
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶ ಬರುವ ಮುನ್ನವೇ ಬಿಗ್ ಬಾಸ್ ಪ್ರಥಮ್ ಅವರು, "ಮಮತಾ ಬ್ಯಾನರ್ಜಿ ಸೋತರೆ ನೂರು ಜನರ ಅಭಿವೃದ್ಧಿಗೆ ಸಹಾಯ ಮಾಡ್ತೀನಿ ಎಂದು ಈಶ್ವರನಲ್ಲಿ ಹರಕೆ ಹೊತ್ತಿರುವೆ ಎಂದಿದ್ದರು. ಈಗ ಸೋತ ಬಳಿಕ ಇನ್ನೊಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ನೆನಪಿಟ್ಟುಕೊಳ್ಳಿ! ಇನ್ನೂ 3 ತಿಂಗಳಲ್ಲಿ 25 ಲಕ್ಷ ಅಕ್ರಮ ಬಾಂಗ್ಲಾ ನುಸುಳುಕೋರರನ್ನ ಗುರುತಿಸಿ ಹೊರಗೆ ಅಟ್ಟಲಿದ್ದಾರೆ. ಭಾರತ ಸೇಫ್ ಆಗಿದೆ. ನಾನು ಯಾವ ಸಮೀಕ್ಷೆಯನ್ನೂ ನಂಬುವುದಿಲ್ಲ! ಸುದ್ದಿ ನೋಡಿ ನಿರ್ಧರಕ್ಕೆ ಬರುವುದಿಲ್ಲ! ಯಾರ ಪರವೂ ಅಲ್ಲ!ಯಾವ ಪಕ್ಷದಲ್ಲಿಯೂ ನಾನಿಲ್ಲ! ನಾನು ದೇಶದ ಪರ! ಮೊದಲು ಭಾರತ ಅಕ್ರಮ ನುಸುಳುಕೋರರು ಭಯೋತ್ಪಾದಕರಿಗಿಂತ ಡೇಂಜರಸ್. ನನ್ನ ದೇಶದ demography change ಆಗೋಗ್ತಿತ್ತು. ಅದಕ್ಕೆ ಮಮತಾ ನಿಮ್ಮ ಮೇಲೆ ಬೇಸರ! ಕಾಳಿ ಮಾತೆ ಮುಂದೆ ನಿಂತಿದ್ರೂ ಕೋಳಿ ತರ ನಿಮ್ಮನ್ನ ಸೋಲಿಸಿಬಿಟ್ರು.
2011ರಲ್ಲಿ 34 ವರ್ಷಗಳ ಎಡಪಕ್ಷಗಳ ಆಡಳಿತಕ್ಕೆ ಅಂತ್ಯ ಹಾಡಿದ್ದ ಮಮತಾ ಬ್ಯಾನರ್ಜಿ, ಇದೀಗ ಅವರ ಆಡಳಿತಾವಧಿಯ ಅರ್ಧವನ್ನೂ ಪೂರೈಸುವ ಮುನ್ನವೇ ಸುಸ್ತಾದಂತೆ ಕಾಣುತ್ತಿದೆ. ಅಧಿಕಾರಕ್ಕೆ ಬಂದಾಗ ಇದು ಸೇಡಿನ ಸರ್ಕಾರವಲ್ಲ, ಬದಲಾವಣೆಯ ಸರ್ಕಾರ ಎಂದಿದ್ದರು. ಆದರೆ ನಂತರ ಬಂಗಾಳದ ರಾಜಕೀಯ ಬೇರೆಯೇ ತಿರುವು ಪಡೆಯಿತು.
ಬಂಗಾಳದಲ್ಲಿ ಅಧಿಕಾರ ಬದಲಾದ ನಂತರ, ಅನೇಕ ಸಿಪಿಎಂ ಕಾರ್ಯಕರ್ತರು ಹತ್ಯೆಯಾದರು. ರಾಜ್ಯದಲ್ಲಿ ನಡೆದ ಪ್ರತಿಯೊಂದು ಚುನಾವಣೆಯೂ ರಕ್ತಸಿಕ್ತವಾಯಿತು. ಪ್ರತಿ ಚುನಾವಣೆಯಲ್ಲೂ ತೃಣಮೂಲ ಕಾಂಗ್ರೆಸ್ ಬಿರುಗಾಳಿ ಎಬ್ಬಿಸುತ್ತಿತ್ತು. ವಿರೋಧ ಪಕ್ಷಗಳನ್ನು ಬದಿಗೆ ಸರಿಸಿ ಮಮತಾ ಪಕ್ಷ ಮುನ್ನಡೆಯಿತು. 2016ರ ವಿಧಾನಸಭಾ ಚುನಾವಣೆಯಿಂದ ಎಡಪಕ್ಷಗಳು ಅಸ್ತಿತ್ವ ಕಳೆದುಕೊಂಡರೆ, 2021ರಲ್ಲಿ ಶೂನ್ಯ ಸಂಪಾದನೆ ಮಾಡಿದ್ದವು.
2021ರ ಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ಬಿಜೆಪಿ ಉದಯವಾಯಿತು. ಕೇಸರಿ ಪಕ್ಷವೇ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯ ಬಲಗೈ ಎಂದೇ ಖ್ಯಾತರಾಗಿದ್ದ ಸುವೇಂದು ಅಧಿಕಾರಿ ವಿರೋಧ ಪಕ್ಷದ ನಾಯಕರಾದರು.
ಒಂದು ಕಾಲದಲ್ಲಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ನ ಸಂಸದರಾಗಿದ್ದರು. ಮಮತಾ ಆಡಳಿತದಲ್ಲಿ ಸಚಿವರೂ ಆಗಿದ್ದರು. ಮಮತಾ ಅಧಿಕಾರ ಹಿಡಿಯಲು ಕಾರಣವಾದ ನಂದಿಗ್ರಾಮ ಮತ್ತು ಕೇಶಪುರ ಚಳವಳಿಯ ಮುಂಚೂಣಿಯಲ್ಲಿದ್ದ ನಾಯಕ ಇವರು.
ಕಳೆದ ಐದು ವರ್ಷಗಳಿಂದ ಸುವೇಂದು ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅವರು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರ್ಕಾರವನ್ನು ಹಲವು ವಿಷಯಗಳಲ್ಲಿ ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಬಂದಿದ್ದಾರೆ. ಇದರ ಫಲವಾಗಿಯೇ ರಾಜ್ಯದಲ್ಲಿ ಮತ್ತೊಮ್ಮೆ ಪರಿವರ್ತನೆಯ ಗಾಳಿ ಬೀಸುತ್ತಿದೆ.
ರಾಜ್ಯ ರಾಜಕೀಯದಲ್ಲಿ ಈ ಬಾರಿ ಕೇಸರಿ ಬಿರುಗಾಳಿ ಎದ್ದಿದೆ. ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ 192 ಸ್ಥಾನಗಳಲ್ಲಿ ಮತ್ತು ಟಿಎಂಸಿ 90ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಹೀಗೇಕೆ ಆಯಿತು? ಬಿಜೆಪಿಯ ಚುನಾವಣಾ ಭರವಸೆಗಳು, ಟಿಎಂಸಿ ಭ್ರಷ್ಟಾಚಾರ ಕಾರಣವೇ? ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆ ಈ ಪ್ರಶ್ನೆಗಳು ಏಳುತ್ತಿವೆ.
ದಕ್ಷಿಣ ಬಂಗಾಳವು ಟಿಎಂಸಿಯ ಭದ್ರಕೋಟೆ ಎಂದೇ ಪ್ರಸಿದ್ಧ. ಆದರೆ ಅಲ್ಲಿಯೂ ಬಿಜೆಪಿ ಒಂದರ ಹಿಂದೆ ಒಂದರಂತೆ ಜಿಲ್ಲೆಗಳನ್ನು ವಶಪಡಿಸಿಕೊಂಡಿದೆ. ಅನುಬ್ರತ ಮಂಡಲ್ ಅವರ ಜಿಲ್ಲೆ ಬೀರ್ಭೂಮ್ನ ಹಲವು ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಹೂಗ್ಲಿ, ನದಿಯಾ, ದಕ್ಷಿಣ 24 ಪರಗಣ, ಹೌರಾದಲ್ಲೂ ಟಿಎಂಸಿ ನೆಲಕಚ್ಚಿದೆ.
ಚುನಾವಣಾ ಮತ ಎಣಿಕೆಯಲ್ಲಿ ರಾಜ್ಯದ ಸುಮಾರು 23 ಸಚಿವರು ಹಿನ್ನಡೆ ಅನುಭವಿಸಿದ್ದಾರೆ. ಇದರಲ್ಲಿ ಚಂದ್ರಿಮಾ ಭಟ್ಟಾಚಾರ್ಯ, ಬ್ರಾತ್ಯ ಬಸು ಅವರಂತಹ ಪ್ರಮುಖ ಸಚಿವರೂ ಸೇರಿದ್ದಾರೆ. ಶೌಕತ್ ಮೊಲ್ಲಾ, ಹುಮಾಯೂನ್ ಕಬೀರ್ ಅವರಂತಹ ಟಿಎಂಸಿಯ ಪ್ರಮುಖ ನಾಯಕರೂ ಈ ಪಟ್ಟಿಯಲ್ಲಿದ್ದಾರೆ. ಇವರನ್ನೆಲ್ಲಾ ಟಿಎಂಸಿ ಅಜೇಯರೆಂದು ಹೇಳಿಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ