ಧರಂರನ್ನು ಮಣಿಸಿದ್ದ ಅಡ್ವಾಣಿ ಶಿಷ್ಯನಿಗೆ ಕೇಂದ್ರ ಮಂತ್ರಿ ಸ್ಥಾನ!

By Kannadaprabha NewsFirst Published Jul 8, 2021, 9:34 AM IST
Highlights

* ಬೀದರ್‌ಗೆ ಮೊದಲ ಬಾರಿ ಕೇಂದ್ರ ಸಚಿವಗಿರಿ

* ಮೆಕ್ಯಾನಿಕಲ್‌ ಎಂಜಿನಿಯರ್‌ಗೆ ಉನ್ನತ ಹುದ್ದೆ

* ಧರಂರನ್ನು ಮಣಿಸಿದ್ದ ಅಡ್ವಾಣಿ ಶಿಷ್ಯನಿಗೆ ಕೇಂದ್ರ ಮಂತ್ರಿ ಸ್ಥಾನ!

ಬೀದರ್‌(ಜು.08): ಶರಣರ ನಾಡಾದ ಬೀದರ್‌ನಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸಿದ ಸಂಸದ ಭಗವಂತ ಖೂಬಾಗೆ ಕೊನೆಗೂ ಅದೃಷ್ಟಒಲಿದು ಬಂದಿದೆ. ಖೂಬಾ ಪಕ್ಷ ನಿಷ್ಠೆಗೆ ಇದೀಗ ಕೇಂದ್ರ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದ ಮೊದಲ ಕೇಂದ್ರ ಸಚಿವ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಾದ ಖೂಬಾ ಅವರು 1991ರಲ್ಲಿ ಬೀದರ್‌ಗೆ ಆಗಮಿಸಿದ್ದ ಪಕ್ಷದ ಮಾಜಿ ಉಪಪ್ರಧಾನಿ ಎಲ್‌.ಕೆ.ಆಡ್ವಾಣಿ ಆಡ್ವಾಣಿ ಅವರ ಸಮ್ಮುಖ ಸಾಮಾನ್ಯ ಕಾರ‍್ಯಕರ್ತನಾಗಿ ಬಿಜೆಪಿಗೆ ಸೇರ್ಪಡೆಯಾದವರು. ನಂತರ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಭರ್ಜರಿ ಜಯ ಸಾಧಿಸಿದವರು.

ಜಿಲ್ಲೆಯ ಔರಾದ್‌ ಪಟ್ಟಣದಲ್ಲಿ ಜೂ.1, 1967ರಲ್ಲಿ ಮಹಾದೇವಿ ಹಾಗೂ ಗುರುಬಸಪ್ಪ ದಂಪತಿ ಪುತ್ರನಾಗಿ ಜನಿಸಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಔರಾದ್‌ನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪ್ರೌಢ ಶಿಕ್ಷಣವನ್ನು ಬೀದರ್‌ನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಮುಗಿಸಿದರು. ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿಯನ್ನು ತುಮಕೂರಿನ ಸಿದ್ಧಗಂಗಾ ಮಠದ ಕಾಲೇಜಿನಲ್ಲಿ ಮುಗಿಸಿ ಮುಂದೆ ಗುತ್ತಿಗೆದಾರರಾಗಿ ಬೃಹತ್‌ ಯೋಜನೆಗಳನ್ನು ಕೈಗೆತ್ತಿಕೊಂಡವರು. 2005ರವರೆಗೆ ರೈಲ್ವೆ ಇಲಾಖೆಯ ವಿವಿಧ ಗುತ್ತಿಗೆಯಲ್ಲಿ ತೊಡಗಿದ್ದ ಇವರು, ಆರೆಸ್ಸೆಸ್‌ನಲ್ಲೂ ಗುರುತಿಸಿಕೊಂಡಿದ್ದರು. 2014ರಲ್ಲಿ ಬೀದರ್‌ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ದಿ. ಧರಂಸಿಂಗ್‌ ಅವರನ್ನು 1ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರಲ್ಲದೆ, 2019ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಈಶ್ವರ ಖಂಡ್ರೆ ವಿರುದ್ಧ 1.25 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದರು.

ಇತ್ತೀಚೆಗಷ್ಟೇ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಕಲಬುರಗಿ ಮೂಲದ ಶರಣು ಸಲಗರ ಅವರನ್ನು ಸ್ಪರ್ಧೆಗಿಳಿಸಿ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

click me!