
ನವದೆಹಲಿ (ನ.14) ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಅಂತಿಮ ಫಲಿತಾಂಶ ಹೊರಬಿದ್ದಿಲ್ಲ. ಸದ್ಯ ಬಿಜೆಪಿ ನೇತೃತ್ವದ ಎನ್ಡಿಎ 200 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ತೇಜಸ್ವಿ ಯಾದವ್ ರಾಹುಲ್ ಗಾಂಧಿ ಒಳಗೊಂಡ ಮಹಾಘಟಬಂದನ್ 36 ಸ್ಥಾನದಲ್ಲಿ ಮುನ್ನಡೆ ಪಡೆದಿದೆ. ಬಹುತೇಕ ಕಡೆ ಬಿಜೆಪಿ ಅಭ್ಯರ್ಥಿಗಳು ಈಗಾಗಲೇ ಗೆಲುವಿನ ಗೆರೆ ದಾಟಿದ್ದಾರೆ. ಈ ಫಲಿತಾಂಶ, ಮುನ್ನಡೆ ಹೊರಬೀಳುತ್ತಿದ್ದಂತೆ ಇದೀಗ ಬಿಜೆಪಿ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವ್ಯಂಗ್ಯವಾಡಿದೆ. ರಾಹುಲ್ ಗಾಂಧಿ ವೋಟ್ ಚೋರಿಯನ್ನು ಕೇಳಿಸಿಕೊಂಡವರೇ ಇಲ್ಲ. ಆದರೆ ಚುನಾವಣೆ ವಿಚಾರದಲ್ಲಿ ಕಳೆದೆರಡು ದಶಕದಲ್ಲಿ ರಾಹುಲ್ ಗಾಂಧಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಬಿಹಾರ ಚುನಾವಣೆಯೊಂದಿಗೆ ರಾಹುಲ್ ಗಾಂಧಿ 95ನೇ ಚುನಾವಣೆ ಸೋತಿದ್ದಾರೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.
ರಾಹುಲ್ ಗಾಂಧಿ ದೇಶಾದ್ಯಂದ ಹಲವು ಬಾಂಬ್ ಸಿಡಿಸಿದ್ದರು. ವೋಟ್ ಚೋರಿ ಎಂದು ದೇಶದಲ್ಲಿ ಭಾರಿ ಅಲೆ ಎಬ್ಬಿಸಲು ಪ್ರಯತ್ನಿಸಿದ್ದರು. ಇತ್ತ ಬಿಹಾರದಲ್ಲಿ 16 ದಿನಗಳ ಕಾಲ ವೋಟ್ ಅಧಿಕಾರ್ ಯಾತ್ರೆ ನಡೆಸಿದ್ದರು. ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದರು, ದೇಶದ ಜನರು ಸಾಂವಿಧಾನಿಕ ಸಂಸ್ಥೆಯನ್ನು ಅನುಮಾನದಿಂದ ನೋಡುವ ಹಾಗೆ ಆರೋಪ ಮಾಡಿದ್ದರು. ಜೊತೆಗೆ ದೇಶದ ಜೆನ್ಜಿ ನಿಮ್ಮ ಮತ ಕಳ್ಳತನವಾಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದರು. ಆದರೆ ಮತದಾರರು ರಾಹುಲ್ ಗಾಂಧಿ ಆರೋಪ, ಹೋರಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಬಿಹಾರದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿದ್ದರೆ, ಮಹಾಘಟಬಂದನ್ ಐಸಿಯುಗೆ ತಲುಪಿದೆ. ಈ ಅಂಕಿ ಅಂಶಗಳನ್ನಿಟ್ಟುಕೊಂಡು ಅಮಿತ್ ಮಾಳವಿಯಾ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಸಕ್ರಿಯ ರಾಜಕಾರಣ, ಕಾಂಗ್ರೆಸ್ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಹೀಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡ ಬಳಿಕ ಇದು 95ನೇ ಚುನಾವಣಾ ಸೋಲು ಎಂದು ಅಮಿತ್ ಮಾಳವಿಯಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಚುನಾವಣಾ ಸೋಲಿನ ಕುರಿತು ಅಮಿತ್ ಮಾಳವಿಯಾ ಚಾರ್ಟ್ ಒಂದನ್ನು ಪೋಸ್ಟ್ ಮಾಡಿದ್ದಾರೆ.ರಾಹುಲ್ ಗಾಂಧಿಯನ್ನು ಹಲವರು ಬೆಳಗ್ಗೆ 9 ರಿಂದ ಸಂಜೆ 5ರ ವರೆಗಿನ ಆರೋಪ ಪ್ರತ್ಯಾರೋಪ ರಾಜಕಾರಣಿ ಎಂದು ಕರೆಯುತ್ತಾರೆ. ಚುನಾವಣೆ ಸೋಲಿನಲ್ಲಿ ರಾಹುಲ್ ಗಾಂಧಿ ಶತಕ ಬಾರಿಸಲು ಇನ್ನು 5 ಸೋಲು ಬೇಕು ಎಂದು ಅಮಿತ್ ಮಾಳವಿಯಾ ಟ್ವೀಟ್ ಮಾಡಿದ್ದಾರೆ. ಜೊತೆಗೆ ಒಂದೊಂದು ರಾಜ್ಯದಲ್ಲಿ ಚುನಾವಣೆ ಸೋಲಿನ ಅಂಕಿ ಅಂಶವನ್ನು ನೀಡಿದ್ದಾರೆ.
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 19 ಸ್ಥಾನ ಗೆದ್ದಿತ್ತು. ಕನಿಷ್ಠ ಎರಂಡಕಿ ದಾಟಿತ್ತು. ಆರ್ಜೆಡಿ ಜೊತೆ ಸೇರಿ ಎರಡನೇ ದೊಡ್ಡ ಮೈತ್ರಿ ಪಾರ್ಟಿಯಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಸದ್ಯ 4 ಸ್ಥಾನದಲ್ಲಿ ಮುನ್ನಡೆಯಲ್ಲಿದೆ. ಚುನಾವಣಾ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಲು ಬಂದ ರಾಹುಲ್ ಗಾಂಧಿ ಇದೀಗ ಸೋಲಿನಲ್ಲಿ ಮುಳುಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ