ಒಂದು ಕಡೆ ಬಿಜೆಪಿ, ಇನ್ನೊಂದು ಕಡೆ ಎನ್‌ಸಿ ಭಾರೀ ಪ್ರತಿಭಟನೆ, ಉದ್ವಿಗ್ನ, ಏನಾಗ್ತಿದೆ ಕಾಶ್ಮೀರದಲ್ಲಿ?

Ravi Janekal   | CMS
Published : Sep 02, 2026, 01:50 PM IST
Jammu kashmir BJP protest

ಸಾರಾಂಶ

ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿ ಖಂಡಿಸಿ, ಬಿಜೆಪಿ ಹಾಗೂ ಯುವಕರ ಬಂಧನವನ್ನು ವಿರೋಧಿಸಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಶ್ರೀನಗರದಲ್ಲಿ ಪ್ರತ್ಯೇಕ ಪ್ರತಿಭಟನೆಗಳನ್ನು ನಡೆಸಿವೆ. ಇದರಿಂದಾಗಿ ರಾಜಧಾನಿಯಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಶ್ರೀನಗರ (ಸೆ.2): ಇತ್ತೀಚೆಗೆ ನಡೆದ ಉಗ್ರರ ದಾಳಿ, ಕಾರ್ಯಕರ್ತರ ಬಂದನ ಖಂಡಿಸಿ ಬಿಜೆಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್(NC) ಪ್ರತ್ಯೇಕವಾಗಿ ಜಮ್ಮು ಕಾಶ್ಮೀರದಲ್ಲಿ ಇಂದು ಪ್ರತಿಭಟನೆ ನಡೆಸಿದವು. ಕೆಲ ಕಾಲ ಪ್ರಮುಖ ರಸ್ತೆಗಳು ಉದ್ವಿಗ್ನಗೊಂಡವು. ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯಾದ್ಯಂತ ಭಾರೀ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ.

ಉಗ್ರರ ವಿರುದ್ಧ ಬಿಜೆಪಿ ಆಕ್ರೋಶ

ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಶ್ರೀನಗರದ ಜವಾಹರ್ ನಗರದಲ್ಲಿರುವ ತಮ್ಮ ಪ್ರಧಾನ ಕಚೇರಿಯಿಂದ ಲಾಲ್ ಚೌಕ್ ಕಡೆಗೆ ಮೆರವಣಿಗೆ ಆರಂಭಿಸಿದರು. ರಿಯಾಸಿ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿ ನಡೆಸಿರುವುದೇ ಈ ಪ್ರತಿಭಟನೆಗೆ ಮುಖ್ಯ ಕಾರಣವಾಗಿತ್ತು. ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರನ್ನು ಪೊಲೀಸರು ಜವಾಹರ್ ನಗರದ ಬಳಿಯೇ ತಡೆದು ನಿಲ್ಲಿಸಿದರು.

ಈ ಪ್ರತಿಭಟನೆ 'ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ'ಯ ವಿರುದ್ಧ ಎಂದು ರೈನಾ ಆರೋಪಿಸಿದರು. ಕಾಶ್ಮೀರದಲ್ಲಿ ನೆಲೆಸಿರುವ ಶಾಂತಿ, ಅಭಿವೃದ್ಧಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಂಡ ಅಭೂತಪೂರ್ವ ಮತದಾನದಿಂದ ಪಾಕಿಸ್ತಾನಕ್ಕೆ ಹತಾಶೆಯಾಗಿದೆ. ಸ್ವರ್ಗದಂತಿದ್ದ ಕಾಶ್ಮೀರವನ್ನು ಪಾಕಿಸ್ತಾನ ನರಕವನ್ನಾಗಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಉಗ್ರರು ಮತ್ತು ಅವರ ಬೆಂಬಲಿಗರನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುವುದು ಎಂದು ಎಚ್ಚರಿಸಿದರು.

ಯುವಕರ ಬಂಧನಕ್ಕೆ ಎನ್‌ಸಿ ವಿರೋಧ

ಇನ್ನೊಂದೆಡೆ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷವು ಯುವಕರನ್ನು 'ಅನ್ಯಾಯವಾಗಿ' ಬಂಧಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿತು. ಪಕ್ಷದ ಮುಖ್ಯ ವಕ್ತಾರ ತನ್ವೀರ್ ಸಾದಿಕ್ ಮತ್ತು ಹಿರಿಯ ನಾಯಕ ಅಲಿ ಮೊಹಮ್ಮದ್ ಸಾಗರ್ ಅವರ ನೇತೃತ್ವದಲ್ಲಿ ನವಾ-ಇ-ಸುಬಾ ಕಚೇರಿಯಲ್ಲಿ ಪ್ರತಿಭಟನೆ ನಡೆಯಿತು. ಮುಖ್ಯ ರಸ್ತೆಯತ್ತ ಮೆರವಣಿಗೆ ಹೊರಡಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದರು.

ಯುವಕರನ್ನು ಪೊಲೀಸ್ ಠಾಣೆಗಳಿಗೆ ಕರೆಸಿ ಕಿರುಕುಳ ನೀಡಲಾಗುತ್ತಿದೆ ಎಂದು ತನ್ವೀರ್ ಸಾದಿಕ್ ಆರೋಪಿಸಿದರು. ಈ ವಿಷಯವನ್ನು ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಈಗಾಗಲೇ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಗಮನಕ್ಕೆ ತಂದಿದ್ದಾರೆ. ಅವರಿಂದ ಭರವಸೆ ಸಿಕ್ಕಿದ್ದರೂ, ಯುವಕರ ಬಂಧನ ನಿರಂತರವಾಗಿ ಮುಂದುವರಿದಿದೆ ಎಂದು ಸಾದಿಕ್ ಅಸಮಾಧಾನ ವ್ಯಕ್ತಪಡಿಸಿದರು. ಈ ಅನ್ಯಾಯದ ವಿರುದ್ಧ ಪಕ್ಷವು ಸುಮ್ಮನೆ ಕೂರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಒಟ್ಟಿನಲ್ಲಿ, ಎರಡು ಭಿನ್ನ ಕಾರಣಗಳಿಗಾಗಿ ನಡೆದ ಈ ಪ್ರತಿಭಟನೆಗಳಿಂದಾಗಿ ಶ್ರೀನಗರದಲ್ಲಿ ಬಿಗಿ ಭದ್ರತೆ ಏರ್ಪಡಿಸುವುದು ಅನಿವಾರ್ಯವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯ ರೈಲ್ವೇಯಿಂದ 9 ದಿನದ ಜಪಾನ್ ಟೂರ್ ಆರಂಭ, ಪ್ರಯಾಣಿಕರ ಟಿಕೆಟ್ ಬೆಲೆ ಎಷ್ಟು?
CM Vijay: ಅಜ್ಜಿಗೆ ಕಾಸ್ಟ್ಲಿ ಕನ್ನಡಕ ಗಿಫ್ಟ್ ಕೊಟ್ಟ ವಿಜಯ್, ಬೆಲೆ ಎಷ್ಟು ಗೊತ್ತಾ?