ರಾಗಾಗೆ ಮೋದಿ ಶಕ್ತಿಯ ಅಂದಾಜಿಲ್ಲ, ದಶಕದವರೆಗೆ ಬಿಜೆಪಿ ದರ್ಬಾರ್: ಪ್ರಶಾಂತ್ ಕಿಶೋರ್!

By Suvarna NewsFirst Published Oct 28, 2021, 12:30 PM IST
Highlights

* ಬಿಜೆಪಿ ಇತರ ಪಕ್ಷಗಳಿಗೇಕೆ ಕಠಿಣ ಸ್ಪರ್ಧೆ ಕೊಡುತ್ತಿದೆ?

* ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಬಿಚ್ಚಿಟ್ಟ ಸತ್ಯ

* ಇನ್ನೂ ಒಂದು ದಶಕ ಬಿಜೆಪಿ ದರ್ಬಾರ್ ಎಂದ ಪಿಕೆ

ಪಣಜಿ(ಅ.28): ಭಾರತೀಯ ಜನತಾ ಪಕ್ಷ (BJP) ಮುಂದಿನ ದಶಕಗಳವರೆಗೆ (Decade) ಭಾರತದ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಉಳಿಯಲಿದೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ (Prashant Kishor) ಹೇಳಿದ್ದಾರೆ. ಬಿಜೆಪಿಯು ಹಲವಾರು ದಶಕಗಳ ಕಾಲ ಹೋರಾಡಬೇಕಾಗುತ್ತದೆ ಎಂದು ಕಿಶೋರ್ ನಂಬಿದ್ದಾರೆ. ಕಿಶೋರ್ ಮಾತನಾಡಿ, 40 ವರ್ಷಗಳ ಹಿಂದೆ ಕಾಂಗ್ರೆಸ್ (Congress) ಹೇಗೆ ಅಧಿಕಾರದ ಕೇಂದ್ರವಾಗಿತ್ತು, ಅದೇ ರೀತಿ ಬಿಜೆಪಿ ಸೋತರೂ ಗೆದ್ದರೂ ಅಧಿಕಾರದ ಕೇಂದ್ರದಲ್ಲಿ ಉಳಿಯುತ್ತದೆ. ಒಮ್ಮೆ ರಾಷ್ಟ್ರಮಟ್ಟದಲ್ಲಿ ಶೇ.30ರಷ್ಟು ಮತ ಪಡೆದರೆ ರಾಜಕೀಯ ಚಿತ್ರಣದಿಂದ ಅಷ್ಟು ಬೇಗ ದೂರ ಸರಿಯಲು ಆಗುವುದಿಲ್ಲ ಎಂದಿದ್ದಾರೆ.

ಗೋವಾ ಮ್ಯೂಸಿಯಂನಲ್ಲಿ (Goa Musium) ಮಾತನಾಡಿದ ಪ್ರಶಾಂತ್ ಕಿಶೋರ್ "ಜನರು ಮೋದಿ (ಪ್ರಧಾನಿ ನರೇಂದ್ರ ಮೋದಿ) ಮೇಲೆ ಕೋಪಗೊಂಡಿದ್ದಾರೆ ಮತ್ತು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂಬ ಬಲೆಗೆ ಬೀಳಬೇಡಿ" ಎಂದಿದ್ದಾರೆ. ಜನರು ಮೋದಿಯನ್ನು ಅಧಿಕಾರದಿಂದ ಹೊರಹಾಕಬಹುದು ಆದರೆ ಬಿಜೆಪಿ ಎಲ್ಲಿಯೂ ಹೋಗುವುದಿಲ್ಲ. ಮುಂದಿನ ಹಲವಾರು ದಶಕಗಳವರೆಗೆ ನೀವು ಈ ಪಕ್ಷದ ವಿರುದ್ಧ ಹೋರಾಡಬೇಕಾಗುತ್ತದೆ ಎಂದಿದ್ದಾರೆ.

ಆಂಗ್ಲ ಪತ್ರಿಕೆ ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಕಿಶೋರ್ 'ಈ ವಿಷಯದಲ್ಲಿ ರಾಹುಲ್ ಗಾಂಧಿಯೂ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುಶಃ ಕೆಲವೇ ಸಮಯದಲ್ಲಿ ಜನರು ಅವರನ್ನು (ನರೇಂದ್ರ ಮೋದಿ) ಅಧಿಕಾರದಿಂದ ತೆಗೆದುಹಾಕುತ್ತಾರೆ ಎಂದು ಅವರು ಭಾವಿಸುತ್ತಾರೆ ಆದರೆ ಅದು ಆಗುವುದಿಲ್ಲ, ಅವರನ್ನು ಎದುರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ನೀವು ಮೋದಿ ಶಕ್ತಿ ಏನೆಂದು ಅರಿತುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ನೀವು ಅವರನ್ನು ಎದುರಿಸಲು ಮಾರ್ಗ ಕಂಡುಕೊಳ್ಳಲು ಸಾಧ್ಯವಿಲ್ಲ. ಅಧಿಕ ಮಂದಿ ಅವರ ಶಕ್ತಿ ಏನು ಎಂದು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುತ್ತಿಲ್ಲ. ಅವರನ್ನು ಜನಪ್ರಿಯಗೊಳಿಸುತ್ತಿರುವುದೇನು ಎಂದು ಅರ್ಥ ಮಾಡಿಕೊಳ್ಳುವವರೆಗೆ ನೀವು ಅವರನ್ನು ಎದುರಿಸುವುದು ಅಸಾಧ್ಯ ಎಂದಿದ್ದಾರೆ.

ಕಾಂಗ್ರೆಸ್ ನಾಯಕರಿಗೆ ತಪ್ಪು ತಿಳುವಳಿಕೆ!

ಅಲ್ಲದೇ 'ನೀವು ಹೋಗಿ ಯಾವುದೇ ಕಾಂಗ್ರೆಸ್ ನಾಯಕ ಅಥವಾ ಯಾವುದೇ ಪ್ರಾದೇಶಿಕ ನಾಯಕರೊಂದಿಗೆ ಮಾತನಾಡಿ, ಅವರು 'ಇದು ಕೇವಲ ಸಮಯದ ವಿಷಯ' ಎಂದು ಹೇಳುತ್ತಾರೆ. ಜನರು ಮೋದಿ ಮೇಲೆ ಕೋಪಗೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಬರುತ್ತದೆ ಮತ್ತು ಜನರು ಅವರನ್ನು ಅಧಿಕಾರದಿಂದ ಹೊರಹಾಕುತ್ತಾರೆ ಎಂದು ಹೇಳುತ್ತಾರೆ, ಆದರೆ ಇದು ಅಸಾಧ್ಯ ಎಂಬುವುದು ನನ್ನ ವಾದ ಎಂದು ಪಿಕೆ ಹೇಳಿದ್ದಾರೆ. 

ನಾವು ವೋಟರ್‌ ಬೇಸ್‌ ನೋಡಿದರೆ, ಮೂರನೇ ಒಂದು ಮತ್ತು ಮೂರನೇ ಎರಡರ ನಡುವೆ ಹೋರಾಟವಿದೆ. ಮೂರನೇ ಒಂದರಷ್ಟು ಜನರು ಮಾತ್ರ ಬಿಜೆಪಿಗೆ ಮತ ಹಾಕುತ್ತಿದ್ದಾರೆ ಅಥವಾ ಬಿಜೆಪಿಯನ್ನು ಬೆಂಬಲಿಸಲು ಬಯಸುತ್ತಿದ್ದಾರೆ. ಸಮಸ್ಯೆಯೆಂದರೆ ಮೂರನೇ ಎರಡರಷ್ಟು ಮತ ಚದುರಿ ಹೋಗದೆ ಅದು 10, 12 ಅಥವಾ 15 ರಾಜಕೀಯ ಪಕ್ಷಗಳಾಗಿ ವಿಭಜನೆಯಾಗಿದೆ ಮತ್ತು ಇದು ಮುಖ್ಯವಾಗಿ ಕಾಂಗ್ರೆಸ್ನ ಪತನಕ್ಕೆ ಕಾರಣವಾಗಿದೆ. 65ರಷ್ಟು ಮತ ಬೇಸ್ ಛಿದ್ರವಾಗಿದೆ. ಇದರಿಂದಾಗಿ ಸಾಕಷ್ಟು ಜನ ಮತ್ತು ಸಣ್ಣ ಪಕ್ಷಗಳು ಹುಟ್ಟಿಕೊಂಡಿವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 

ಪ್ರಶಾಂತ್‌ ಕಿಶೋರ್‌ ಜೊತೆಗೂಡಿ ಗೋವಾ ಪ್ರವೇಶಕ್ಕೆ ದೀದಿ ರಣತಂತ್ರ!

ಪಶ್ಚಿಮ ಬಂಗಾಳದ(West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಮುಂದಿನ ವರ್ಷ ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಜ್ಜಾಗುತ್ತಿದ್ದಾರೆ. ಗೋವಾದಲ್ಲಿ ರಾಜಕೀಯ ಅಸ್ತಿತ್ವ ಸ್ಥಾಪಿಸಲು ಮುಂದಾಗಿರುವ ಅವರು, ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌(Prashant Kishor) ಅವರ ಐ-ಪ್ಯಾಕ್‌ ಸಂಸ್ಥೆಯ ಜತೆ ಸದ್ಯದಲ್ಲೇ ಗೋವಾಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಬಂಗಾಳದಲ್ಲಿ ಪ್ರಚಂಡ ಬಹುಮತದೊಂದಿಗೆ ಬಿಜೆಪಿಯನ್ನು ಸೋಲಿಸಿದ ನಂತರ ಮಮತಾ(Mamata Baneerjee) ಇಡೀ ದೇಶಕ್ಕೆ ಟಿಎಂಸಿಯನ್ನು ವಿಸ್ತರಿಸುವ ಚಿಂತನೆಯಲ್ಲಿದ್ದಾರೆ. ಈಗಾಗಲೇ ತ್ರಿಪುರಾದಲ್ಲಿ ಅವರ ಪಕ್ಷ ನೆಲೆಯೂರುತ್ತಿದೆ. 2024ರ ಲೋಕಸಭೆ ಚುನಾವಣೆ ವೇಳೆಗೆ ದೇಶಾದ್ಯಂತ ತಮ್ಮ ಪಕ್ಷದ ಅಸ್ತಿತ್ವವಿರಬೇಕು ಎಂಬುದು ಅವರ ಯೋಚನೆ. ಅದಕ್ಕೂ ಮುನ್ನ 2022ರ ಫೆಬ್ರವರಿಯಲ್ಲಿ ಗೋವಾ(Goa) ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ರಾಜ್ಯದಲ್ಲಿ ಟಿಎಂಸಿ ಸಂಘಟನೆ ಆರಂಭಿಸಲು ಮಮತಾ ನಿರ್ಧರಿಸಿದ್ದಾರೆ. ಈಗಾಗಲೇ ಐ-ಪ್ಯಾಕ್‌ನ 200ಕ್ಕೂ ಹೆಚ್ಚು ಮಂದಿ ಗೋವಾದಲ್ಲಿ ಟಿಎಂಸಿಗಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ ಟಿಎಂಸಿಯ ಕೆಲ ಸಂಸದರು ಗೋವಾಕ್ಕೆ ತೆರಳಿ ಪಕ್ಷಕ್ಕಿರುವ ಸಾಧ್ಯತೆಗಳ ಪರಿಶೀಲನೆ ನಡೆಸಲಿದ್ದಾರೆ. ನಂತರ ಮಮತಾ ಬ್ಯಾನರ್ಜಿಯವರ ಅಳಿಯ ಅಭಿಷೇಕ್‌ ಬ್ಯಾನರ್ಜಿ(Abhishek Banerjee) ಗೋವಾಕ್ಕೆ ಭೇಟಿ ನೀಡಲಿದ್ದಾರೆ. ನಂತರ ಸ್ವತಃ ಮಮತಾ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.

40 ವಿಧಾನಸಭಾ ಕ್ಷೇತ್ರಗಳ ಪುಟ್ಟರಾಜ್ಯ ಗೋವಾದಲ್ಲಿ 2017ರ ಚುನಾವಣೆಯಲ್ಲಿ ಕಾಂಗ್ರೆಸ್‌ 17 ಹಾಗೂ ಬಿಜೆಪಿ 13 ಸೀಟು ಗೆದ್ದಿದ್ದವು. ಆದರೂ ಬಿಜೆಪಿ ಸರ್ಕಾರ ರಚಿಸಿತ್ತು. ಅಲ್ಲಿ ಕಾಂಗ್ರೆಸ್‌ ದುರ್ಬಲವಾಗಿದ್ದು, ಟಿಎಂಸಿ ತುಂಬಾ ದೊಡ್ಡ ಸಾಧನೆ ಮಾಡದಿದ್ದರೂ ಬಿಜೆಪಿಯನ್ನು ಸೋಲಿಸಲು ಸಾಧ್ಯವಿದೆ. ಈಗಾಗಲೇ ಆಮ್‌ ಆದ್ಮಿ ಪಕ್ಷ ಕೂಡ ಗೋವಾಕ್ಕೆ ಕಾಲಿಟ್ಟಿದೆ. ಆಪ್‌ನ ಅರವಿಂದ ಕೇಜ್ರಿವಾಲ್‌ ಜೊತೆ ಮಮತಾ ಸ್ನೇಹ ಹೊಂದಿದ್ದಾರೆ. ಹೀಗಾಗಿ ಮುಂದಿನ ವರ್ಷದ ಗೋವಾ ಚುನಾವಣೆ ಕುತೂಹಲ ಮೂಡಿಸಿದೆ.

click me!