10 ದಿನಗಳಲ್ಲಿ ದೇಶದ 3 ಕೋಟಿಗೂ ಹೆಚ್ಚು ಕುಟುಂಬಗಳ ಸಂಪರ್ಕಕ್ಕಾಗಿ ದೇಶಾದ್ಯಂತ 1000 ಬೃಹತ್ ಕಾರ್ಯಾಗಾರ ಹಾಗೂ 250 ಪತ್ರಿಕಾಗೋಷ್ಠಿಗಳನ್ನು ಪೌರತ್ವ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಬಿಜೆಪಿಯಿಂದ ಹಮ್ಮಿಕೊಳ್ಳಲಾಗುತ್ತಿದೆ.
ನವದೆಹಲಿ (ಡಿ.22): ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಹೊತ್ತಿಕೊಂಡಿರುವ ಕಿಚ್ಚನ್ನು ನಂದಿಸಲು ಮುಂದಾಗಿರುವ ಬಿಜೆಪಿ, ಇದಕ್ಕಾಗಿ ರಾಷ್ಟ್ರದಾದ್ಯಂತ ಜನ ಸಂಪರ್ಕ ರ್ಯಾಲಿ ಆಯೋಜನೆಗೆ ನಿರ್ಧರಿಸಿದೆ. ಇನ್ನು 10 ದಿನಗಳಲ್ಲಿ ದೇಶದ 3 ಕೋಟಿಗೂ ಹೆಚ್ಚು ಕುಟುಂಬಗಳ ಸಂಪರ್ಕಕ್ಕಾಗಿ ದೇಶಾದ್ಯಂತ 1000 ಬೃಹತ್ ರ್ಯಾಲಿಗಳು ಹಾಗೂ 250 ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುತ್ತದೆ. ಈ ಮೂಲಕ ಪೌರತ್ವದ ಕಾಯ್ದೆ ಹಾಗೂ ಎನ್ಆರ್ಸಿ ಬಗ್ಗೆ ಜನ ಸಾಮಾನ್ಯರಲ್ಲಿ ಪ್ರತಿಪಕ್ಷಗಳು ಹರಡಿರುವ ಸುಳ್ಳುಗಳನ್ನು ಬಯಲು ಮಾಡುತ್ತೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಗುಡುಗಿದ್ದಾರೆ.
ಪೌರತ್ವ ಕಾಯ್ದೆಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆಯಾಗುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲು ಬಿಜೆಪಿ ಕಾರ್ಯತಂತ್ರದ ರೂಪುರೇಷಗಳನ್ನು ರೂಪಿಸಿದೆ. ಪಕ್ಷದ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ನೇತೃತ್ವದಲ್ಲಿ ಶನಿವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: ಉ.ಪ್ರದಲ್ಲಿ 15 ಜನರ ಸಾವು!..
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್, ‘ನೂತನ ಕಾಯ್ದೆ ಬಗ್ಗೆ ಜನರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ದೇಶದ ಪ್ರತೀ ಜಿಲ್ಲೆಗಳು ಸೇರಿ ಒಟ್ಟಾರೆ 1000 ರ್ಯಾಲಿ ಹಾಗೂ 250 ಪತ್ರಿಕಾಗೋಷ್ಠಿಗಳನ್ನು ನಡೆಸುತ್ತೇವೆ. ಈ ಮೂಲಕ ಮುಂದಿನ 10 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಕುಟುಂಬಗಳನ್ನು ಭೇಟಿ ಮಾಡಿ, ಎನ್ಆರ್ಸಿ ಮತ್ತು ಸಿಎಎ ಕುರಿತಾದ ಗೊಂದಲಗಳನ್ನು ನಿವಾರಿಸುತ್ತೇವೆ. ಈ ಮೂಲಕ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಹೇಳುತ್ತಿರುವ ಸುಳ್ಳುಗಳನ್ನು ಬಯಲು ಮಾಡುತ್ತೇವೆ’ ಎಂದು ಗುಡುಗಿದರು.