
ನವದೆಹಲಿ (ಫೆ.24): ಅಂಗಡಿ-ಮುಂಗಟ್ಟುಗಳ ಫಲಕಗಳ (Sign Boards on Shops) ಮೇಲೆ ಮರಾಠಿ (Marathi) ಇರಬೇಕು ಎಂಬ ಮಹಾರಾಷ್ಟ್ರ (Maharashtra) ಸರ್ಕಾರದ ನಿಯಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ (High Court) ತಿರಸ್ಕರಿಸಿದೆ. ಸರ್ಕಾರದ ಆದೇಶದಿಂದ ವಾಕ್ ಸ್ವಾತಂತ್ರ್ಯದಂಥ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಚಿಲ್ಲರೆ ವ್ಯಾಪಾರಿಗಳ ಸಂಘ ದಾವೆ ಹೂಡಿತ್ತು. ಇದನ್ನು ತಿರಸ್ಕರಿಸಿದ ಹೈಕೋರ್ಟ್ ಅರ್ಜಿದಾರರಿಗೆ 25 ಸಾವಿರ ರು. ದಂಡ ವಿಧಿಸಿದೆ.
‘ಸರ್ಕಾರವು, ಅಂಗಡಿಗಳ ಫಲಕ ಬರೆಯುವಾಗ ಇತರ ಭಾಷೆಗಳ ಜತೆಗೆ ಮರಾಠಿಯಲ್ಲೂ ಬರೆಯುವಂತೆ ಸೂಚಿಸಿದೆ. ಇತರ ಭಾಷೆಗಳಿಗೆ ನಿರ್ಬಂಧ ಹೇರಿದ್ದರೆ ಮೂಲಭೂತ ಹಕ್ಕಿನ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಇಲ್ಲಿ ಇತರ ಭಾಷೆಗಳಲ್ಲಿ ಫಲಕ ಬರೆಯದಂತೆ ಯಾವುದೇ ಆದೇಶ ಮಾಡಿಲ್ಲ. ಹೀಗಾಗಿ ಇಲ್ಲಿ ಮೂಲಭೂತ ಹಕ್ಕು ಉಲ್ಲಂಘನೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಪೀಠ ಹೇಳಿತು.
ಅಲ್ಲದೆ, ‘ಮರಾಠಿ ಮಹಾರಾಷ್ಟ್ರದ ಮಾತೃಭಾಷೆ. ಹೀಗಾಗಿ ಇತರ ಭಾಷೆಗಳಲ್ಲಿ ಎಷ್ಟುದಪ್ಪ ಅಕ್ಷರದಲ್ಲಿ ಫಲಕ ಬರೆದಿದ್ದೀರೋ ಅಷ್ಟೇ ದಪ್ಪ ಅಕ್ಷರದಲ್ಲಿ ಮರಾಠಿಯನ್ನೂ ಬಳಸುವಂತೆ ಸೂಚಿಸಿದೆ. ರಾಜ್ಯದ ಜನರಿಗೆ ಬೇರೆ ಭಾಷೆಗಳಿಗಿಂತ ಹೆಚ್ಚು ಸುಲಭವಾಗಿ ಮರಾಠಿ ಅರ್ಥವಾಗುತ್ತದೆ ಎಂಬ ಉದ್ದೇಶವು ಈ ಆದೇಶದ ಹಿಂದೆ ಇದೆ’ ಎಂದು ಕೋರ್ಟ್ ಹೇಳಿತು.
ಅಂದು ಗುಜರಿ ವ್ಯಾಪಾರಿ, ಇಂದು ಕೋಟ್ಯಾಧಿಪತಿ, ಹೀಗಿದೆ ನವಾಬ್ ಮಲಿಕ್ ರಾಜಕೀಯ ಪಯಣ!
ರೇಪ್ಗೆ ಹೊಸ ವಿಶ್ಲೇಷಣೆ ನೀಡಿದ್ದ ಹೈಕೋರ್ಟ್ ಜಡ್ಜ್ ರಾಜೀನಾಮೆ: ‘ಚರ್ಮದಿಂದ ಚರ್ಮಕ್ಕೆ ಸ್ಪರ್ಶವಾದರೆ ಮಾತ್ರ ಅದು ಲೈಂಗಿಕ ದೌರ್ಜನ್ಯ (Sexual Assault) ಎನ್ನಿಸಿಕೊಳ್ಳುತ್ತದೆ’ ಎಂಬ ವಿವಾದಾತ್ಮಕ ತೀರ್ಪು ನೀಡಿದ್ದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾ (Pushpa Ganediwala) ಫೆಬ್ರವರಿ 12 ರಂದು ಅವರ ಅಧಿಕಾರಾವಧಿ ಮುಗಿಯುವ ಎರಡು ದಿನಗಳ ಮೊದಲೇ ರಾಜೀನಾಮೆ ನೀಡಿದ್ದಾರೆ. ಪುಷ್ಪಾ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ಮಾಡುವ (Permanent Judge) ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ (Supreme Court) ಕೊಲಿಜಿಯಂ ಎರಡನೇ ಬಾರಿ ತಿರಸ್ಕರಿಸಿತ್ತು.
ಗನೇಡಿವಾಲಾ ಅವರನ್ನು ಬಾಂಬೆ ಹೈಕೋರ್ಟ್ ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕೊಲಿಜಿಯಂ, ಪುಷ್ಪಾ ಅವರ ವಿವಾದಾತ್ಮಕ ತೀರ್ಪುಗಳ ಬೆನ್ನಲ್ಲೇ ತನ್ನ ಶಿಫಾರಸನ್ನು ವಾಪಸ್ ಪಡೆದಿತ್ತು. ‘ನ್ಯಾ| ಪುಷ್ಪಾ ಅವರು ಇಂತಹ ಪ್ರಕರಣಗಳನ್ನು ಇನ್ನಷ್ಟು ಎದುರಿಸಬೇಕಾಗಿದೆ. ವಕೀಲರಾಗಿದ್ದಾಗ ಪ್ರಾಯಶಃ ಅವರು ಇಂತಹ ಪ್ರಕರಣಗಳನ್ನು ನಿರ್ವಹಿಸಿಲ್ಲ. ಹೀಗಾಗಿ ಅವರಿಗೆ ತರಬೇತಿ ಬೇಕಾಗಿದೆ ಎಂಬುದು ಕೊಲಿಜಿಯಂ ಅನಿಸಿಕೆಯಾಗಿದೆ’ ಎಂದು ಸುಪ್ರೀಂ ಕೋರ್ಟ್ ಮೂಲಗಳು ತಿಳಿಸಿವೆ ಎಂದು ವರದಿಯಾಗಿತ್ತು.
ವಿವಾದಕ್ಕೆ ಕಾರಣವಾಗಿದ್ದ ತೀರ್ಪು: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ನ್ಯಾ| ಎಸ್.ಎ. ಬೋಬ್ಡೆ ನೇತೃತ್ವದ ಕೊಲಿಜಿಯಂ, ನ್ಯಾ| ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್ನ ನಾಗಪುರದ ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡುವುದಕ್ಕೆ ಜ.20ರಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಆದರೆ, ಬಟ್ಟೆಯ ಮೇಲಿಂದ ಬಾಲಕಿಯ ಅಂಗಾಂಗ ಮುಟ್ಟುವುದು ಪೋಸ್ಕೋ ಕಾಯ್ದೆಯಡಿ (Pocso Act 2012) ಅಪರಾಧವಾಗುವುದಿಲ್ಲ. ಚರ್ಮ- ಚರ್ಮದ ನಡುವೆ ಸಂಪರ್ಕ ಏರ್ಪಟ್ಟಿರಬೇಕು ಎಂದು ಕಾಯ್ದೆಯ ಬಗ್ಗೆ ವ್ಯಾಖ್ಯಾನ ನೀಡಿ ಜ.19ರಂದು ಅವರು ಪ್ರಕರಣವೊಂದರಲ್ಲಿ ತೀರ್ಪು ನೀಡಿದ್ದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
Non-Congress Front : ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, KCR ಭೇಟಿ, ಮಾತುಕತೆ!
ಪುಷ್ಪಾ ತೀರ್ಪಿಗೆ ಸುಪ್ರೀಂ ತಡೆ: ಈ ನಡುವೆ, ಐದು ವರ್ಷದ ಬಾಲಕಿಯ ಕೈ ಹಿಡಿದು ಆಕೆಯಿಂದ 51 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಜಿಪ್ ಬಿಚ್ಚಿಸಿಕೊಂಡದ್ದು ಕೂಡ ಪೋಸ್ಕೋದಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿ, ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ್ದರು. ಇಂತಹ ತೀರ್ಪುಗಳು ಅಪಾಯಕಾರಿ ಇತಿಹಾಸ ಸೃಷ್ಟಿಸುತ್ತವೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದ ಹಿನ್ನೆಲೆಯಲ್ಲಿ ಜ.27ರಂದು ಪುಷ್ಪಾ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ