
ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಡಿಜಿಟಲ್ ಮತ್ತು ಆನ್ಲೈನ್ ವಾರ್ರೂಮ್ ಅನ್ನು ಮುನ್ನಡೆಸಿದ್ದ ಅಮಿತ್ ಮಾಳವೀಯ ಯುಗಕ್ಕೆ ತೆರೆಬಿದ್ದಿದೆ. ಅವರ ಜಾಗಕ್ಕೆ ಛತ್ತೀಸ್ಗಢ ಮೂಲದ ಸೈಲೆಂಟ್ ತಂತ್ರಜ್ಞ, ಮಾಜಿ ರಸಾಯನಶಾಸ್ತ್ರ ಪ್ರಾಧ್ಯಾಪಕ ದೀಪಕ್ ಮಾಸ್ಕೆ ಅವರನ್ನು ರಾಷ್ಟ್ರೀಯ ಐಟಿ ಮತ್ತು ಸಾಮಾಜಿಕ ಮಾಧ್ಯಮ ಕೋಶದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಮೂಲಕ ಬಿಜೆಪಿ ಬೃಹತ್ ಬದಲಾವಣೆಗೆ ನಾಂದಿ ಹಾಡಿದೆ. ಇದು ಕೇವಲ ವ್ಯಕ್ತಿಯೊಬ್ಬರ ಬದಲಾವಣೆಯಲ್ಲ, ಬದಲಿಗೆ ಮುಂಬರುವ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆ ಚುನಾವಣೆಗಳನ್ನು ಎದುರಿಸಲು ಬಿಜೆಪಿ ತನ್ನ ಡಿಜಿಟಲ್ ತಂತ್ರಜ್ಞಾನದ ಸ್ವರೂಪವನ್ನೇ ಸಂಪೂರ್ಣವಾಗಿ 'ಅಪ್ಗ್ರೇಡ್' ಮಾಡಿಕೊಂಡಿರುವುದರ ಸ್ಪಷ್ಟ ಸೂಚನೆ.
ಈವರೆಗೆ ಬಿಜೆಪಿಯ ಐಟಿ ಸೆಲ್ ಅಂದರೆ ಸೋಶಿಯಲ್ ಮೀಡಿಯಾದಲ್ಲಿನ ಕೌಂಟರ್ ಅಟ್ಯಾಕ್, ಆಕ್ರಮಣಕಾರಿ ಟ್ವೀಟ್ಗಳು ಮತ್ತು ವೈರಲ್ ಟ್ರೆಂಡ್ಗಳಿಗೆ ಹೆಸರಾಗಿತ್ತು. ಆದರೆ, ನೂತನ ಮುಖ್ಯಸ್ಥ ದೀಪಕ್ ಮಾಸ್ಕೆ ಅವರ ಆಗಮನದೊಂದಿಗೆ ಈ ಶೈಲಿ ಕಂಪ್ಲೀಟ್ ಚೇಂಜ್ ಆಗಲಿದೆ. 1968ರಲ್ಲಿ ಜನಿಸಿದ, ರಸಾಯನಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿರುವ 58 ವರ್ಷದ ಮಾಸ್ಕೆ, ಕಾಲೇಜು ತರಗತಿಗಳಲ್ಲಿ ರಾಸಾಯನಿಕ ಸೂತ್ರಗಳನ್ನು ಬೋಧಿಸುತ್ತಿದ್ದ ಒಬ್ಬ ಮಾಜಿ ಪ್ರೊಫೆಸರ್. ಪ್ರಯೋಗಾಲಯದಲ್ಲಿ ರಾಸಾಯನಿಕಗಳ ಸರಿಪ್ರಮಾಣದ ಮಿಶ್ರಣ ಅತ್ಯಗತ್ಯವಾಗಿರುವಂತೆಯೇ, ಚುನಾವಣಾ ರಾಜಕೀಯದಲ್ಲೂ 'ಮತದಾರರ ದತ್ತಾಂಶ' (Electoral Data Analytics) ಎನ್ನುವ ವೈಜ್ಞಾನಿಕ ಲೆಕ್ಕಾಚಾರವೇ ತಮ್ಮ ಅಸಲಿ ಶಕ್ತಿ ಎಂಬುದನ್ನು ನಿರೂಪಿಸಿದವರು ದೀಪಕ್ ಮಾಸ್ಕೆ.
2009ರಿಂದ ಛತ್ತೀಸ್ಗಢ ಬಿಜೆಪಿ ಐಟಿ ಕೋಶ ಹಾಗೂ ರಾಜ್ಯ ಬಿಜೆಪಿಯ ವಕ್ತಾರರಾಗಿ ಕಾರ್ಯಾಚರಿಸಿರುವ ಮಾಸ್ಕೆ, ಕೃಷಿ, ತೋಟಗಾರಿಕೆ ಮತ್ತು ಸಾರ್ವಜನಿಕ ವಲಯದ ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್ (EIL) ಹಾಗೂ ಛತ್ತೀಸ್ಗಢ ವೈದ್ಯಕೀಯ ಸೇವೆಗಳ ನಿಗಮದ (CGMSCL) ಅಧ್ಯಕ್ಷರಾಗಿಯೂ ಸಾರ್ವಜನಿಕ ಆಡಳಿತ ಅನುಭವ ಹೊಂದಿದ್ದಾರೆ. ಇವರ ನಿಜವಾದ ಪ್ಲಸ್ ಪಾಯಿಂಟ್ ಇರುವುದು ಸರ್ಕಾರಿ ಯೋಜನೆಗಳ 'ಫಲಾನುಭವಿಗಳ ಡೇಟಾ' (Beneficiary Data) ನಿರ್ವಹಣೆಯಲ್ಲಿ. ಉಚಿತ ಪಡಿತರ, ಆವಾಸ್ ಯೋಜನೆ, ಸಮ್ಮಾನ್ ನಿಧಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಲಾಭ ಪಡೆದ ಕುಟುಂಬಗಳು ಯಾವುವು? ಪ್ರತಿಯೊಂದು ಬೂತ್ ಮಟ್ಟದಲ್ಲಿರುವ ಮತದಾರರ ಮನಸ್ಥಿತಿ ಮತ್ತು ಜಾತಿ-ವಯಸ್ಸಿನ ಲೆಕ್ಕಾಚಾರವೇನು? ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ಆಯಾ ನಿರ್ದಿಷ್ಟ ಮತದಾರರ ಮೊಬೈಲ್ ಹಾಗೂ ಡಿಜಿಟಲ್ ಪರದೆಗೆ ತಕ್ಕಂತೆ ಪ್ರಚಾರ ತಂತ್ರಗಳನ್ನು ತಲುಪಿಸುವುದರಲ್ಲಿ ಮಾಸ್ಕೆ ರಾಷ್ಟ್ರೀಯ ಮಟ್ಟದ ಎಕ್ಸ್ಪರ್ಟ್.
ಬಿಜೆಪಿ ಈಗ ಕೇವಲ ಆನ್ಲೈನ್ನಲ್ಲಿ ಸೌಂಡ್ ಮಾಡುವುದು ಅಥವಾ ಸೋಶಿಯಲ್ ಮೀಡಿಯಾ ಜಗಳಕ್ಕೆ ಸೀಮಿತವಾಗದೆ, "ಲಾಭ ಪಡೆದ ಪ್ರತಿಯೊಬ್ಬ ಮತದಾರನನ್ನು ತಲುಪುವ ಡೇಟಾ ಗೇಮ್" ಗೆ ಕೈಹಾಕಿದೆ. ತೆರೆಮರೆಯಲ್ಲಿ ಸೈಲೆಂಟ್ ಆಗಿ ಡೇಟಾ ವಿಶ್ಲೇಷಿಸಿ ಚುನಾವಣೆ ಗೆಲ್ಲುವ ತಂತ್ರ ರೂಪಿಸುವ ದೀಪಕ್ ಮಾಸ್ಕೆ ಅವರ ಈ 'ಸ್ಟ್ರಾಟೆಜಿಕ್ ಪವರ್', ಬಿಜೆಪಿಯ ರಾಷ್ಟ್ರೀಯ ಡಿಜಿಟಲ್ ಕಾರ್ಯತಂತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಹೊಸ ಎಂಜಿನ್ ಆಗಿ ಕೆಲಸ ಮಾಡಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ