
ಹೈದರಾಬಾದ್(ಸೆ. 28) ಅಪಾರ ಸಂಗೀತ ಖಜಾನೆಯನ್ನು ಬಿಟ್ಟು ಅಗಲಿದ ಚೇತನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಭಾರತ ರತ್ನ ನೀಡಿ ಗೌರವಿಸಬೇಕು ಎಂದು ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಧಾನಮಂತ್ರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ, ರಾಜ್ಯದ ನೆಲ್ಲೂರು ಜಿಲ್ಲೆಯಲ್ಲಿ ಜನಿಸಿದ ಬಹುಮುಖ ಗಾಯಕ, ಐದು ದಶಕಗಳ ವೃತ್ತಿಜೀವನದ ಅವಧಿಯಲ್ಲಿಸಂಗೀತದ ಜೀವಾಳವಾಗಿದ್ದರು. ಪ್ರಪಂಚದ ಎಲ್ಲ ಕಡೆ ಅವರನ್ನು ಆರಾಧಿಸುತ್ತಾರೆ ಎಂದು ಸ್ಮರಿಸಿಕೊಂಡಿದ್ದಾರೆ.
ಕನ್ನಡದಲ್ಲೇ ಎಸ್ಪಿಬಿಗೆ ಸಂತಾಪ ಸೂಚಿಸಿ ಗಾಯಕಿ ಎಸ್. ಜಾನಕಿ ಕಣ್ಣೀರು
ಎಸ್ಪಿಬಿ ಸಂಗೀತ ಕ್ಷೇತ್ರಕ್ಕೆ ಮಾತ್ರ ಸಿಮೀತರಾಗಿರಲಿಲ್ಲ. ನಟನೆ, ಸಂಗೀತ ಸಂಯೋಜನೆ, ಚಿತ್ರ ನಿರ್ಮಾಣದಲ್ಲಿಯೂ ಅವರ ಕೊಡುಗೆ ಮರೆಯುವಂತೆ ಇಲ್ಲ. ಅವರ ನಿಧನವನ್ನು ಅರಗಿಸಿಕೊಳ್ಳಲು ಇನ್ನು ಹಲವು ದಿನ ಬೇಕು ಎಂದಿದ್ದಾರೆ.
ಲತಾ ಮಂಗೇಶ್ಕರ್, ಭೂಪೆನ್ ಹಜಾರಿಕಾ, ಬಿಸ್ಮಿಲ್ಲಾ ಖಾನ್ ಮತ್ತು ಭೀಮ್ ಸೇನ್ ಜೋಶಿ ಅವರಂತಹ ಇತರ ಸಂಗೀತಗಾರರಿಗೆ ಭಾರತರತ್ನ ಗೌರವ ಸಂದಿದೆ. ಎಸ್ಪಿಬಿ ಸಹ ಅದೆ ಹಾದಿಯಲ್ಲಿ ಇದ್ದಾರೆ ಎಂದು ರೆಡ್ಡಿ ಮನವರಿಕೆ ಮಾಡುವ ಯತ್ನ ಮಾಡಿದ್ದಾರೆ.
ಪದ್ಮಶ್ರೀ ಮತ್ತು ಪದ್ಮಭೂಷಣ ಗೌರವ ಪಡೆದಿರುವ ಎಸ್ಪಿ ಬಾಲಸುಬ್ರಹ್ಮಣ್ಯಂ 16 ಭಾಷೆಗಳಲ್ಲಿ 40,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆರು ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕೊರೋನಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ಗಾಯಕ ಕೊರೋನಾದಿಂದ ಮುಕ್ತಿ ಪಡೆದರೂ ಬಹುಅಂಗಾಂಗ ವೈಫಲ್ಯಕ್ಕೆ ಸಿಲುಕಿ ನಮ್ಮನ್ನೆಲ್ಲ ಅಗಲಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ