ಮಾಟದ ಶಂಕೆ : ಎರಡು ಮಕ್ಕಳ ತಾಯಿಯನ್ನು ಜೀವಂತ ಸುಟ್ಟ ಜನ

By Anusha KbFirst Published Nov 6, 2022, 12:46 PM IST
Highlights

ವಾಮಾಚಾರ ಮಾಡುತ್ತಿದ್ದಳೆಂದು ಆರೋಪಿಸಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಮಹಿಳೆಯನ್ನು ಆಕೆಯ ಮನೆಯಲ್ಲೇ ಬೆಂಕಿ ಹಚ್ಚಿ ಆಕೆ ಸಜೀವವಾಗಿ ಸಾಯುವಂತೆ ಮಾಡಿದ ಆಘಾತಕಾರಿ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ.

ಬಿಹಾರ: ವಾಮಾಚಾರ ಮಾಡುತ್ತಿದ್ದಳೆಂದು ಆರೋಪಿಸಿ ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಮಹಿಳೆಯನ್ನು ಆಕೆಯ ಮನೆಯಲ್ಲೇ ಬೆಂಕಿ ಹಚ್ಚಿ ಆಕೆ ಸಜೀವವಾಗಿ ಸಾಯುವಂತೆ ಮಾಡಿದ ಆಘಾತಕಾರಿ ಘಟನೆ ಬಿಹಾರದ ಗಯಾದಲ್ಲಿ ನಡೆದಿದೆ. ಶನಿವಾರ ಸಂಜೆ ಈ ಅನಾಹುತ ನಡೆದಿದೆ. ಮಹಿಳೆಯೊಬ್ಬಳನ್ನು ಆಕೆಯ ಮನೆಯಲ್ಲೇ ಸಜೀವವಾಗಿ ಸುಡಲಾಗಿದೆ. ಮೃತ ಮಹಿಳೆಯನ್ನು ಅರ್ಜುನ್ ದಾಸ್ (Arjun Das) ಎಂಬುವವರ ಪತ್ನಿ 45 ವರ್ಷದ ರೀಟಾ ದೇವಿ (Rita Devi) ಎಂದು ಗುರುತಿಸಲಾಗಿದೆ. ನೆರೆಹೊರೆಯ ಮನೆಯವರೇ ಆಕೆಯ ಮೇಲೆ ಹಲ್ಲೆ ನಡೆಸಿ ನಂತರ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. 

ಇಮಾಮ್‌ಗಂಜ್ ಎಸ್‌ಡಿಪಿಒ ಮನೋಜ್ ರಾವ್ ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಕೂಡಲೇ ಶವವನ್ನು ಗಯಾದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಂಭತ್ತು ಮಹಿಳೆಯರನ್ನು ಬಂಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಹಾಗೂ 436 ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಹರ್‌ಪ್ರೀತ್ ಕೌರ್ (Harpreet Kaur) ಅವರ ಪ್ರಕಾರ, ಮಹಿಳೆಯನ್ನು ಕೊಲೆ ಮಾಡಲು ಬಯಸಿದ್ದ ಪ್ರಮುಖ ಆರೋಪಿಯ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ.  

ಅಥಣಿ: ವಾಮಾಚಾರ, ದೆವ್ವ ಬಿಡಿಸುವ ಶಿಕ್ಷಕನಿಗೆ ಚಳಿ ಬಿಡಿಸಿದ ಬಿಇಒ..!

ಪಾಟ್ನಾದ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿ ತನಿಖೆಗೆ ಬೇಕಾದ ಅಗತ್ಯ ಮಾದರಿಗಳನ್ನು ತೆಗೆದುಕೊಂಡಿದೆ. ತಿಂಗಳ ಹಿಂದಷ್ಟೇ ಗ್ರಾಮದಲ್ಲಿ ಪರಮೇಶ್ವರ್ ಭುಯಾನ್ (Parmeshwar Bhuiyan) ಎಂಬುವವರು, ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಆದರೆ ಅವರ ಕುಟುಂಬದವರು ರೀಟಾ ದೇವಿ ಈತನಿಗೆ ಮಾಟ ಮಾಡಿ ಕೊಲೆ ಮಾಡಿದ್ದಾಳೆ ಎಂದು ಭಾವಿಸಿದ್ದರು. ಅನಾರೋಗ್ಯಕ್ಕೀಡಾಗಿ ಮೃತಪಟ್ಟ ಪರಮೇಶ್ವರ್, ಭುಯಾನ್ ಸಮುದಾಯಕ್ಕೆ ಸೇರಿದ್ದರೆ, ಮೃತ ರೀಟಾ, ದಾಸ್ ಸಮುದಾಯಕ್ಕೆ ಸೇರಿದವರಾಗಿದ್ದರು.

ಪರಮೇಶ್ವರ್ ನಿಧನದ ನಂತರ ಈ ಎರಡು ಕುಟುಂಬಗಳ ನಡುವೆ ಮನಸ್ತಾಪ ಏರ್ಪಟ್ಟಿತ್ತು, ಇದಾದ ಬಳಿಕ ಪಂಚಾಯಿತಿ ಮಾಡಿ ಪರಮೇಶ್ವರ್ ಅವರ ಸಂಬಂಧಿಗಳು ದೂರದ ಜಾರ್ಖಂಡ್‌ನಿಂದ ಓರ್ವ ಭೂತೋಚ್ಛಾಟಕನನ್ನು ಕರೆಸಿದ್ದರು. ಆತ ಮಹಿಳೆ ರೀಟಾ ಮೇಲೆ ಮಾಟ ಮಂತ್ರದ ಆರೋಪ ಮಾಡಿ ಪರಮೇಶ್ವರ್‌ರನ್ನು ಕೊಲೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಳ್ಳುವಂತೆ ಆಕೆಗೆ ಒತ್ತಾಯಿಸಿದ್ದರು. ಇದಾದ ಬಳಿಕ ಅಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ನೋಡಿ ಭೂತೋಚ್ಛಾಟಕ (exorcist) ಅಲ್ಲಿಂದ ಕಾಲ್ಕಿತ್ತಿದ್ದಾನೆ. 

ಇದಾದ ಬಳಿಕ ರೀಟಾ ದೇವಿ ಹಾಗೂ ಆಕೆಯ ಕುಟುಂಬದವರು ಅಲ್ಲಿಂದ ಹೊರಟು ಹೋಗಿದ್ದಾರೆ. ಆದರೆ ಇತ್ತ ಭುಯಾನ್ ಸಮುದಾಯದ (Bhuiyan community) ಜನ ಸಂಪ್ರದಾಯಿಕ ಆಯುಧಗಳನ್ನು ಬಳಸಿ ಆಕೆಯ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಮಹಿಳೆ ಮನೆಯ ಒಳಗೆ ಅಡಗಿದ್ದರೆ, ಆಕೆಯ ಕುಟುಂಬದ ಪುರುಷರು ಸಮೀಪದ ಕಾಡುಗಳಿಗೆ ಓಡಿ ಹೋಗಿ ಅಲ್ಲಿ ಅಡಗಿಕೊಂಡಿದ್ದಾರೆ. 

ವಾಮಾಚಾರ ಶಂಕೆ: 70 ವರ್ಷದ ಬುಡಕಟ್ಟು ಮಹಿಳೆ ಕೊಂದ ಗ್ರಾಮಸ್ಥ

ಆದರೆ ಇಲ್ಲಿ ಬಾಗಿಲು ಒಡೆದು ಮನೆಗೆ ನುಗ್ಗಿದ ಜನ ರೀಟಾಳನ್ನು ಹಿಡಿದು ಆಕೆ ಪ್ರಜ್ಞೆ (unconscious) ತಪ್ಪುವವರೆಗೆ ಆಕೆಗೆ ಥಳಿಸಿದ್ದಾರೆ. ಅಲ್ಲದೇ ಮನೆಯ ಗ್ಯಾಸ್ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆ ಮಾಡಿ ಇಡೀ ಮನೆಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮಹಿಳೆ ಸಜೀವವಾಗಿ ದಹನಗೊಂಡಿದ್ದಾಳೆ. ಇತ್ತ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳು ಸಮೀಪದ ಪೊಲೀಸ್‌ ಠಾಣೆಗೆ (Police station) ಹೋಗಿ ದೂರು ನೀಡಿ ನೆರವಿಗಾಗಿ ಯಾಚಿಸಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಬಂದ ಪೊಲೀಸರ ಮೇಲೆ ಗ್ರಾಮದ ಜನ ಕಲ್ಲು ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ. ನಂತರ ಸಂಜೆ ಹೆಚ್ಚಿನ ಭದ್ರತೆಯೊಂದಿಗೆ ಎಸ್‌ಡಿಪಿಒ ಮನೋಜ್‌ ರಾಮ್ (Manoj Ram) ನೇತೃತ್ವದಲ್ಲಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

click me!