
ನವದೆಹಲಿ (ಆ.19): ಗುಜರಾತ್ನ ಭವನಗರದ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರದರ್ಶಿಸಲಾದ ನಾಟಕದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಈ ಸ್ಕಿಟ್ ವಿವಾದಕ್ಕೆ ಕಾರಣವಾಗಿದ್ದು, ಅಧಿಕೃತ ತನಿಖೆಗೆ ಆದೇಶ ನೀಡಲಾಗಿದೆ. ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ್ಅನ್ನು ಆಧರಿಸಿದೆ ಎನ್ನಲಾದ ಈ ನಾಟಕದಲ್ಲಿ, ಬಿಳಿ ಸಲ್ವಾರ್-ಕಮೀಜ್ ಮತ್ತು ಕಿತ್ತಳೆ ದುಪಟ್ಟಾ ಧರಿಸಿದ ಹುಡುಗಿಯರು ಹಿನ್ನೆಲೆಯಲ್ಲಿ ಶಾಂತಿಯುತ ಕಾಶ್ಮೀರವನ್ನು ವಿವರಿಸುವ ಹಾಡಿಗೆ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ಮುಂದಿನ ದೃಶ್ಯದಲ್ಲಿ, ಭಯೋತ್ಪಾದಕರನ್ನು ಸೂಚಿಸುವ ಬಂದೂಕುಗಳನ್ನು ಹಿಡಿದ ಕೆಲವು ಬುರ್ಖಾ ಧರಿಸಿದ ಹುಡುಗಿಯರು ಒಳಗೆ ಬಂದು ನೃತ್ಯ ಮಾಡುವ ಹುಡುಗಿಯರಿಗೆ ಗುಂಡು ಹಾರಿಸುತ್ತಾರೆ.
ಸ್ಕಿಟ್ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬುರ್ಖಾ ಧರಿಸಿದ ಭಯೋತ್ಪಾದಕರ ಚಿತ್ರಣದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಕೆಲವರು ಇದು ಕೋಮು ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಶಾಲೆಯ ಪ್ರಾಂಶುಪಾಲ ರಾಜೇಂದ್ರ ದವೆ ಪ್ರತಿಕ್ರಿಯಿಸಿ, ಈ ನಾಟಕವು ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ವಿಷಯವನ್ನು ಆಧರಿಸಿದೆ ಎಂದು ಹೇಳಿದರು. ಈ ಪ್ರದರ್ಶನವನ್ನು ಶಾಲೆಯ ಕನ್ಯಾ ವಿದ್ಯಾಲಯ ವಿಭಾಗದ ವಿದ್ಯಾರ್ಥಿನಿಯರು ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.
"ನಾಟಕದಲ್ಲಿ, ಕೆಲವು ವಿದ್ಯಾರ್ಥಿನಿಯರು ಭಯೋತ್ಪಾದಕರನ್ನು ಪ್ರತಿನಿಧಿಸಿದರು, ಕೆಲವರು ಸೈನಿಕರ ಪಾತ್ರ ನಿಭಾಯಿಸಿದರು. ಇನ್ನೂ ಕೆಲವರು ಸಂತ್ರಸ್ಥರ ಪಾತ್ರ ಚಿತ್ರಿಸಿದರು. ಭಯೋತ್ಪಾದಕರಾಗಿ ನಿಯೋಜಿಸಲಾದವರಿಗೆ ಕಪ್ಪು ಬಟ್ಟೆ ಧರಿಸಲು ಸೂಚಿಸಲಾಗಿತ್ತು. ಆದರೆ, ಅವರು ಬುರ್ಖಾ ಧರಿಸಲು ಆಯ್ಕೆ ಮಾಡಿಕೊಂಡರು. ಯಾವುದೇ ಸಮುದಾಯ ಅಥವಾ ಗುಂಪನ್ನು ನೋಯಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮತ್ತು ಸಶಸ್ತ್ರ ಪಡೆಗಳ ಬಗ್ಗೆ ಗೌರವವನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು" ಎಂದು ದವೆ ವಿವರಿಸಿದರು.
ಈ ನಾಟಕವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳ ಭಾಗವಾಗಿದೆ ಎಂದು ಶಾಲೆಯು ಸ್ಪಷ್ಟಪಡಿಸಿದೆ ಮತ್ತು ಚಿತ್ರಣದ ಹಿಂದೆ ಯಾವುದೇ ಕೋಮು ಅಥವಾ ರಾಜಕೀಯ ಉದ್ದೇಶವನ್ನು ನಿರಾಕರಿಸಿದೆ.
ಭವನಗರ ಮುನ್ಸಿಪಲ್ ಕಾರ್ಪೊರೇಷನ್ನ ಪ್ರಾಥಮಿಕ ಶಿಕ್ಷಣ ಸಮಿತಿಯ ಆಡಳಿತ ಅಧಿಕಾರಿ ಮುಂಜಾಲ್ ಬಲ್ದನಿಯಾ, ಈ ವಿಷಯವು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದರು. ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. "ಈ ವಿಡಿಯೋ ತನಿಖೆಯಲ್ಲಿದೆ. ನಡುವೆ ರಜೆಗಳು ಇದ್ದವು, ಆದರೆ ತನಿಖೆ ಪೂರ್ಣಗೊಂಡ ನಂತರ, ನಾವು ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕರಿಗೆ ಶೋಕಾಸ್ ನೋಟಿಸ್ ನೀಡುತ್ತೇವೆ. ಶಾಲೆಯನ್ನು ಭವನಗರ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿರುವುದರಿಂದ, ಪ್ರಾಥಮಿಕ ಶಿಕ್ಷಣ ಸಮಿತಿಯು ವಿಚಾರಣೆ ಮತ್ತು ಮುಂದಿನ ಕ್ರಮವನ್ನು ನಿರ್ವಹಿಸುತ್ತದೆ" ಎಂದು ಬಲ್ದನಿಯಾ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ