The Kashmir Files ಚಿತ್ರ ನೋಡಿ ವಾಪಸಾಗುವ ವೇಳೆ ಬಿಜೆಪಿ ಸಂಸದನ ಮೇಲೆ ಬಾಂಬ್ ದಾಳಿ!

By Suvarna NewsFirst Published Mar 20, 2022, 2:02 AM IST
Highlights
  • ಬಿಜೆಪಿ ಸಂಸದನ ವಾಹನದ ಮೇಲೆ ಕಚ್ಚಾ ಬಾಂಬ್ ದಾಳಿ
  • ಬಂಗಾಳದ ಏಮ್ಸ್ ರಸ್ತೆ ಬಳಿ ಘಟನೆ, ಬಿಜೆಪಿ ಆಕ್ರೋಶ
  • ಪಶ್ಚಿಮ ಬಂಗಾಳದಲ್ಲಿ ಸಂಸದನಿಗೆ ಸುರಕ್ಷತೆ ಇಲ್ಲ

ನವದೆಹಲಿ(ಮಾ.20): ಕಾಶ್ಮೀರಿ ಫೈಲ್ಸ್‌ ಸಿನಿಮಾ ನೋಡಿ ವಾಪಸಾಗುತ್ತಿದ್ದ ವೇಳೆ ಬಂಗಾಳ ಬಿಜೆಪಿ ಸಂಸದ ಜಗನ್ನಾಥ್‌ ಸರ್ಕಾರ್‌ ಅವರ ವಾಹನದ ಮೇಲೆ ದುಷ್ಕರ್ಮಿಗಳು ಕಚ್ಚಾ ಬಾಂಬ್‌ ದಾಳಿ ನಡೆಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದಿದೆ. ಇಲ್ಲಿನ ಏಮ್ಸ್‌ ರಸ್ತೆ ಸಮೀಪದ ಹರೀಂಘಟ ಪೊಲೀಸ್‌ ಠಾಣೆ ಬಳಿ ಘಟನೆ ನಡೆದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರುವ ಬಿಜೆಪಿ, ‘ತೃಣಮೂಲ ಕಾಂಗ್ರೆಸ್‌ ಆಡಳಿತದಲ್ಲಿ ಒಬ್ಬ ಸಂಸದನಿಗೂ ಸುರಕ್ಷತೆ ಇಲ್ಲ. ಇಲ್ಲಿ ಗೂಂಡಾಗಳು ಸ್ವತಂತ್ರವಾಗಿ ಓಡಾಡಿಕೊಂಡಿದ್ದಾರೆ. ಅವರಿಗೆ ಕಾನೂನಿನ ಭಯ ಇಲ್ಲ’ ಎಂದು ಕಿಡಿಕಾರಿದೆ.

ಕಾಶ್ಮೀರಿ ಪಂಡಿತರ ಹತ್ಯೆ: ಮರುತನಿಖೆ ಕೋರಿ ರಾಷ್ಟ್ರಪತಿಗೆ ಪತ್ರ
ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣವನ್ನು ಪುನಃ ತೆರೆಯಲು ವಿಶೇಷ ತನಿಖಾ ತಂಡವನ್ನು ರಚಿಸಿ ಘಟನೆಯ ಬಗ್ಗೆ ಮರು ತನಿಖೆ ಮಾಡಿಸುವಂತೆ ವಕೀಲರೊಬ್ಬರು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾರೆ. ಪಂಡಿತರ ಹತ್ಯೆ ಕುರಿತಾದ ‘ಕಾಶ್ಮೀರ್‌ ಫೈಲ್ಸ್‌’ ಚಿತ್ರ ಬಿಡುಗಡೆ ಬೆನ್ನಲ್ಲೇ ಪತ್ರ ಬರೆಯಲಾಗಿದೆ. ವಕೀಲ ಮತ್ತು ಸಾಮಾಜಿಕ ಹೋರಾಟಗಾರ ವಿನೀತ್‌ ಜಿಂದಾಲ್‌ ಅವರು ರಾಷ್ಟ್ರಪತಿಯವರಿಗೆ ಬರೆದ ಪತ್ರದಲ್ಲಿ, ‘1989-90ರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಹತ್ಯಾಕಾಂಡದ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಹಾಗೂ ಇಲ್ಲಿಯವರೆಗೂ ನಡೆದ ಪ್ರಕರಣದ ತನಿಖೆಯ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು’ ಎಂದು ಕೋರಿದ್ದಾರೆ.

Latest Videos

ಕಾಶ್ಮೀರ್ ಫೈಲ್ಸ್: ಚಿತ್ರ ನೋಡಿ ಕಂಬನಿ ಮಿಡಿದ ಅನುಪಮ್ ಖೇರ್ ತಾಯಿ !

ಕಾಶ್ಮೀರಿ ಫೈಲ್ಸ್‌ ಪ್ರತಿಯೊಬ್ಬ ಹಿಂದೂವು ನೋಡಬೇಕು
ಕಾಶ್ಮೀರದಲ್ಲಿ ಪಂಡಿತರ ಮಾರಣ ಹೋಮ ಮತ್ತು ಅವರನ್ನು ಅಲ್ಲಿಂದ ಪ್ರತ್ಯೇಕವಾದಿಗಳು ಸಾಮೂಹಿಕವಾಗಿ ಹೊರದಬ್ಬಿದ ಕಥಾವಸ್ತು ಹೊಂದಿರುವ ದಿ ಕಾಶ್ಮೀರ್‌ ಫೈಲ್ಸ್‌ ಚಲನಚಿತ್ರವನ್ನು ದೇಶದ ಪ್ರತಿಯೊಬ್ಬ ಹಿಂದೂವು ನೋಡಬೇಕು ಎಂದು ನಗರ ಬಿಜೆಪಿ ಟೌನ್‌ ಅಧ್ಯಕ್ಷ ಡಾ.ಸಿ.ಜಯರಾಜ್‌ ತಿಳಿಸಿದರು.

ನಾನು ಮದುವೆಯಾಗಿದ್ದು ಕಾಶ್ಮೀರಿ ಪಂಡಿತನನ್ನು, ಅವರ ನೋವು ನನಗೆ ಗೊತ್ತು- ಯಾಮಿ ಗೌತಮ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಹಾಗೂ ಹಿಂದುತ್ವದ ವಿಚಾರ ಬಂದಾಗ ದೇಶದ ಪ್ರತಿಯೊಬ್ಬ ಹಿಂದೂವು ಒಗ್ಗಟ್ಟಾಗಿ ಹೋರಾಟ ಮಾಡಬೇಕು. 90ರ ದಶಕದಲ್ಲಿ ಕಾಶ್ಮೀರದಲ್ಲಿ ನಮ್ಮ ಪಂಡಿತರಿಗೆ ರಾತ್ರೋರಾತ್ರಿ ಮನೆ ಬಿಟ್ಟು ಹೋಗಬೇಕೆಂದು ಒತ್ತಾಯ ಮಾಡಿ, ಜನ್ಮ ಭೂಮಿ ಬಿಟ್ಟು ಹೋಗದೆ ಬೇರೆ ದಾರಿ ಕಾಣದೆ ಕಾಶ್ಮೀರಿ ಪಂಡಿತರು ಕಂಗಾಲಾಗಿ ಆ ಸಮಯದಲ್ಲಿ ಅನುಭಿಸಿದ ಹೃದಯ ಕಲಕುವ ಸಾಕಷ್ಟುಘಟನೆಗಳು ಜರುಗಿದ್ದವು. ಈ ಎಲ್ಲಾ ಸತ್ಯ ಆಧಾರಿತ ಘಟನೆಗಳನ್ನು ಸಿನಿಮಾದಲ್ಲಿ ನಿರ್ದೆಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ ತಂಡ ಯಥಾವತ್ತಾಗಿ ಉಣಬಡಿಸಿದ್ದಾರೆ ಎಂದರು.

ಕಾಶ್ಮೀರಿ ಫೈಲ್ಸ್‌ ಉಚಿತ ಪ್ರದರ್ಶನ: ಬೋಪಯ್ಯ ಕೊಡುಗೆ
ಕೊಡಗಿಲ್ಲಿ ದಿ ಕಾಶ್ಮೀರಿ ಫೈಲ್ಸ್‌ ಸಿನಿಮಾವನ್ನು ವಿರಾಜರಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಎರಡು ದಿನಗಳ ಕಾಲ ಸುಂಟಿಕೊಪ್ಪದ ಗಣೇಶ್‌ ಥಿಯೇಟರ್‌ನಲ್ಲಿ ಜಿಲ್ಲೆಯ ಜನರಿಗೆ ಉಚಿತವಾಗಿ ಪ್ರದರ್ಶನ ನೀಡುವ ಯೋಜನೆ ಹಾಕಿಕೊಂಡಿದ್ದಾರೆ. ಮಂಗಳವಾರ ಹಾಗೂ ಬುಧವಾರ ದಿನಕ್ಕೆ ನಾಲ್ಕು ಪ್ರದರ್ಶನ (ಬೆಳಗ್ಗೆ 10, ಅಪರಾಹ್ನ 2, ಸಂಜೆ 5 ಹಾಗೂ 8 ಗಂಟೆಗೆ) ಇರುತ್ತದೆ. ಪ್ರತಿ ಪ್ರದರ್ಶನದ ಟಿಕೆಟ್‌ಗಳನ್ನು ಆಸಕ್ತರು ಸ್ಥಳದಲ್ಲಿಯೇ ಉಚಿತವಾಗಿ ಪಡೆದುಕೊಳ್ಳಬಹುದು.

ಕಾಶ್ಮೀರಿ ಫೈಲ್ಸ್‌’ ನೋಡಲು ಪೊಲೀಸರಿಗೆ ಮ.ಪ್ರ. ಸರ್ಕಾರ ರಜೆ!
ಕಾಶ್ಮೀರಿ ಪಂಡಿತರ ಕಥೆಯನ್ನು ಒಳಗೊಂಡ ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶನದ ‘ದ ಕಾಶ್ಮೀರಿ ಫೈಲ್ಸ್‌’ ಸಿನಿಮಾ ನೋಡಲು ಮಧ್ಯ ಪ್ರದೇಶ ಪೊಲೀಸರಿಗೆ ರಜೆ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಸೋಮವಾರ ಘೋಷಿಸಿದೆ. ಈ ಸಿನಿಮಾವನ್ನು ರಾಜ್ಯದಲ್ಲಿ ಈಗಾಗಲೇ ತೆರಿಗೆಮುಕ್ತಗೊಳಿಸಲಾಗಿದೆ.‘ಕಾಶ್ಮೀರಿ ಫೈಲ್ಸ್‌ ಸಿನಿಮಾವನ್ನು ನೋಡಲು ಪೊಲೀಸ್‌ ಸಿಬ್ಬಂದಿಗೆ ರಜೆ ನೀಡಲಾಗುವುದು. ಈ ಕುರಿತಾಗಿ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ’ ಎಂದು ಮಧ್ಯ ಪ್ರದೇಶ ಗೃಹ ಸಚಿವ ನರೋತ್ತಮ್‌ ಮಿಶ್ರಾ ಹೇಳಿದ್ದಾರೆ.

click me!