
ನವದೆಹಲಿ (ಏ.12): ಮೂರು ವರ್ಷಗಳ ಹಿಂದೆ ಮಗ ಹಾಗೂ ಮಗಳು ಜೈನ ಸಂನ್ಯಾಸಿಗಳಾಗಿ ದೀಕ್ಷೆ ಪಡೆದುಕೊಂಡ ಬಳಿಕ ಅಹಮದಾಬಾದ್ನ ಉದ್ಯಮಿ ಭವೇಶ್ ಭಂಡಾರಿ ಹಾಗೂ ಅವರ ಪತ್ನಿ ಲೇಶ್ ದೀಕ್ಷಾ ಕೂಡ ಇತ್ತೀಚೆಗೆ ಜೈನ ಸಂನ್ಯಾಸಿಯಾಗಲು ತೀರ್ಮಾನ ಮಾಡಿದ್ದಾರೆ. ಗುಜರಾತ್ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್ನಗರದ ನಿವಾಸಿಗಳಾದ ಉದ್ಯಮಿ ಭವೇಶ್ ಭಾಯಿ ಭಂಡಾರಿ ಮತ್ತು ಅವರ ಪತ್ನಿ ಲೇಶ್ ದೀಕ್ಷಾ, ಲೌಕಿಕ ಬದುಕಿನಿಂದ ತಾವು ನಿವೃತ್ತಿಯಾಗೋದಾಗಿ ತಿಳಿಸಿದ್ದು, ಅದಕ್ಕೂ ಮುನ್ನ ತಾವು ಸಂಪಾದನೆ ಮಾಡಿದ್ದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ. ಲೌಕಿಕ ಜೀವನದ ಬಾಂಧವ್ಯಗಳನ್ನು ತೊರೆದು ಪರಿತ್ಯಾಗದ ಮಾರ್ಗವನ್ನು ಅಳವಡಿಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದಿದ್ದಾರೆ. ಶ್ರೀಮಂತ ಕುಟುಂಬದಲ್ಲಿಯೇ ಬೆಳೆದಿದ್ದ ಭವೇಶ್ ಭಾಯಿ ಭಂಡಾರಿ ಬಳಿಕ ತಮ್ಮ ಕುಟುಂಬದ ಸಿರಿ ಸಂಪತ್ತನ್ನು ಇನ್ನಷ್ಟು ಬೆಳೆಸಿದ್ದರು. ಆದರೆ, ತಮ್ಮ ಇಬ್ಬರೂ ಮಕ್ಕಳು ಕೂಡ ಜೈನ ಸಂನ್ಯಾಸಿಯಾದ ಬಳಿಕ ತಾವೂ ಕೂಡ ದೀಕ್ಷೆ ಪಡೆದುಕೊಳ್ಳುವ ತೀರ್ಮಾನ ಮಾಡಿದ್ದರು. ಈ ಕುರಿತಾಗಿ ಜೈನ ಮುನಿಗಳನ್ನು ಭೇಟಿಯಾಗಿದ್ದರು ಎನ್ನಲಾಗಿದೆ.
ಭವೇಶ್ ಭಾಯಿ ಭಂಡಾರಿ ಅವರ 19 ವರ್ಷದ ಪುತ್ರ ವಿಶ್ವ ಹಾಗೂ 16 ವರ್ಷದ ಪುತ್ರಿ ಭವ್ಯಾ 2021ರಲ್ಲಿ ಜೈನ ಸಂನ್ಯಾಸಿಗಳಾಗಿ ದೀಕ್ಷೆ ಪಡೆದುಕೊಂಡಿದ್ದರು. ಈ ಹಂತದಲ್ಲಿ ಮಾತನಾಡಿದ್ದ ಭವೇಶ್ ಭಾಯಿ, 'ಜೈನ ಮುನಿಗಳ ಮಾತುಗಳನ್ನು ಕೇಳಿಯೇ ನನ್ನ ಮಕ್ಕಳು ಬೆಳೆದಿದ್ದರು. ಲಾಕ್ಡೌನ್ ಸಮಯದಲ್ಲಿ ಜೈನ ಮುನಿಗಳ ಮಾತು ಕೇಳೋದೇ ಅವರ ಹವ್ಯಾಸವಾಗಿತ್ತು. ಅದಾದ ಬಳಿಕ ಅವರು ಜೈನ ಮುನಿಗಳಾಗಲು ನಿರ್ಧಾರ ಮಾಡಿದ್ದರು. ಮಕ್ಕಳ ನಿರ್ಧಾರವನ್ನು ಬೇಡ ಎನ್ನಲಿಲ್ಲ' ಎಂದು ತಿಳಿಸಿದ್ದರು. ಈಗ ಭವೇಶ್ ಭಾಯಿ ಹಾಗೂ ಅವರ ಪತ್ನಿಯೂ ಕೂಡ ಸಂನ್ಯಾಸ ಮಾರ್ಗದಲ್ಲಿ ಮುಂದುವರಿಯುವ ತೀರ್ಮಾನ ಮಾಡಿದ್ದಾರೆ.
ಭವೇಶ್ ಭಾಯ್ ಭಂಡಾರಿ ಲೌಕಿಕ ಬಾಂಧವ್ಯಗಳಿಂದ ದೂರ ಸರಿದು 200 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ. ಅವರು ಇದ್ದಕ್ಕಿದ್ದಂತೆ ಅಹಮದಾಬಾದ್ನಲ್ಲಿ ಕಟ್ಟಡ ನಿರ್ಮಾಣ ವ್ಯವಹಾರವನ್ನು ತೊರೆದು ದೀಕ್ಷಾರತಿಯಾಗಲು ನಿರ್ಧಾರ ಮಾಡಿದ್ದಾರೆ. ಜೈನ ಸಮಾಜದಲ್ಲಿ ದೀಕ್ಷೆಗೆ ಹೆಚ್ಚಿನ ಮಹತ್ವವಿದೆ ಎಂದು ಇವರ ಜೈನ ಸಮುದಾಯದ ದಿಲೀಪ್ ಗಾಂಧಿ ಹೇಳಿದ್ದಾರೆ. ದೀಕ್ಷೆ ತೆಗೆದುಕೊಳ್ಳುವ ವ್ಯಕ್ತಿ ಭಿಕ್ಷೆ ಬೇಡುತ್ತಾ ಜೀವನ ನಡೆಸಬೇಕು ಮತ್ತು ಎಸಿ, ಫ್ಯಾನ್, ಮೊಬೈಲ್ ಇತ್ಯಾದಿಗಳನ್ನು ತ್ಯಜಿಸಬೇಕು.ಇದಲ್ಲದೆ ಭಾರತದಾದ್ಯಂತ ಬರಿಗಾಲಿನಲ್ಲಿ ಪ್ರಯಾಣಿಸಬೇಕು ಎಂದಿದ್ದಾರೆ.
ಹಿಮ್ಮತ್ನಗರದಲ್ಲಿ ಸಂನ್ಯಾಸ ದೀಕ್ಷೆ ಸ್ವೀಕರಿಸಲು ಹೊರಟಿರುವ ಭವೇಶ್ ಭಾಯ್ ಅವರ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಗಿದೆ. ಈ ಸಮಯದಲ್ಲಿ ಅವರು ತಮ್ಮ ಎಲ್ಲಾ ಆಸ್ತಿಯನ್ನು ದಾನ ಮಾಡಿದರುಈ ಮೆರವಣಿಗೆ ಸುಮಾರು ನಾಲ್ಕು ಕಿಲೋಮೀಟರ್ ನಡೆದಿದೆ.
ಆಡೋ ವಯಸ್ಸಿಗೆ ಅಧ್ಯಾತ್ಮದತ್ತ ಒಲವು: ಪೋಷಕರೊಂದಿಗೆ ಸನ್ಯಾಸತ್ವ ಸ್ವೀಕರಿಸಲಿರುವ 9 ವರ್ಷದ ಪೋರ
ಏಪ್ರಿಲ್ 22 ರಂದು ಹಿಮ್ಮತ್ನಗರ ರಿವರ್ ಫ್ರಂಟ್ನಲ್ಲಿ 35 ಜನರು ಒಟ್ಟಿಗೆ ಸಮಚಿತ್ತದ ಜೀವನವನ್ನು ಪ್ರವೇಶಿಸಲಿದ್ದಾರೆ ದಿಲೀಪ್ ಗಾಂಧಿ ಹೇಳಿದ್ದಾರೆ. ಇದರಲ್ಲಿ ಭಂಡಾರಿ ಕುಟುಂಬವೂ ಭಾಗಿಯಾಗಿದೆ. ಕೋಟಿಗಟ್ಟಲೆ ಆಸ್ತಿಯನ್ನು ಬಿಟ್ಟ ವ್ಯಕ್ತಿಗೆ ಮಾತ್ರ ಸಂಯಮದಿಂದ ಬದುಕುವ ಹಕ್ಕಿದೆ ಎಂದು ಇಲ್ಲಿ ಹೇಳಬಹುದಾಗಿದೆ. ಕೆಲವು ತಿಂಗಳ ಹಿಂದೆ ಕೋಟಿಗಟ್ಟಲೆ ಆಸ್ತಿ ಹೊಂದಿರುವ ಭನ್ವರ್ಲಾಲ್ ಜೈನ್ ಅವರು ದೀಕ್ಷಾರ್ತಿಯಾಗುವ ನಿರ್ಧಾರ ಮಾಡಿದ್ದು ಭಾರೀ ಸುದ್ದಿಯಾಗಿತ್ತು. ಈಗ ಭವೇಶ್ ಅವರೂ ಕೋಟಿಗಟ್ಟಲೆ ಆಸ್ತಿಯನ್ನು ತಿರಸ್ಕರಿಸಿ ಸಾಧಾರಣ ಜೀವನ ನಡೆಸಲು ನಿರ್ಧಾರ ಮಾಡಿದ್ದಾರೆ.
Sallekhana: ನಿರಾಹಾರಿಗಳಾಗಿ ಸಾವು ಬರಮಾಡಿಕೊಳ್ಳುವ ಜೈನ ಸಂತರು… ಏನಿದು ಸಂಪ್ರದಾಯ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ