಿತು ಬಾಂಗ್ಲಾ ಪ್ರಧಾನಿಯೊಂದಿಗೆ ಮಾತುಕತೆ ನಡೆಸಿದರು. ಹಿರಿಯ ನಾಯಕಿಯೊಂದಿಗೆ ರಿಷಿ ನಡೆದುಕೊಂಡ ರೀತಿಯ ಬಗ್ಗೆ ಜಾಲತಾಣದಲ್ಲಿ ಈಗ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಅಕ್ಷರಧಾಮ ದೇಗುಲಕ್ಕೆ ಸುನಕ್ ದಂಪತಿ ಭೇಟಿ, ಪ್ರಾರ್ಥನೆ
ಇದಕ್ಕೂ ಮೊದಲು ಜಿ20 ಶೃಂಗ ಸಭೆ ನಿಮಿತ್ತ ಭಾರತಕ್ಕೆ ಆಗಮಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ದಂಪತಿ ಭಾನುವಾರ ಮುಂಜಾನೆ ಇಲ್ಲಿನ ಅಕ್ಷರಧಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿದೇಶಿ ಗಣ್ಯರು ಬೆಳಗ್ಗೆ ರಾಜಘಾಟ್ಗೆ ಭೇಟಿ ನೀಡುವ ಮೊದಲು ಮಂದಿರಕ್ಕೆ ಭೇಟಿ ನೀಡಿದ ರಿಷಿ ದಂಪತಿ, ಸುಮಾರು ಒಂದು ತಾಸು ದೇಗುಲದಲ್ಲೇ ಇದ್ದು, ಪೂಜೆ ಸಲ್ಲಿಸಿ, ದೇಗುಲದ ವಾಸ್ತು ಶಿಲ್ಪವನ್ನು ಕಣ್ತುಂಬಿಕೊಂಡರು. ಇವರನ್ನು ದೇಗುಲದ ಆಡಳಿತ ಮಂಡಳಿ ಸ್ವಾಗತ ಮಾಡಿದರು. ಶ್ರೀ ಶ್ರೀ ಮಹಾಂತ ಸ್ವಾಮಿ ಮಹಾರಾಜ್ ಅವರು ರಿಷಿ ಸುನಕ್ ದಂಪತಿಗೆ ಆರ್ಶೀವಾದ ಮಾಡಿದರು. ಬಳಿಕ ರಿಷಿ ರಾಜಘಾಟ್ನತ್ತ ತೆರಳಿದ್ದರು.
ಭಾರತದ ಜಿ-20 ಅಧ್ಯಕ್ಷತೆಗೆ ವಿದೇಶಿ ಮಾಧ್ಯಮಗಳಿಂದಲೂ ಭಾರಿ ಮೆಚ್ಚುಗೆ : ಯಾವ ನಾಯಕರು ಏನಂದರು?
ಈ ಬಗ್ಗೆ ಮಾತನಾಡಿದ ರಿಷಿ ಸುನಕ್, ನನ್ನ ಭಾರತೀಯ ಬೇರುಗಳು ಮತ್ತು ಭಾರತದೊಂದಿಗಿನ ನನ್ನ ಸಂಪರ್ಕಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಹೆಮ್ಮೆಯ ಹಿಂದೂ. ಇದರರ್ಥ, ನಾನು ಯಾವಾಗಲೂ ಭಾರತ ಮತ್ತು ಭಾರತದ ಜನರೊಂದಿಗೆ ಸಂಪರ್ಕವನ್ನು ಹೊಂದಿರುತ್ತೇನೆ ಎಂದು ಹೇಳಿದ್ದಾರೆ.
ನಾನೊಬ್ಬ ಹೆಮ್ಮೆಯ ಹಿಂದು, ಮೋದಿ ಬಗ್ಗೆ ನನಗೆ ಅಪಾರ ಗೌರವವಿದೆ
ಇದಕ್ಕೂ ಮೊದಲು ಮಾತನಾಡಿದ ರಿಷಿ, ನಾನೊಬ್ಬ ಹೆಮ್ಮೆಯ ಹಿಂದು ಎಂದು ಹೇಳಿದ್ದರು. ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಆಗಮಿಸಿದ್ದ ಅವರು ಮಾಧ್ಯಮವೊಂದರ ಜೊತೆ ಮಾತನಾಡುವಾಗ ಈ ವಿಷಯ ತಿಳಿಸಿದರು. ನಾನೊಬ್ಬ ಹೆಮ್ಮೆಯ ಹಿಂದೂ ಆಗಿದ್ದೇನೆ. ನಾನು ಹಿಂದುವಾಗಿಯೇ ಬೆಳೆದಿದ್ದೇನೆ. ಭಾರತದಲ್ಲಿರುವ 2 ದಿನಗಳ ಅವಧಿಯಲ್ಲಿ ನಾನು ದೇವಸ್ಥಾನಕ್ಕೆ ಭೇಟಿ ನೀಡಲಿದ್ದೇನೆ ಎಂದಿದ್ದರು. ಇದೇ ವೇಳೆ ಲಂಡನ್ನಲ್ಲಿ ನಡೆಯುತ್ತಿರುವ ಖಲಿಸ್ತಾನಿ ಕೃತ್ಯಗಳನ್ನು ಖಂಡಿಸಿದ ಅವರು, ಭಾರತದ ನೆರವಿನೊಂದಿಗೆ ಖಲಿಸ್ತಾನಿ ಹಾವಳಿಯನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ