
ದೇಶದಲ್ಲಿ ಹಲವು ರಾಜಕೀಯ ನಾಯಕರು ಅಶ್ಲೀಲ ವಿಡಿಯೋದಲ್ಲಿ ಸಿಕ್ಕಿಬೀಳುವುದು ಸಾಮಾನ್ಯವಾಗಿದೆ. ಇದೀಗ ಮತ್ತೊಬ್ಬ ಬಿಜೆಪಿ ನಾಯಕ ಮದುವೆ ಕಾರ್ಯಕ್ರಮವೊಂದರಲ್ಲಿ ನರ್ತಕಿಯೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದಿಂದ ಬಿಜೆಪಿ ನಾಯಕನನ್ನು ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯ ಹಿರಿಯ ಬಿಜೆಪಿ ನಾಯಕ ಬಬ್ಬನ್ ಸಿಂಗ್ ರಘುವಂಶಿ ಅವರಿಗೆ ಸಂಬಂಧಪಟ್ಟ ಅಶ್ಲೀಲ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆ ಪಕ್ಷದಿಂದ ತಕ್ಷಣದಿಂದಲೇ ಉಚ್ಚಾಟಿಸಲಾಗಿದೆ. ಈ ಕುರಿತು ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಕಚೇರಿ ಪ್ರಭಾರಿ ಗೋವಿಂದ ನಾರಾಯಣ ಶುಕ್ಲ ಅವರು ಅಧಿಕೃತ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ರಘುವಂಶಿಯವರ ವರ್ತನೆ ಪಕ್ಷದ ಶಿಸ್ತು ಹಾಗೂ ಮೌಲ್ಯಗಳ ವಿರುದ್ಧವಿದೆ ಎಂಬುದಾಗಿ ಉಲ್ಲೇಖಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಸುದ್ದಿಗಾರಿಕೆಯ ಮೂಲಗಳಿಂದ ಲಭ್ಯವಾದ ಮಾಹಿತಿ ಪ್ರಕಾರ, ವೈರಲ್ ಆಗಿರುವ ವಿಡಿಯೋದಲ್ಲಿ ಬಬ್ಬನ್ ಸಿಂಗ್ ರಘುವಂಶಿ ಅವರು ಮಹಿಳಾ ನೃತ್ಯಗಾರ್ತಿಯೊಂದಿಗೆ ಸಾರ್ವಜನಿಕ ಸ್ಥಳದಲ್ಲೇ ಅಸಭ್ಯ ವರ್ತನೆ ನಡೆಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ನಂತರ ತೀವ್ರ ವಿರೋಧ ಕಂಡುಬಂದಿದ್ದು, ಜನತೆಯಲ್ಲೂ ಅಸಮಾಧಾನ ಮೂಡಿದೆ. ಬಬ್ಬನ್ ಸಿಂಗ್ ರಘುವಂಶಿ ಮಹಿಳಾ ನರ್ತಕಿಯೊಂದಿಗೆ ಇರುವ ಅಶ್ಲೀಲ ವೀಡಿಯೊ ಇಂಟರ್ನೆಟ್ ಮಾಧ್ಯಮದಲ್ಲಿ ವೈರಲ್ ಬೆನ್ನಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರ ಗಮನಕ್ಕೆ ಬಂದಿದೆ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಶಿಸ್ತು ಪಾಲನಾ ಸಮಿತಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲಿಯೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗೋವಿಂದ ನಾರಾಯಣ್ ಶುಕ್ಲಾ ಅವರು ರಘುವಂಶಿ ಅವರನ್ನು ಪಕ್ಷದಿಂದ ಹೊರಹಾಕಿ ಆದೇಶ ಪತ್ರವನ್ನು ರವಾನಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿದ ಬಬ್ಬನ್ ಸಿಂಗ್, 'ಈ ಘಟನೆ 20 ದಿನಗಳ ಹಿಂದೆ ಬಿಹಾರದ ದುರ್ಗಿಪುರದಲ್ಲಿ ನಡೆದ ಮದುವೆ ಸಮಾರಂಭದ ವೇಳೆ ನಡೆದದ್ದು. ನಾನು ಯಾವುದೇ ತಪ್ಪು ಮಾಡಿಲ್ಲ. ಈ ವಿಡಿಯೋ ನನ್ನ ವಿರೋಧಿಗಳಿಗೆ ಸುಳ್ಳು ಪ್ರಚಾರ ಮಾಡಿಸಲು ಉಪಯೋಗವಾಗಿದೆ. 'ಇದು ನನ್ನ ಪ್ರತಿಷ್ಠೆಗೆ ಧಕ್ಕೆ ತರುವ ಉದ್ದೇಶಪೂರ್ವಕ ಪಿತೂರಿ. ಈ ವಿಡಿಯೋ ಕಟ್ಟುಕಥೆ. ಶಾಸಕ ಕೇತಕೀ ಸಿಂಗ್ ಅವರ ಕುಟುಂಬ ಸದಸ್ಯರು ಇದರ ಹಿಂದೆ ಇದ್ದಾರೆ' ಎಂದು ಹೇಳಿದರು.
ಕೇತಕಿ ಸಿಂಗ್ ಪ್ರತಿಕ್ರಿಯೆ:
ಶಾಸಕಿ ಕೇತಕಿ ಸಿಂಗ್ ಅವರು ಈ ಆರೋಪಗಳನ್ನು ತಳ್ಳಿ ಹಾಕುತ್ತಾ, 'ಅವರ ವಯಸ್ಸಿಗೆ ಸಂಬಂಧಿಸಿದ ಗೌರವವಿದೆ. ಆದರೆ ಜನತೆಯ ಮುಂದೆ ನಿಂತಿರುವವರಿಂದ ಜವಾಬ್ದಾರಿಯುತ ನಡೆ ನಿರೀಕ್ಷೆ ಮಾಡುತ್ತೇನೆ. ಈ ಪ್ರಕರಣದ ಜವಾಬ್ದಾರಿಯನ್ನು ತಪ್ಪುಮಾಡಿದವರೇ ತೆಗೆದುಕೊಳ್ಳಬೇಕು' ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿಯೂ ಹಲವು ಬಿಜೆಪಿ ನಾಯಕರ ಅಶ್ಲೀಲ ವಿಡಿಯೋ ವೈರಲ್:
ಈ ಹಿಂದೆ ಕರ್ನಾಟಕದಲ್ಲಿಯೂ ಹಲವು ಬಿಜೆಪಿ ನಾಯಕರ ಅಶ್ಲೀಲ ವಿಡಿಯೋಗಳು ವೈರಲ್ ಆಗಿದ್ದವು. ರಮೇಶ್ ಜಾರಕಿಹೊಳಿ, ಹರತಾಳು ಹಾಲಪ್ಪ, ರೇಣುಕಾಚಾರ್ಯ, ಡಿ.ವಿ. ಸದಾನಂದಗೌಡ ಅವರ ವಿಡಿಯೋಗಳು ವೈರಲ್ ಆಗಿದ್ದವು. ಕೆಲವು ಪ್ರಕರಣಕ್ಕೆ ಸಾಕ್ಷ್ಯ ಸಿಕ್ಕಿದರೆ, ಇನ್ನು ಕೆಲವು ಪ್ರಕರಣಗಳು ಸಾಕ್ಷಿಗಳ ಕೊರತೆಯಿಂದ ಹಾಗೂ ಮಾರ್ಫ್ ಮಾಡಿದ ವಿಡಿಯೋಗಳು ಆಗಿದ್ದರಿಂದ ತಹಬದಿಗೆ ಸರಿದುಹೋಗಿವೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ